ಬ್ಯಾಟರಾಯನಪುರ : ಸೈಬರ್ ವಂಚನೆಗಳನ್ನು ತಡೆಗಟ್ಟುವ ದಿಸೆಯಲ್ಲಿ ನಗರದ ಡಿಜಿಕವಚ್ ಟೆಕ್ನಾಲಜೀಸ್ ಐಟಿ ಸಂಸ್ಥೆಯಿಂದ ಸಂಶೋದಿಸಿರುವ ‘ಕವಚ್’ ಎಂಬ ಮೊಬೈಲ್ ಆ್ಯಪ್ನ್ನು ಸಿಐಡಿ ಡಿಜಿಪಿ ಡಾ.ಪ್ರಣಬ್ ಮೊಹಾಂತಿ ಬುಧವಾರ ಜಕ್ಕೂರು ಸಮೀಪದ ಖಾಸಗಿ ಹೋಟೆಲ್ನಲ್ಲಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿ ಮೊಹಾಂತಿ ಅವರು, ಸೈಬರ್ ಅಪರಾಧಗಳ ಪತ್ತೆ ಮತ್ತು ತಡೆಗಟ್ಟುವ ನಿಟ್ಟಿನಲ್ಲಿ ‘ಕವಚ್’ ಆ್ಯಪ್ ಹೊಸ ಪ್ರಯತ್ನವಾಗಿದ್ದು, ನಾಗರೀಕರಿಗೆ ಇದರಿಂದ ಹೆಚ್ಚಿನ ನೆರವಾಗುವ ಮೂಲಕ ಸೈಬರ್ ಅಪರಾಧಗಳ ತಡೆಗೆ ಶಾಶ್ವತ ಪರಿಹಾರ ಸಿಗುವಂತಾಗಲಿ ಎಂದರು.ಡಿಜಿಕವಚ್ ಟೆಕ್ನಾಲಜೀಸ್ ಸಂಸ್ಥಾಪಕ ಫಣೀಂದ್ರ ಕುಮಾರ್ ಮಾತನಾಡಿ, ಸೈಬರ್ ಅಪರಾಧಗಳನ್ನು ತಡೆಯುವಲ್ಲಿ ಜಾಗೃತಿ ಅಗತ್ಯವಾಗಿದ್ದು, ಕವಚ್ ಆ್ಯಪ್ ಹಾಗೂ ಸಂಸ್ಥೆಯ ಜಾಗೃತಿ ಕಾರ್ಯಕ್ರಮಗಳ ಮೂಲಕ ನಕಲಿ ಕರೆ ಮತ್ತು ಸಂದೇಶಗಳನ್ನು ಗುರುತಿಸುವುದು, ಸುರಕ್ಷಿತ ಪಾಸ್ವರ್ಡ್ ಬಳಕೆ, ಆನ್ಲೈನ್ ವಂಚನೆಗಳನ್ನು ಮುಂಚಿತವಾಗಿ ಪತ್ತೆ ಹಚ್ಚುವಂತಹ ಸರಳ ಹಾಗೂ ಪ್ರಾಯೋಗಿಕ ವಿಧಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಡಿಜಿಕವಚ್ ಸಂಸ್ಥೆಯು ಸೈಬರ್ ಭದ್ರತಾ ಸೇವೆಗಳು, ಸೈಬರ್ ಜಾಗೃತಿ ಕಾರ್ಯಕ್ರಮಗಳು, ಸೈಬರ್ ವಿಮೆ ಹಾಗೂ ವಿಮೆ ಪರಿಹಾರ (ಕ್ಲೇಮ್) ಪ್ರಕ್ರಿಯೆಗೆ ಸಮಗ್ರ ನೆರವು ಒದಗಿಸುತ್ತದೆ. ವ್ಯಕ್ತಿಗಳಿಗೆ, ಉದ್ಯಮಿಗಳಿಗೆ, ಸ್ಟಾರ್ಟ್ಅಪ್ಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಗತ್ಯಗಳಿಗೆ ಅನುಗುಣವಾಗಿ ಸೇವೆಗಳನ್ನು ರೂಪಿಸಲಾಗಿದ್ದು, ಸೈಬರ್ ದಾಳಿ ಅಥವಾ ವಂಚನೆ ಸಂಭವಿಸಿದ ವೇಳೆ ದೂರು ದಾಖಲಿಸುವುದರಿಂದ ಹಿಡಿದು ವಿಮೆ ಕ್ಲೇಮ್ ಪಡೆಯುವವರಗಿನ ಸಂಪೂರ್ಣ ಪ್ರಕ್ರಿಯೆ ಯಲ್ಲಿ ಸಂಸ್ಥೆಯ ತಜ್ಞರು ಮಾರ್ಗ ದರ್ಶನ ನೀಡಲಿದ್ದು, ಸಂತ್ರಸ್ತರು ಶೀಘ್ರವಾಗಿ ನಷ್ಟದಿಂದ ಹೊರ ಬರಲು ನೆರವಾಗಲಿದೆ ಎಂದು ಆಪ್ ನ ಕಾರ್ಯ ನಿರ್ವಹಣಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಕಾನೂನು ಜಾರಿ ಸಂಸ್ಥೆಗಳು, ತಂತ್ರಜ್ಞಾನ, ಶಿಕ್ಷಣ, ಹಣಕಾಸು ಸೇವೆಗಳು ಹಾಗೂ ಸೈಬರ್ ಭದ್ರತಾ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು.