ತಂಬಾಕಿನಿಂದ ಮಾರಣಾಂತಿಕ ರೋಗಕ್ಕೆ ಆಹ್ವಾನ: ಹನುಮಂತಗೌಡ ಗೊಲ್ಲರ

KannadaprabhaNewsNetwork | Published : Jun 2, 2025 12:15 AM
ತಂಬಾಕು ಎಂಬ ಹೆಮ್ಮಾರಿ ವಿಶ್ವವ್ಯಾಪಿಯಾಗಿದ್ದು, ಆರೋಗ್ಯವಂತ ನಾಗರಿಕ ಸಮಾಜಕ್ಕೆ ಕಂಟಕಪ್ರಾಯವಾಗಿದೆ.

ಹಾವೇರಿ: ತಂಬಾಕಿನ ಉತ್ಪನ್ನಗಳನ್ನು ಬಳಸುವ ಮೂಲಕ ಅಪಾಯಕಾರಿ ವಿಷ ದೇಹದೊಳಕ್ಕೆ ಸೇರಿಕೊಳ್ಳುವುದರಿಂದ ಕ್ಯಾನ್ಸರ್‌ನಂಥ ಮಾರಣಾಂತಿಕ ರೋಗಗಳಿಗೆ ಆಹ್ವಾನ ಕೊಟ್ಟಂತೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.ತಾಲೂಕಿನ ಅಗಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು. ಜನರು ಮೋಜು- ಮಸ್ತಿಗಾಗಿ ಮೊದಲು ಸಿಗರೇಟ್ ಸುಡುತ್ತಾರೆ. ಆಮೇಲೆ ಅದು ಅವರನ್ನೇ ಸುಡಲಾರಂಭಿಸುತ್ತದೆ. ಕೊನೆ ಕೊನೆಗೆ ಅದು ಅವರ ಚಂದದ ಬದುಕಿಗೆ ಕೊಳ್ಳಿ ಇಡುತ್ತದೆ. ತಂಬಾಕಿನಲ್ಲಿ ನಿಕೋಟಿನ್ ವಿಷ ಪದಾರ್ಥ ಇರುವ ಅಂಶ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ. ಸಿಗರೇಟ್‌ನಲ್ಲಿ ಸುಮಾರು ನಾಲ್ಕು ಸಾವಿರ ವಿಷ ಪದಾರ್ಥಗಳು ಇದ್ದು, ಅವುಗಳಲ್ಲಿ 400ಕ್ಕೂ ಅಧಿಕ ಪದಾರ್ಥಗಳು ಕ್ಯಾನ್ಸರ್ ಕಾರಕಗಳಾಗಿವೆ ಎಂದರು. ತಂಬಾಕು ಎಂಬ ಹೆಮ್ಮಾರಿ ವಿಶ್ವವ್ಯಾಪಿಯಾಗಿದ್ದು, ಆರೋಗ್ಯವಂತ ನಾಗರಿಕ ಸಮಾಜಕ್ಕೆ ಕಂಟಕಪ್ರಾಯವಾಗಿದೆ. ಗರ್ಭಿಣಿಯರು ಬೇರೆಯವರು ಬಿಟ್ಟ ಹೋಗೆ ಸೇವಿಸಿದರೆ ಗರ್ಭಸ್ತ ಶಿಶುವಿಗೂ ಕ್ಯಾನ್ಸರ್ ತಗಲುವ ಸಾಧ್ಯತೆ ಇದೆ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ, ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ರೈತರ ಹಿತದೃಷ್ಟಿ ಮತ್ತು ಆದಾಯದ ದೃಷ್ಟಿಕೋನದಿಂದ ನೋಡಿದಾಗ ತಂಬಾಕು ಬೆಳೆಯನ್ನು ನಿಷೇಧಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಹೀಗಾಗಿ ಅದು ತಂಬಾಕು ಬೆಳೆಗೆ ಪ್ರೋತ್ಸಾಹ ಕೊಡುತ್ತಲೇ ಇರುತ್ತದೆ. ಅಲ್ಲದೆ ಲಕ್ಷಾಂತರ ಕೋಟಿ ವ್ಯವಹಾರ ತಂಬಾಕು ಕಂಪನಿಗಳ ಲಾಬಿಗೆ ಎಲ್ಲ ಸರ್ಕಾರಗಳು ಕುಣಿಯುತ್ತಲೇ ಬಂದಿವೆ. ಮುಂದೆಯೂ ಕುಣಿಯುತ್ತವೆ. ಶಾಲಾ- ಕಾಲೇಜುಗಳು, ಧಾರ್ಮಿಕ ಸಂಸ್ಥೆಗಳು, ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.ವಲಯ ಮೇಲ್ವಿಚಾರಕ ಸಂತೋಷ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ತಾಯಂದಿರು ಮಕ್ಕಳಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಬೇಕು. ತಂಬಾಕುರಹಿತ ಸಮಾಜ ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದರು.ಸ್ವಸಹಾಯ ಸಂಘದ 40ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು. ಒಕ್ಕೂಟದ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪ್ರತಿನಿಧಿ ನಿಂಗಪ್ಪ ಕಮಾಟರ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಲಲಿತಾ ಬೆಳವಿಗಿ ವಂದಿಸಿದರು.ಬೆಳೆಗಳಲ್ಲಿ ಕಳೆನಾಶಕ ಬಳಕೆಗೆ ಸಲಹೆ

ಹಾವೇರಿ: ತಾಲೂಕಿನಲ್ಲಿ ರೈತರು ಮುಂಗಾರು ಬೆಳೆಗಳ ಬಿತ್ತನೆ ಚುರುಕುಗೊಳಿಸಿದ್ದು, ಸಾರಜನಕದ ಪ್ರಮಾಣ ಹೆಚ್ಚಾಗಿ ಗೋವಿನಜೋಳಕ್ಕೆ ಲದ್ದಿ ಹುಳು, ಕಾಂಡಕೊರಕ ಹಾಗೂ ಇನ್ನಿತರ ರೋಗ, ಕೀಟಗಳ ಬಾಧೆ ಹೆಚ್ಚಾಗುತ್ತದೆ. ಈ ಕಾರಣದಿಂದ ಕಳೆನಾಶಕಗಳನ್ನು ಯೂರಿಯಾ ರಸಗೊಬ್ಬರಗಳಲ್ಲಿ ಮಿಶ್ರಣ ಮಾಡಿ ಜಮೀನಿನಲ್ಲಿ ಎರಚಬಾರದು ಎಂದು ಸಹಾಯಕ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಸಲಹೆ ನೀಡಿದ್ದಾರೆ.

ಮುಸುಕಿನಜೋಳ ಮತ್ತು ಸೋಯಾಅವರೆ ಬೆಳೆಗಳಲ್ಲಿ ಬಿತ್ತನೆ ನಂತರ ಅಟ್ರಾಜಿನ್ ಅಥವಾ ಪೆಂಡಿಮಿಥಲಿನ್ ಕಳೆನಾಶಕಗಳನ್ನು ಯೂರಿಯಾ ರಸಗೊಬ್ಬರದಲ್ಲಿ ಮಿಶ್ರಣ ಮಾಡಿ ಜಮೀನಿನಲ್ಲಿ ಎರಚುತ್ತಿರುವುದು ಕಂಡುಬರುತ್ತಿದೆ. ಈ ರೀತಿ ಮಾಡುವುದರಿಂದ ಕಳೆಗಳು ಸಂಪೂರ್ಣವಾಗಿ ನಿಯಂತ್ರಣವಾಗುವುದಿಲ್ಲ. ಕಳೆನಾಶಕ ಮಿಶ್ರಿತ ಯೂರಿಯಾ ಹರಳುಗಳು ಬಿದ್ದ ಜಾಗದಲ್ಲಿ ಮಾತ್ರ ಕಳೆಗಳು ನಿಯಂತ್ರಣವಾಗಿ ಉಳಿದ ಜಾಗಗಳಲ್ಲಿ ಕಳೆಗಳು ಬೆಳೆಯುತ್ತವೆ ಹಾಗೂ ಅನಾವಶ್ಯಕವಾಗಿ ಯೂರಿಯಾ ರಸಗೊಬ್ಬರ ಪೋಲಾಗುತ್ತದೆ ಎಂದು ತಿಳಿಸಿದ್ದಾರೆ.ಗೋವಿನಜೋಳದಲ್ಲಿ ಕಳೆನಾಶಕ ಬಳಕೆ: ಎಕರೆಗೆ ಒಂದು ಕಿ.ಗ್ರಾಂ ಅಟ್ರಾಜಿನ್ 50 ಡಬ್ಲ್ಯುಪಿ ಅಥವಾ ಅಟ್ರಾಜಿನ್ 50 ಡಬ್ಲ್ಯುಪಿ ಜತೆಗೆ ಒಂದು ಲೀಟರ್ ಪೆಂಡಿಮಿಥಾಲಿನ್ 30 ಇಸಿ ಕಳೆನಾಶಕವನ್ನು(ಟ್ಯಾಂಕ್ ಮಿಶ್ರಣ ಮಾಡಿ) 300 ಲೀಟರ್‌ನಲ್ಲಿ ಕರಗಿಸಿ, ಬಿತ್ತನೆ ಆದ ದಿನ ಅಥವಾ ಮರುದಿನ ಮಣ್ಣಿನ ಮೇಲೆ ಸಿಂಪಡಿಸಬೇಕು. 20- 25 ದಿನಗಳ ನಂತರ(ಕಳೆಗಳು 2- 3 ಎಲೆಗಳ ಹಂತದಲ್ಲಿ) ಟೆಂಬೂಟ್ರೆಯಾನ್ ಶೇ. 34.4, ಎಸ್‌ಸಿ 114 ಮಿಲೀ ಅಥವಾ 140 ಮಿಲೀ ಮಿಸೋಟ್ರಯೋನ್, ಶೇ. 40 ಎಸ್‌ಸಿ ಕಳೆನಾಶಕಗಳನ್ನು ಪ್ರತಿ ಎಕರೆ 300 ಲೀಟರ್ ನೀರನ್ನು ಉಪಯೋಗಿಸಿ ಸಿಂಪರಣೆ ಮಾಡುವುದರಿಂದ ಕಳೆಗಳ ಹತೋಟಿ ಸಾಧ್ಯ ಎಂದು ತಿಳಿಸಿದ್ದಾರೆ.ಸೋಯಾಅವರೆ ಬೆಳೆಯಲ್ಲಿ ಕಳನಾಶಕ ಬಳಕೆ: ಬಿತ್ತನೆಯಾದ ದಿನ ಅಥವಾ ಮರುದಿನ 1.6 ಲೀಟರ್ ಅಲಾಕ್ಲೋರ್ 50 ಇಸಿ ಅಥವಾ 1.3 ಲೀಟರ್ ಪೆಂಡಿಮಿಥಾಲಿನ್ 30 ಇಸಿ ಅನ್ನು 300 ಲೀಟರ್ ನೀರಿನಲ್ಲಿ ಒಂದು ಎಕರೆ ಪ್ರದೇಶಕ್ಕೆ ಮಣ್ಣಿನ ಮೇಲೆ ಸಿಂಪಡಿಸಬೇಕು. ಕ್ಲೋರಿಮ್ಯೂರಾನ್ ಕಳೆನಾಶಕವನ್ನು ಬಿತ್ತಿದ 15 ದಿವಸಗಳ ವರೆಗೆ ಸಿಂಪರಣೆ ಮಾಡಬಹುದು.

20- 25 ದಿನಗಳ ಅವಧಿಯಲ್ಲಿ ಅಂತರ ಬೇಸಾಯ ಮಾಡುವುದರಿಂದ ಕಳೆಗಳನ್ನು ನಿಯಂತ್ರಿಸಿ ಮಣ್ಣು ಏರಿಸಲು ಅನಕೂಲವಾಗುತ್ತದೆ. ಕಳೆನಾಶಕಗಳನ್ನು ಯೂರಿಯಾ ರಸಗೊಬ್ಬರದಲ್ಲಿ ಮಿಶ್ರಣ ಮಾಡಿ ಎರಚುವುದರ ಬದಲಾಗಿ ಸಿಂಪರಣೆ ಮಾಡುವುದರಿಂದ ಕಳೆಗಳನ್ನು ಹತೋಟಿಗೆ ತರಬಹುದು. ಸಿಂಪರಣೆ ಮಾಡಿದ ಜಾಗವನ್ನು ಕಾಲ್ ತುಳಿತ ಮಾಡದೇ ಹಿಮ್ಮುಖವಾಗಿ ನಡೆಯುತ್ತಾ ಸಿಂಪರಣೆ ಮಾಡುವುದರಿಂದ ಸಿಂಪರಣೆ ಮಾಡಿದ ಜಾಗದಲ್ಲಿ ಕಳೆಗಳು ಮರು ಹುಟ್ಟುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.