ಕನ್ನಡಪ್ರಭ ವಾರ್ತೆ, ತುಮಕೂರುಕೋಲ್ಕತ್ತಾದ ಆರ್ಜಿಕರ್ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣ ನಡೆದ ಕರಾಳ ದಿನದ ಸ್ಮರಣೆಗಾಗಿ ದೇಶದಲ್ಲಿರುವ ಎಲ್ಲಾ ಪ್ರಸೂತಿ ಮತ್ತು ಸ್ತ್ರಿರೋಗ ವೈದ್ಯರು ಆಗಸ್ಟ್ 9 ನ್ನು ಅಭಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಪ್ರಸೂತಿ ಮತ್ತು ಸ್ತ್ರಿರೋಗ ವೈದ್ಯರ ಸಂಘದ ಅಧ್ಯಕ್ಷ ಡಾ.ಬಸವರಾಜು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪ್ರತಿರ್ಷತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳನ್ನು ತಡೆಯುವ ಸಲುವಾಗಿ ಹೊಸ ಕಾಯ್ದೆಯನ್ನೇ ಜಾರಿಗೆ ತಂದರೂ, ಇಂದಿಗೂ ರೋಗಿಗಳ ಸಂಬಂಧಿಸಿಕರು, ಸಾರ್ವಜನಿಕರು ಸೇವೆಯ ಲೋಪದೋಷಗಳನ್ನೇ ನೆಪ ಮಾಡಿಕೊಂಡು ವೈದ್ಯರ ಮೇಲೆ ಹಲ್ಲೆ ನಡೆಸುವುದನ್ನು ಮುಂದುವರೆಸಿದ್ದಾರೆ. ಹಾಗಾಗಿ ಹೊಸ ಕಾಯ್ದೆಯ ಪ್ರಕಾರ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡುವ ವ್ಯಕ್ತಿಗಳಿಗೆ ಆಗುವ ಶಿಕ್ಷೆ ಮತ್ತು ದಂಡದ ಪ್ರಮಾಣ ಹಾಗೂ ಇಂತಹ ತಪ್ಪುಗಳು ನಡೆದಾಗ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅಭಯ ದಿನ ಅಂಗವಾಗಿ ದೇಶದಾದ್ಯಂತ ಮಾಡಲಾಗುತ್ತಿದೆ ಎಂದರು.ಜನರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರೂ ನಿರೀಕ್ಷಿಸುವುದು ಸಹಜ. ಯಾವ ವೈದ್ಯರು ರೋಗಿ ಸಾಯಬೇಕೆಂದು ಬಯಸುವುದಿಲ್ಲ. ಎಲ್ಲರೂ ಜೀವ ಉಳಿಸುವ ನಿಟ್ಟಿನಲ್ಲಿ ತಾವು ಕಷ್ಟಪಟ್ಟ ಕಲಿತ ವಿದ್ಯೆಯನ್ನು ಅವರ ಮೇಲೆ ಪ್ರಯೋಗಿಸುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಕೈ ಮೀರಿ ಹೋಗುತ್ತದೆ. ಇಂತಹ ವೇಳೆಯಲ್ಲಿ ರೋಗಿಗಳ ಕಡೆಯವರು ಸಹನೆ, ತಾಳ್ಮೆ ಕಳೆದುಕೊಳ್ಳದೆ ವಾಸ್ತವವನ್ನು ಅರ್ಥಮಾಡಿ ಕೊಂಡು ವರ್ತಿಸಿದರೆ ಇಂತಹ ಅನಾಹುತಗಳು ನಡೆಯುವುದಿಲ್ಲ ಎಂದರು. ಅಭಯ ದಿನದ ಅಂಗವಾಗಿ ಆಗಸ್ಟ್ 9 ರಂದು ಜಿಲ್ಲೆಯ ಎಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರು ಐಎಂಎ ಹಾಲ್ನಲ್ಲಿ ಸೇರಿ ಅಭಯ ದಿನದ ಪ್ರಯುಕ್ತ ಶ್ರದ್ದಾಂಜಲಿ ಸಲ್ಲಿಸಲಾಗುವುದು ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಜೀವನ್ ರೆಡ್ಡಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರಾದ ಡಾ.ನಾಗಲಕ್ಷ್ಮೀ, ಡಾ. ದ್ವಾರಕನಾಥ್, ಇಂದಿರಾ ಶಿವಾನಂದ್, ಡಾ.ಗಿರೀಶ್, ಡಾ.ನಾಗೇಶ್, ಡಾ. ಪಾವನ ಸೇರಿದಂತೆ ಹಲವರು ಉಪಸ್ಥಿತರಿದ್ದರು.