ಇಂದಿನ ಸಮಾಜಕ್ಕೆ ಸಹಿಷ್ಣುತೆ ಸಾರುವ ಸಾಹಿತ್ಯ ಅಗತ್ಯ: ಎಚ್‌.ಆರ್‌.ಅರವಿಂದ್‌

KannadaprabhaNewsNetwork |  
Published : Nov 17, 2025, 12:30 AM IST
16ಕೆಎಂಎನ್‌ಡಿ-4ಮಂಡ್ಯದ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ರಾಜ್ಯಮಟ್ಟದ ಕವಿ ಕಾವ್ಯ ಮೇಳ, ಕೋಲ್ಮಿಂಚು ಕವನ ಸಂಕಲನ ಬಿಡುಗಡೆ-ಕನ್ನಡ ರಾಜ್ಯೋತ್ಸವ ಪುರಸ್ಕಾರ ಸಮಾರಂಭವನ್ನು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಾಜವನ್ನು ತಿದ್ದುವ ತಾಕತ್ತಿರುವುದು ಸಾಹಿತಿಗಳು, ಕವಿಗಳಿಗಿದೆ. ಅಂತಹ ಕವಿಗಳು, ಬರಹಗಾರರು ಸಮಾಜವನ್ನು ಸುಧಾರಣೆಗೆ ತರಲು ಪ್ರಯತ್ನಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಯುವ ಸಾಹಿತಿಗಳು, ಹೊಸತಲೆ ಮಾರಿನ ಬರಹಗಾರರು ಚಿಂತನೆ ನಡೆಬೇಕು. ಬದಲಾವಣೆಯ ದಿಕ್ಸೂಚಿಗಳಾಗಿ ಹೊರಹೊಮ್ಮಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಇಂದಿನ ಸಮಾಜಕ್ಕೆ ಸಹಿಷ್ಣುತೆ ಸಂದೇಶ ಸಾರುವ ಸಾಹಿತ್ಯ ಅಗತ್ಯವಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಹೇಳಿದರು.

ನಗರದಲ್ಲಿರುವ ಗಾಂಧಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿ ಕಾವ್ಯ ಮೇಳ ಹಾಗೂ ಕೋಲ್ಮಿಂಚು ಕವನ ಸಂಕಲನ ಬಿಡುಗಡೆ- ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ೭೦ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶದಲ್ಲಿ ಅಸಹಿಷ್ಣತೆ ಇಲ್ಲ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ, ರಾಷ್ಟಕವಿ ಕುವೆಂಪು ಸಾರಿದ ವಿಶ್ವಮಾನವ ಸಂದೇಶವನ್ನು ಇಂದಿನವರು ಅಳವಡಿಸಿಕೊಳ್ಳಬೇಕಿದೆ, ಇಂದಿನ ಸಾಹಿತಿಗಳು ಸಹಿಷ್ಣತೆ ಸಾರುವ ಸಾಹಿತ್ಯ, ಕೃತಿಗಳನ್ನು ರಚಿಸಲಿ, ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯುವ, ತುಂಡು ಮಾಡುವಂತಹ ಕೆಟ್ಟ ರಾಜಕೀಯ ವ್ಯವಸ್ಥೆಯನ್ನು ಎತ್ತಿ ತೋರಲಿ ಎಂದರು.

ಸಮಾಜವನ್ನು ತಿದ್ದುವ ತಾಕತ್ತಿರುವುದು ಸಾಹಿತಿಗಳು, ಕವಿಗಳಿಗಿದೆ. ಅಂತಹ ಕವಿಗಳು, ಬರಹಗಾರರು ಸಮಾಜವನ್ನು ಸುಧಾರಣೆಗೆ ತರಲು ಪ್ರಯತ್ನಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಯುವ ಸಾಹಿತಿಗಳು, ಹೊಸತಲೆ ಮಾರಿನ ಬರಹಗಾರರು ಚಿಂತನೆ ನಡೆಬೇಕು. ಬದಲಾವಣೆಯ ದಿಕ್ಸೂಚಿಗಳಾಗಿ ಹೊರಹೊಮ್ಮಬೇಕು ಎಂದರು.

ಬಳಿಕ ಮಾತನಾಡಿದ ಕಸಿವೇ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಕಳೆದ ೩೦ವರ್ಷಗಳಿಂದ ಕಸ್ತೂರಿ ಸಿರಿಗನ್ನಡ ವೇದಿಕೆಯು ಸಾಹಿತ್ಯ ಸೇವೆ ಮಾಡುತ್ತ ಬರುತ್ತಿದೆ. ಸಾಕಷ್ಟು ಕವಿಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಟ್ಟಿದೆ, ರಾಜ್ಯಮಟ್ಟದ ಕವಿ ಕಾವ್ಯ ಮೇಳಕ್ಕೆ ದೂರದ ಜಿಲ್ಲೆಗಳಿಂದಲೂ ಕವಿಗಳು ಬಂದಿದ್ದಾರೆ, ಇದು ಹೆಮ್ಮೆಯ ವಿಷಯ ಎಂದರು.

ಇದೇ ಸಂದರ್ಭದಲ್ಲಿ ಕೋಲ್ಮಿಂಚು ಕವನ ಸಂಕಲನ ಬಿಡುಗಡೆಯಾಯಿತು. ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ೭೦ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕವಿಗಳು ಕವನ ವಾಚಿಸಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷ ಸಾಹಿತಿ ಪಿ.ಸುಂದ್ರಪ್ಪ, ಜಾನಪದ ಸಾಹಿತಿ ಕೆ.ಪಿ.ವೀರಪ್ಪ, ಪ್ರಾಂಶುಪಾಲ ಮೋಹನ್ ಕುಮಾರ್, ಕಸಿವೇ ರಾಜ್ಯ ಕಾರ್ಯದರ್ಶಿ ಸುಜಾತ ಕೃಷ್ಣ, ಮಹಾಕವಿ ಎಚ್.ಎಲ್.ಶಿವಬಸಪ್ಪ ಹೊರೆಯಾಲ, ಕಸಿವೇ ತಾಲೂಕು ಅಧ್ಯಕ್ಷ ಕೆ.ಚಿಕ್ಕತಿಮ್ಮಯ್ಯ, ಪ್ರಗತಿಪರ ಚಿಂತಕ ಎ.ಆರ್.ಕುಪ್ಪಸ್ವಾಮಿ, ವಕೀಲೆ ಸುಮಿತ್ರತಿಮ್ಮೆಶ್, ಕಾಂಗ್ರೆಸ್ ಮುಖಂಡ ಉಮೇಶ್ ದ್ಯಾಪಸಂದ್ರ, ವಕೀಲ ಎಂ.ಗುರುಪ್ರಸಾದ್, ನಿವೃತ್ತ ತಹಸೀಲ್ದಾರ್ ಕೆ.ಬಿ.ಪಾಪಣ್ಣ, ಕಸಿವೇ ರಾಜ್ಯ ಉಪಾಧ್ಯಕ್ಷೆ ಮಂಜುಳಾರಮೇಶ್, ಹಾವೇರಿ ಜಿಲ್ಲಾಧ್ಯಕ್ಷ ನಾಗರಾಜು, ಮಂಡ್ಯ ಯಶು, ಕ್ಷಮಾ, ಪ್ರಜ್ವಲ್ ಸೇರಿದಂತೆ ಹಲವರಿದ್ದರು.

ಗುರುದೇವ ಲಲಿತಾ ಕಲಾ ಅಕಾಡೆಮಿಗೆ ಗಂಧರ್ವ ಮಹಾ ವಿದ್ಯಾಲಯ ಮಾನ್ಯತೆ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಗುರುದೇವ ಲಲಿತಕಲಾ ಅಕಾಡೆಮಿ ಪುಣೆಯ ಗಂಧರ್ವ ಮಹಾ ವಿದ್ಯಾಲಯ ಮಾನ್ಯತೆಯನ್ನು ಪಡೆದುಕೊಂಡಿದೆ. ಅದರಂತೆ ದೇಶಾದ್ಯಂತ ನಡೆಯುವ ಗಂಧರ್ವ ಮಹಾವಿದ್ಯಾಲಯದ ಭರತನಾಟ್ಯ ಪರೀಕ್ಷೆಗಳಾದ

ಪ್ರವೇಶಿಕ ಪೂರ್ಣ, ಮಧ್ಯಮ ಪ್ರಥಮ, ಮಧ್ಯಮ ಪೂರ್ಣ, ವಿಶಾರದ ಪ್ರಥಮ ಮತ್ತು ವಿಶಾರದ ಪೂರ್ಣ ಲಿಖಿತ ಪರೀಕ್ಷೆಯನ್ನು ಭಾನುವಾರ ನಗರದ ಡ್ಯಾಫೋಡಿಲ್ಸ್‌ ಶಾಲೆಯ ಆವರಣದಲ್ಲಿ ನಡೆಸಲಾಯಿತು.

ಈ ಬಾರಿ ಲಿಖಿತ ಪರೀಕ್ಷೆಗೆ ಸುಮಾರು 192 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಾಯೋಗಿಕ ಪರೀಕ್ಷೆಯಲ್ಲಿ ಸೇರಿ ಒಟ್ಟು 594 ವಿದ್ಯಾರ್ಥಿಗಳು ವಿವಿಧ ತರಬೇತಿ ಕೇಂದ್ರಗಳಿಂದ ಹಾಗೂ ಗುರುದೇವ ಕೇಂದ್ರದಿಂದ ಪರೀಕ್ಷೆಗೆ ಹಾಜರಾಗುತ್ತಿರುವುದು ವಿಶೇಷ. ಪ್ರಾಯೋಗಿಕ ಪರೀಕ್ಷೆಗಳು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ ನಡೆಯಲಿವೆ.

PREV

Recommended Stories

ಶಿವಮೊಗ್ಗದಲ್ಲಿ ಮುಂದುವರಿದ ಕಾಡಾನೆ ಉಪಟಳ
ಭೀಮ್‌ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಅಕ್ರಮ: ರಾಘವೇಂದ್ರ ನಾಯ್ಕ