ಇಂದು ನಾಳೆ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ಪ್ರಾಣ ಪ್ರತಿಷ್ಠಾಪನೆ: ಗಣೇಶಪ್ಪ

KannadaprabhaNewsNetwork |  
Published : Feb 16, 2025, 01:45 AM IST
15ಕೆಡಿವಿಜಿ6, 7-ದಾವಣಗೆರೆ ಹೊರ ವಲಯದ ಹಳೆ ಕುಂದುವಾಡ ಗ್ರಾಮದಲ್ಲಿ ಪ್ರಾಣ ಪ್ರತಿಷ್ಟಾಪನೆಗೊಳ್ಳಲಿರುವ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ಶ್ರೀ ಆಂಜನೇಯನ ಆಕರ್ಷಕ ರೂಪ. .............15ಕೆಡಿವಿಜಿ8-ದಾವಣಗೆರೆ ಹೊರ ವಲಯದ ಹಳೆ ಕುಂದುವಾಡ ಗ್ರಾಮದಲ್ಲಿ ದೇವಸ್ಥಾನ ಲೋಕಾರ್ಪಣೆ ಕುರಿತಂತೆ ಶ್ರೀ ಬಸವ ಆಂಜನೇಯ ಅಭಿವೃದ್ದಿ ಸಮಿತಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹಳೆ ಕುಂದುವಾಡ ಗ್ರಾಮದಲ್ಲಿ ಶ್ರೀರಾಮಧೂತ ಶ್ರೀ ಆಂಜನೇಯ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ಭವ್ಯ ಮುಂದಿರ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಫೆ.16ರಂದು ಉಭಯ ದೇವರ ಅದ್ಧೂರಿ ಮೆರವಣಿಗೆ, ಫೆ.17ರಂದು ಪ್ರಾಣ ಪ್ರತಿಷ್ಠಾಪನೆ, ಧಾರ್ಮಿಕ ಸಮಾವೇಶ ನಡೆಯಲಿದೆ.

- ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿಯಿಂದ ಮೂಡಿರುವ ಶ್ರೀ ಆಂಜನೇಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹಳೆ ಕುಂದುವಾಡ ಗ್ರಾಮದಲ್ಲಿ ಶ್ರೀರಾಮಧೂತ ಶ್ರೀ ಆಂಜನೇಯ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ಭವ್ಯ ಮುಂದಿರ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಫೆ.16ರಂದು ಉಭಯ ದೇವರ ಅದ್ಧೂರಿ ಮೆರವಣಿಗೆ, ಫೆ.17ರಂದು ಪ್ರಾಣ ಪ್ರತಿಷ್ಠಾಪನೆ, ಧಾರ್ಮಿಕ ಸಮಾವೇಶ ನಡೆಯಲಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಶ್ರೀ ಬಸವ ಆಂಜನೇಯ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ ಮಾತನಾಡಿ, ಅಯೋಧ್ಯೆಯ ಶ್ರೀರಾಮಲಲ್ಲಾನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಶ್ರೀ ಶ್ರೀ ಆಂಜನೇಯ ಮೂರ್ತಿ ಕೆತ್ತಿದ್ದಾರೆ. ಬಾಲರಾಮನ ವಿಗ್ರಹದಷ್ಟೇ ಆಕರ್ಷಕವಾಗಿ ಶ್ರೀ ಆಂಜನೇಯ ಮೂರ್ತಿ ಮೂಡಿಬಂದಿದೆ ಎಂದರು.

ಶ್ರೀ ಬಸವ ಆಂಜನೇಯ ಅಭಿವೃದ್ಧಿ ಸಮಿತಿಯಿಂದ ಗ್ರಾಮಸ್ಥರೇ ದೇಣಿಗೆ ನೀಡಿ, ಸುಮಾರು ₹5.5 ಕೋಟಿ ವೆಚ್ಚದಲ್ಲಿ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ದೇಗುಲಗಳನ್ನು ನಿರ್ಮಿಸಿದ್ದಾರೆ. ಶ್ರೀ ಆಂಜನೇಯನ ವಿಗ್ರಹ ಭಕ್ತರನ್ನು ಕೈಬೀಸಿ ಕರೆಯುವಂತೆ ಕೆತ್ತಲ್ಪಟ್ಟಿದೆ. ಮೈಸೂರಿನಿಂದ ಹಳೆ ಕುಂದುವಾಡ ಗ್ರಾಮಕ್ಕೆ ವಿಗ್ರಹವನ್ನು ತರಲಾಗಿದ್ದು, ಗ್ರಾಮದಲ್ಲಿ ಮೆರವಣಿಗೆ ಮಾಡಿ, ಗ್ರಾಮಸ್ಥರು ಧನ್ಯತೆ ಮೆರೆದಿದ್ದಾರೆ ಎಂದರು.

ಇಡೀ ದೇವಸ್ಥಾನಗಳನ್ನು ಕಲ್ಲಿನಲ್ಲೇ ನಿರ್ಮಾಣ ಮಾಡಿದ್ದು, ಪಕ್ಕದಲ್ಲೇ ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ. ತಮಿಳುನಾಡಿನ ಶಿಲ್ಪಿಗಳಾದ ಎಸ್.ವಡಿವೇಲು, ಕೆ.ಆರ್.ಮಾರಿಯಪ್ಪನ್‌ ದೇಗುಲಗಳನ್ನು ಕಟ್ಟಿದ್ದಾರೆ. ಐದು ದಿನ ಇಡೀ ಗ್ರಾಮಸ್ಥರು, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಆಂಧ್ರದ ತಿರುಪತಿ ದೇವಸ್ಥಾನ ಹಾಗೂ ಪೂರ್ವ ಗೋಧಾವರಿಯ ಪಂಡಿತರಿಂದ ದೇವಯಜ್ಞ, ವಿವಿಧ ಹೋಮಗಳ ಮೂಲಕ ದೇವರ ಪ್ರಾಣ ಪ್ರತಿಷ್ಟಾಪನೆಯಾಗಲಿದೆ ಎಂದರು.

ಈಗಾಗಲೇ ಗ್ರಾಮದಲ್ಲಿ 41 ದಿನಗಳ ಕಾಲ ಮದ್ಯಪಾನ, ಮಾಂಸ ಮಾರಾಟ, ಮಾಂಸಾಹಾರ ಸೇವನೆ ಸಂಪೂರ್ಣವಾಗಿ ನಿಷೇಧಿಸಿದ್ದು, ಗ್ರಾಮಸ್ಥರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ಫೆ.16ರಂದು ಕುಂಭದೊಂದಿಗೆ ಅದ್ಧೂರಿ ಮೆರವಣಿಗೆ ನೆಯಲಿದೆ. 17ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ, ಕಾಗಿನೆಲೆ ನಿರಂಜನಾನಂದಪುರಿ ಶ್ರೀ, ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಶ್ರೀ, ವಿರಕ್ತ ಮಠದ ಬಸವಪ್ರಭು ಶ್ರೀ, ಚಂದ್ರಗಿರಿ ಮಠದ ಮುರಳೀಧರ ಶ್ರೀ, ಪಂಚಮಸಾಲಿ ಪೀಠದ ವಚನಾನಂದ ಶ್ರೀ, ರಾಜನಹಳ್ಳಿ ಪ್ರಸನ್ನಾನಂದಪುರಿ ಶ್ರೀ, ಆವರಗೊಳ್ಳ ಓಂಕಾರ ಶಿವಾಚಾರ್ಯ ಶ್ರೀ, ಮಾದಾರ ಚನ್ನಯ್ಯ ಶ್ರೀ, ಬಸವ ಮಾಚಿದೇವ ಶ್ರೀ, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಶ್ರೀ, ಛಲವಾದಿ ಪೀಠ ದ ಬಸವ ನಾಗಿದೇವ ಶ್ರೀ, ಹಳೇ ಕುಂದುವಾಡದ ಕರಿಬಸವೇಶ್ವರ ದೇವಸ್ಥಾನ ಧರ್ಮಾಧಿಕಾರಿ ರಾಜಣ್ಣ ಸಾನಿಧ್ಯ ವಹಿಸುವರು ಎಂದು ವಿವರಿಸಿದರು.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ, ಸಮಾರಂಭ ಉದ್ಘಾಟಿಸುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು, ದಾನಿಗಳು, ಅಧಿಕಾರಿಗಳು, ಗ್ರಾಮಸ್ಥರು, ಭಕ್ತರು ಆಗಮಿಸದ್ದಾರೆ. ಫೆ.18ರಂದು ಹಳೇ ಕುಂದುವಾಡ ಗ್ರಾಮದಲ್ಲಿ ಸಾವು ತಂದ ಸೌಭಾಗ್ಯ ನಾಟಕ ಪ್ರದರ್ಶನವಾಗಲಿದೆ ಎಂದು ಎಚ್.ಜಿ.ಗಣೇಶಪ್ಪ ಹೇಳಿದರು.

ಶ್ರೀ ಬಸವ ಆಂಜನೇಯ ಅಭಿವೃದ್ದಿ ಸಮಿತಿ ಕಾರ್ಯದರ್ಶಿ ಎಚ್.ಜಿ.ಮಂಜಪ್ಪ, ಮಾಜಿ ಮೇಯರ್ ಎಚ್.ಎನ್.ಗುರುನಾಥ, ಹಿರಿಯ ಮುಖಂಡರಾದ ಎಚ್.ಜಿ.ದೊಡ್ಡಪ್ಪ, ಗೌಡರ ಬಸವರಾಜಪ್ಪ, ಸಿದ್ದನಗೌಡ, ಚನ್ನಬಸಪ್ಪ ಗೌಡ, ಎಚ್.ಬಿ.ಅಣ್ಣಪ್ಪ, ಜೆ.ಮಾರುತಿ, ಬಾರಿಕರ ಚಂದ್ರಪ್ಪ ಇನ್ನಿತರ ಮುಖಂಡರು, ಸದಸ್ಯರು ಇದ್ದರು.

- - - -15ಕೆಡಿವಿಜಿ6, 7: ಶ್ರೀ ಆಂಜನೇಯ ದೇವರ ಮೂರ್ತಿ.

-15ಕೆಡಿವಿಜಿ8: ಹಳೆ ಕುಂದುವಾಡಲ್ಲಿ ದೇವಸ್ಥಾನ ಲೋಕಾರ್ಪಣೆ ಕುರಿತು ಶ್ರೀ ಬಸವ ಆಂಜನೇಯ ಅಭಿವೃಷ್ಧಿ ಸಮಿತಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ ಮಾಹಿತಿ ನಿಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ