ಕಪ್ಪತ್ತಗುಡ್ಡದ ಉಳಿವಿಗೆ ತೋಂಟದ ಸಿದ್ಧಲಿಂಗ ಸ್ವಾಮೀಜಿಯೇ ಕಾರಣ-ಪ್ರೊ. ಅರಸನಾಳ

KannadaprabhaNewsNetwork |  
Published : Jun 29, 2025, 01:33 AM IST
28ಎಂಡಿಜಿ1, ಮುಂಡರಗಿ ಪಟ್ಟಣದ ತೋಂಟದಾರ್ಯ ಸಿಬಿಎಸ್ಇ ವಸತಿ ಶಾಲೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಉದ್ಘಾಟಿಸಿದರು.       | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದ ಉಳಿವಿಗೆ ಕಾರಣರಾದವರು ಗದುಗಿನ ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರು ಎಂದು ಜಿಲ್ಲಾ ವನ್ಯಜೀವಿ ಪರಿಪಾಲಕ, ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.

ಮುಂಡರಗಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದ ಉಳಿವಿಗೆ ಕಾರಣರಾದವರು ಗದುಗಿನ ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರು ಎಂದು ಜಿಲ್ಲಾ ವನ್ಯಜೀವಿ ಪರಿಪಾಲಕ, ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.

ಅವರು ಶನಿವಾರ ಪಟ್ಟಣದಲ್ಲಿ ಜೆಟಿ ವಿದ್ಯಾ ಪೀಠದ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಕಪ್ಪತ್ತಗುಡ್ಡದ ಉಳಿವಿನಲ್ಲಿ ಲಿಂ.ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಪಾತ್ರ ಕುರಿತು ಉಪನ್ಯಾಸ ಮಾಡಿ ಮಾತನಾಡಿದರು. ಕಪ್ಪತ್ತಗುಡ್ಡಕ್ಕೆ ಕುತ್ತುಬಂದಾಗಲೆಲ್ಲ ಮೊದಲು ಕೇಳಿಬರುತ್ತಿದ್ದ ಧ್ವನಿ ಎಂದರೆ ಅದು ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು. ಅನೇಕ ವರ್ಷಗಳ ಹಿಂದೆ ಕಪ್ಪತ್ತಗುಡ್ಡಕ್ಕೆ ಬೆಂಕಿ ಬೀಳುತ್ತಿದ್ದ ಸಂದರ್ಭದಲ್ಲಿ ನಮ್ಮೊಂದಿಗೆ ಚರ್ಚಿಸಿ ಆ ಭಾಗದಲ್ಲಿನ ಗ್ರಾಮಗಳಲ್ಲಿ ಜನಜಾಗೃತಿಗಾಗಿ ಬೀದಿ ನಾಟಕಗಳನ್ನು ಮಾಡಿಸಿ, ಆ ಕಾರ್ಯಕ್ರಮಗಳಿಗೆ ತಾವು ಆಗಮಿಸಿ, ಸಾನಿಧ್ಯವಹಿಸಿ, ಸ್ವತಃ ಮನೆಮನೆಗೆ ತೆರಳಿ ಭಿತ್ತಿಪತ್ರ ಹಂಚುವ ಮೂಲಕ ಈ ಕಪ್ಪತ್ತಗುಡ್ಡ ನಿಮ್ಮನಮ್ಮೆಲ್ಲರ ಜೀವನಾಡಿ. ಅದನ್ನು ಉಳಿಸಿಕೊಳ್ಳುವುದರಿಂದ ನಮ್ಮ ಮುಂದಿನ ಪೀಳಿಗೆಯೂ ಸೇರಿದಂತೆ ಎಲ್ಲರೂ ಸಂತಸ ಹಾಗೂ ಆರೋಗ್ಯದಿಂದ ಇರಬಹುದೆಂದು ತಿಳಿಸುತ್ತಿದ್ದರು. ಕಪ್ಪತ್ತಗುಡ್ಡ ವನ್ಯಜೀವಿ ಧಾಮವಾಗಲು ಗದಗನಲ್ಲಿ ಅಹೋರಾತ್ರಿ ಧರಣಿಯ ನೇತೃತ್ವ ವಹಿಸಿ ಯಶಸ್ವಿಯಾಗುವ ಮೂಲಕ ಅಂದಿನ ಸರ್ಕಾರದ ಅರಣ್ಯ ಸಚಿವರಾದ ಸತೀಶ ಜಾರಕಿಹೊಳಿ ಅದನ್ನು ಘೋಷಣೆ ಮಾಡುವ ಮೂಲಕ ಶ್ರೀಗಳ ಹೋರಾಟಕ್ಕೆ ಜಯ ನೀಡಿದ್ದರು. ಹೀಗಾಗಿ ಕಪ್ಪತ್ತಗುಡ್ಡ ಇಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆಯುವಂತಾಗಿದೆ. ಅದಕ್ಕೆ ಲಿಂ.ಜ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಪಾತ್ರ ಅತ್ಯಂತ ಹಿರಿದಾದುದು ಎಂದರು.

ಕಾರ್ಯಕ್ರಮವನ್ನು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮಾತನಾಡಿ, ಇಂದು ಕಪ್ಪತ್ತಗುಡ್ಡ ನೋಡುಗರ ಕಣ್ಮನ ಸೆಳೆಯುತ್ತಿದೆ ಎಂದರೆ ಅದಕ್ಕೆ ಪ್ರಮುಖ ಕಾರಣವೇ ಗದುಗಿನ ಲಿಂ.ಜಗದ್ಗುರುಗಳು ಸೇರಿದಂತೆ ಈ ನಾಡಿನ ವಿವಿಧ ಸ್ವಾಮೀಜಿಯವರು ಹಾಗೂ ಪರಿಸರವಾದಿಗಳು, ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಕಾರಣ. ಇತ್ತೀಚಿನ ವರ್ಷಗಳಲ್ಲಿ ಕಪ್ಪತ್ತಗುಡ್ಡವನ್ನು ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿ ಪ್ಲಾಸ್ಟಿಕ್ ಸೇರಿದಂತೆ ಅನೇಕ ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳನ್ನು ತಂದು ಬಿಸಾಕಿ ಹೋಗುತ್ತಿದ್ದಾರೆ. ಅದು ನಿಲ್ಲಬೇಕು. ಇಲ್ಲಿಗೆ ಬಂದು ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದರಿಂದ ಇಲ್ಲಿನ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗುತ್ತದೆ. ಜತೆಗೆ ಇಲ್ಲಿನ ಅನೇಕ ಔಷಧಿ ಸಸ್ಯಗಳು, ಪ್ರಾಣಿ ಪಕ್ಷಿಗಳು ಸಾವನ್ನಪ್ಪುವಂತಾಗುತ್ತವೆ. ಆದ್ದರಿಂದ ಕಪ್ಪತ್ತಗುಡ್ಡವನ್ನು ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳಿಂದ ದೂರ ಇಡಬೇಕು. ಮನೆಗಳಲ್ಲಿಯೂ ಸಹ ಪಾಸ್ಟೀಕ್ ಬಿಟ್ಟು ಬಟ್ಟೆಚೀಲ ಉಪಯೋಗಿಸಬೇಕು. ಇಲ್ಲಿ ಅನೇಕ ತರಹದ ಕಾಡುಪ್ರಾಣಿಗಳಿವೆ. ಜಿಲ್ಲೆಯ ಮಾಗಡಿ ಕೆರೆಗೆ ವಿದೇಶದಿಂದ ಪಕ್ಷಿಗಳು ಬರುತ್ತಿದ್ದು, ಅವುಗಳನ್ನು ಸಹ ನೋಡಲು ಸಾವಿರಾರು ಜನ ಬರುತ್ತಾರೆ. ಅಲ್ಲಿನ ಕೆರೆಗಳಲ್ಲಿಯೂ ಸಹ ಪ್ಲಾಸ್ಟಿಕ್ ಎಸೆಯುತ್ತಿದ್ದು, ಇದರಿಂದ ಅತ್ಯಂತ ಸುಂದರವಾದ ಪಕ್ಷಿಗಳು ಸಾಯುತ್ತವೆ. ಆದ್ದರಿಂದ ಪ್ಲಾಸ್ಟಿಕ್ ನಿಷೇಧಿಸುವ ಮೂಲಕ ಪರಿಸರ ಕಾಯ್ದುಕೊಳ್ಳಲು ಎಲ್ಲರೂ ಬದ್ಧರಾಗಬೇಕು ಎಂದರು.

ಮಾಜಿ ಸಚಿವ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಪ್ಪತ್ತಗುಡ್ಡ ನಮ್ಮ ಸಂಪತ್ತು. ನಾವು ಚಿಕ್ಕವರಿದ್ದಾಗಿನಿಂದಲೂ ಕಪ್ಪತ್ತಗುಡ್ಡಕ್ಕೆ ಸಾಕಷ್ಟು ಇತಿಹಾಸವಿದೆ. ಕಪ್ಪತ್ತಗುಡ್ಡ ಇರುವುದರಿಂದಾಗಿ ಉತ್ತಮ ಪರಿಸರ ಹಾಗೂ ಶುದ್ಧ ಗಾಳಿ ಬೀಸಲು ಕಾರಣವಾಗಿದೆ. ಅದಕ್ಕೆ ಗದುಗಿನ ಶ್ರೀಗಳ ಕೊಡುಗೆಯೂ ಸಹ ಅಪಾರವಾಗಿದೆ. ಇಂದಿನ ಮಕ್ಕಳಿಗೆ ಕಪ್ಪತ್ತಗುಡ್ಡವನ್ನು ತೋರಿಸಿ ಅದರ ಸಮಗ್ರ ಪರಿಚಯವನ್ನು ಮಾಡಿಕೊಡಬೇಕು ಎಂದರು. ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೊಟ್ರೇಶ ಅಂಗಡಿ, ನಾಗೇಶ ಹುಬ್ಬಳ್ಳಿ, ಪ್ರಾಚಾರ್ಯ ಶರಣಕುಮಾರ ಬುಗುಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು. ನವ್ಯಾ ರೇವಣಕರ್ ಸ್ವಾಗತಿಸಿ, ಮುಷ್ಕಾನ್ ಬೆಳಗಟ್ಟಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ