ಕನ್ನಡಪ್ರಭ ವಾರ್ತೆ ಬೆಂಗಳೂರುಸುಂದರ ಕಡಲ ಕಿನಾರೆ, ಕಣ್ಮನ ಸೆಳೆಯುವ ದಟ್ಟಾರಣ್ಯ, ವನ್ಯಜೀವಿಗಳು, ಹಚ್ಚ ಹಸರಿನ ಬೆಟ್ಟ ಗುಡ್ಡಗಳ ಸಾಲುಗಳು, ವಯ್ಯಾರ,ಅಬ್ಬರದೊಂದಿಗೆ ಹರಿಯುವ ನದಿಗಳು, ಧುಮ್ಮಿಕ್ಕುವ ಜಲಪಾತಗಳ ಸೊಬಗು ಹೊಂದಿದ್ದರೂ ಪ್ರವಾಸೋದ್ಯಮದಲ್ಲಿ ಕರ್ನಾಟಕ ಹಿಂದುಳಿದಿರುವುದು ಏಕೆ, ಇದಕ್ಕೆ ಪರಿಹಾರವೇನು ಎಂಬ ಬಗ್ಗೆ ‘ದಕ್ಷಿಣ ಭಾರತ ಉತ್ಸವ-2024’ದಲ್ಲಿ ಆಯೋಜಿಸಿದ್ದ ಸಂವಾದ ರಾಜ್ಯ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡುವ ಪರಿಣಾಮಕಾರಿ ಚರ್ಚೆಗೆ ಸಾಕ್ಷಿಯಾಯಿತು.ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡಲು ಕೈಗೊಳ್ಳಬೇಕಾದ ಕ್ರಮಗಳು ಏನು, ಎಲ್ಲಿ ಸಮಸ್ಯೆಯಾಗುತ್ತಿದೆ ಮತ್ತು ಪರಿಹಾರ ಕ್ರಮಗಳೇನು ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಪ್ರಧಾನ ಸಂಪಾದಕ ರವಿ ಹೆಗಡೆ ಅವರು, ಜಗತ್ತಿನ ಅನೇಕ ದೇಶಗಳ ಮುಖ್ಯ ಆದಾಯ ಮೂಲವೇ ಪ್ರವಾಸೋದ್ಯಮ. ಆದರೆ, ಪ್ರವಾಸೋದ್ಯಮದಲ್ಲಿ ನಾವು ಹಿಂದುಳಿದಿದ್ದೇವೆ. ಹೀಗಾಗಿ, ನಾವು ಈಗ ನಾವು ಹೊಸತನದೊಂದಿಗೆ ದಾಪುಗಾಲು ಇಡಬೇಕು. ಈಗಾಗಲೇ ಹಳತಾಗಿರುವ ವಿಚಾರಗಳನ್ನೇ ತೋರಿಸಿದರೆ ಜನರು ಒಪ್ಪದಿರಬಹುದು. ಪ್ರವಾಸೋದ್ಯಮ ಜಗತ್ತಿನಲ್ಲಿ ಟ್ರೆಂಡಿಂಗ್ ಏನಿದೆ ಎಂಬುದನ್ನು ಅರಿಯಬೇಕು. ಅದಕ್ಕೆ ತಕ್ಕಂತೆ ಹೊಸತನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕಹಿ ಘಟನೆಗಳ ನೆಪದಲ್ಲಿ ಪ್ರವಾಸೋದ್ಯಮ ವಿರೋಧಿಯಾಗಿ ಸಂಪೂರ್ಣ ‘ಬ್ಯಾನ್’ ನಿಲುವು ಹಿಂಪಡೆಯಬೇಕು. ಸುರಕ್ಷತೆಯೊಂದಿಗೆ ಮುಂದೆ ಸಾಗುವ ಧನಾತ್ಮಕ ಚಿಂತನೆಗಳನ್ನು ಮಾಡಬೇಕು. ‘ವಿಶೇಷ ಪ್ರವಾಸೋದ್ಯಮ ವಲಯ’ಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕದ ಅದ್ಭುತಗಳನ್ನು ಒಂದೆಡೆ ತೋರಿಸಬಹುದು ಎಂದರು.ಪ್ರವಾಸೋದ್ಯಮ ಬೆಳವಣಿಗೆಯ ಅನುಕೂಲಗಳು ಮತ್ತು ಸವಾಲುಗಳ ಕುರಿತು ಪ್ರತಿಕ್ರಿಯಿಸಿದ ಎಫ್ಕೆಸಿಸಿಐ ಅಧ್ಯಕ್ಷ ರಮೇಶ ಚಂದ್ರ ಲಹೋಟಿ, ಪ್ರವಾಸೋದ್ಯಮ ಉತ್ತೇಜನಕ್ಕೆ ತೆರಿಗೆ ವಿನಾಯಿತಿ, ಬ್ಯಾಂಕ್ ಸಾಲದಲ್ಲಿ ಸರಳೀಕರಣ ಮತ್ತು ಕೆಲವು ವಿನಾಯಿತಿ, ಕಾರ್ಮಿಕ ಕಾನೂನುಗಳ ಸರಳೀಕರಣ, ಸರಳ ತೆರಿಗೆ ವ್ಯವಸ್ಥೆಯನ್ನು ಒಳಗೊಂಡ ಉದ್ಯಮ ಸ್ನೇಹಿ ನೀತಿ ಜಾರಿಗೆ ತರಬೇಕು. ಅದನ್ನು ಉದ್ಯಮದಾರರು ಮತ್ತು ಸಾರ್ವಜನಿಕರು, ತಜ್ಞರ ಸಲಹೆ ಸೂಚನೆ ಪಡೆಯಬೇಕು ಎಂದು ಸಲಹೆ ನೀಡಿದರು. ಕರಾವಳಿ ಪ್ರವಾಸೋದ್ಯಮ ತಜ್ಞ ಮಂಗಲ ಶೆಟ್ಟಿ, ಪ್ರವಾಸೋದ್ಯಮಕ್ಕೆ ಕೇರಳ 2,500 ಕೋಟಿ ರು.ಗಿಂತ ಹೆಚ್ಚು ಹಣ ಮೀಸಲಿಡುತ್ತದೆ. ಈ ವಿಚಾರದಲ್ಲಿ ಕರ್ನಾಟಕ ತುಂಬಾ ಹಿಂದಿದೆ. ಕರ್ನಾಟಕ ಹೆಚ್ಚಿನ ಹೂಡಿಕೆ ಮಾಡಿ, ಹೆಚ್ಚು ಫಲ ಪಡೆಯುವ ವ್ಯಾಪಕ ಅವಕಾಶಗಳು ಇವೆ. ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕು,ರಾಜ್ಯದ ಪ್ರವಾಸೋದ್ಯಮ ವಲಯಕ್ಕೆ 10 ಸಾವಿರ ಕೋಟಿ ರು. ಅಗತ್ಯವಿದೆ. ಪಿಪಿಪಿ ಮಾದರಿ ಜಾರಿಗೆ ತರಬೇಕು ಎಂದು ಹೇಳಿದರು. ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪ್ರವಾಸಿ ತಾಣಗಳ ಸೌಂದರ್ಯ, ಪಾವಿತ್ರ್ಯತೆ ಕಾಪಾಡಿಕೊಳ್ಳಲು ಸಿನಿಮಾ ಕ್ಯಾಮೆರಾವನ್ನೂ ಒಳಬಿಡದ ರೀತಿಯ ಜಟಿಲ ಕಾನೂನು ಸಡಿಲಿಸುವ ಅಗತ್ಯತೆ ಇದೆ. ನಯಾಗರಾದಲ್ಲಿ ಪ್ರವಾಸಿಗರಿಗಾಗಿ ನೀರಿನ ಹರಿವು ನಿಯಂತ್ರಣ, ಜಲಪಾತದ ನೀರು ಬೀಳುವಲ್ಲಿ ‘ಮೇಯ್ಡ್ ಆಫ್ ದ ಮಿಸ್ಟ್’ ಕರೆದೊಯ್ಯುವ ರೀತಿಯನ್ನು ನಮ್ಮ ಪ್ರವಾಸೋದ್ಯಮ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.ಸಿನಿಮಾದಲ್ಲಿ ತಾಜ್ಮಹಲ್ ತೋರಿಸಬೇಕೆಂದರೆ ಸುಮಾರು ಒಂದು ಕಿ.ಮೀ ದೂರದಿಂದ ಶೂಟಿಂಗ್ ಮಾಡಬೇಕು. ಹಂಪಿಯಲ್ಲಿ ಸರ್ಕಾರಿ ಡಾಕ್ಯೂಮೆಂಟರಿ ಹೊರತುಪಡಿಸಿ ಇಂದಿಗೂ ಸಿನಿಮಾ ಚಿತ್ರೀಕರಣ ನಿಷಿದ್ಧ. ಪ್ರಾಕೃತಿಕ, ವಿಶ್ವವಿಖ್ಯಾತ, ಸೂಕ್ಷ್ಮ ತಾಣಗಳಲ್ಲಿ ಸಿನಿಮಾ ತಂಡದಿಂದ ಧಕ್ಕೆ ಆಗುತ್ತದೆ ಎಂಬ ಕಾರಣ ಮುಂದಿಟ್ಟುಕೊಂಡು ಸಿನಿಮಾ ತಂಡಗಳನ್ನು ಅಸ್ಪ್ರಶ್ಯ ಧೋರಣೆಯಲ್ಲಿ ನೋಡುವುದು. ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಪ್ರವಾಸೋದ್ಯಮಕ್ಕೆ ಬೇಕಿದ ಕಾಯಕಲ್ಪ: ತಜ್ಞರುಹೊಸ ತಲೆಮಾರಿನ, ವಿಶ್ವದರ್ಜೆಯ ಪ್ರವಾಸೋದ್ಯಮವನ್ನು ಪರಿಚಯಿಸುವ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ, ಸಾರಿಗೆ ಸಂಪರ್ಕ ಮತ್ತು ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಶುಲ್ಕಗಳನ್ನು ನಿಗದಿಪಡಿಸಿದರೆ ರಾಜ್ಯದ ಪ್ರವಾಸೋದ್ಯಮ ವಲಯ ಉತ್ತುಂಗಕ್ಕೆ ಏರುತ್ತದೆ. ಸ್ಥಳೀಯವಾಗಿ ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯಾಗಿ ಜನರ ಜೀವನಮಟ್ಟ ಸುಧಾರಣೆ ಜೊತೆಗೆ ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲವಾಗುತ್ತದೆ ಎಂದು ಪ್ರವಾಸೋದ್ಯಮದ ತಜ್ಞರು ಅಭಿಪ್ರಾಯಪಟ್ಟರು.
ನಗರದ ಅರಮನೆ ಮೈದಾನದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಎಫ್ಕೆಸಿಸಿಐ ಆಯೋಜಿಸಿರುವ ಎರಡು ದಿನಗಳ ‘ದಕ್ಷಿಣ ಭಾರತ ಉತ್ಸವ-2024’ರಲ್ಲಿ ಭಾನುವಾರ ನಡೆದ ‘ಜಾಗತಿಕ ಮಾದರಿಗಳೊಂದಿಗೆ ಕರ್ನಾಟಕ ಪ್ರವಾಸೋದ್ಯಮವನ್ನು ವಿಶ್ವದರ್ಜೆಗೆ ಏರಿಸುವುದು’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ತಜ್ಞರು ಈ ಅನಿಸಿಕೆ ವ್ಯಕ್ತಪಡಿಸಿದರು.ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಶ್ರೀಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿ ತಾಣಗಳು ಕಾರ್ಯ ನಿರ್ವಹಿಸಬೇಕು. ತಾಣಗಳು ಸರಿಯಾಗಿ ನಿರ್ವಹಣೆಯಾಗಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಂದಂತಹ ಪ್ರವಾಸಿಗರನ್ನು ವ್ಯಾಪಾರಿಗಳು ಅವರನ್ನು ಸುಲಿಗೆ ಮಾಡುವ ಮನಸ್ಥಿತಿಯಿಂದ ಹೊರಬರಬೇಕು. ತಾಣಗಳನ್ನು ಜನರ ಮನೆ, ಮನಗಳಿಗೆ ತಲುಪಿಸುವ ಸಿನಿಮಾ ಶೂಟಿಂಗ್ಗೆ ಇರುವ ಹತ್ತಾರು ನಿರ್ಬಂಧ ಕ್ರಮಗಳನ್ನು ಸರಳೀಕರಿಸಬೇಕು ಎಂದರು.‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಪ್ರವಾಸೋದ್ಯಮದಲ್ಲಿ ನಮ್ಮ ರಾಜ್ಯ 15 ವರ್ಷ ಹಿಂದುಳಿದಿದೆ. ನಮ್ಮ ಪ್ರವಾಸಿ ತಾಣಗಳನ್ನು ವಿಶ್ವದರ್ಜೆ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು. ಪ್ರವಾಸಿ ತಾಣಗಳಿಗೆ ಹೋಗಿ ಒಂದು ಫೋಟೋ ಮತ್ತೊಂದು ಸೆಲ್ಫಿ ತೆಗೆದುಕೊಂಡು ಬರುವುದಲ್ಲ. ಪ್ರವಾಸಿಗರಿಗೆ ನೈಜ ಅನುಭವ ಸಿಗಬೇಕು. ಪ್ಯಾರಿಸ್ನಲ್ಲಿ ಐಫಲ್ ಟವರ್, ಇಂಡೋನೇಷಿಯಾದ ಬಾಲಿಯಲ್ಲಿ ಜೋಕಾಲಿ, ಹಕ್ಕಿ ಗೂಡುಗಳಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳುವುದೇ ಒಂದು ವಿಶೇಷ ಅನುಭವ ಎಂದು ಬ್ರ್ಯಾಂಡ್ ಮಾಡಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿನ ತಾಣಗಳನ್ನೂ ಸ್ಥಳೀಯ ವೈಶಿಷ್ಟ್ಯದೊಂದಿಗೆ ಬ್ರ್ಯಾಂಡಿಂಗ್ ಮಾಡಬೇಕು. ಜನರು ಪ್ರವಾಸಿ ತಾಣಗಳಿಗೆ ತೆರಳಿದಾಗ ಸ್ಥಳಗಳ ಕುರಿತು ಮಾಹಿತಿ ನೀಡುವ ಫಲಕಗಳು, ಭಿತ್ತಿಪತ್ರಗಳು ಸಿಗಬೇಕು. ಪುಸ್ತಕಗಳು, ಉಡುಗೊರೆಗಳು, ವಸ್ತ್ರಗಳು ಲಭ್ಯವಾಗಬೇಕು. ಜನರು ಬರುತ್ತಿದ್ದಂತೆ ಅವರಿಗೆ ಪ್ರವಾಸಿ ತಾಣದಲ್ಲಿದ್ದೇನೆ ಎನ್ನುವ ಅನುಭವ ನೀಡಬೇಕು. ಬೋರಿಂಗ್ ಆಗಬಾರದು ಎಂದು ಹೇಳಿದರು.ಎಫ್ಕೆಸಿಸಿಐ ಅಧ್ಯಕ್ಷ ರಮೇಶ ಚಂದ್ರ ಲಹೋಟಿ ಮಾತನಾಡಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೂಡಿಕೆದಾರ ಸ್ನೇಹಿ ನೀತಿ, ಮೂಲಸೌಕರ್ಯ, ಸಂಪರ್ಕ ಮತ್ತು ಪರವಾನಗಿ ವ್ಯವಸ್ಥೆಯ ಸರಳೀಕರಣಕ್ಕೆ ಏಕಗವಾಕ್ಷಿ ವ್ಯವಸ್ಥೆ ಅನುಷ್ಠಾನಗೊಳಿಸಬೇಕು. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ ಮಹಾನಗರಗಳಿಗೆ ವಲಸೆ ತಪ್ಪುತ್ತದೆ ಎಂದು ಹೇಳಿದರು.ಅಡಿಗಾಸ್ ಯಾತ್ರಾ ಸಂಸ್ಥಾಪಕ ಕೆ.ನಾಗರಾಜ ಅಡಿಗ ಅವರು ಮಾತನಾಡಿ, ಪ್ರವಾಸಿಗರು ಪ್ರವಾಸಿ ತಾಣಗಳಲ್ಲಿ ಶುಚಿ ಹಾಗೂ ಶುದ್ಧ ಆಹಾರವನ್ನು ಬಯಸುತ್ತಾರೆ. ಅನೇಕ ಪ್ರವಾಸಿ ತಾಣಗಳಲ್ಲಿ ಸ್ಥಳ ಮತ್ತು ಆಹಾರದ ಕೊರತೆ ಪ್ರವಾಸಿಗರಿಗೆ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ತಾಣಗಳ ವೀಕ್ಷಣೆ ಜೊತೆಗೆ ಆಹಾರದ ಮೂಲಕವೂ ಪ್ರವಾಸವನ್ನು ಆಹ್ಲಾದಿಸುವ ಅವಕಾಶ ಕಲ್ಪಿಸಬೇಕು. ತಾಣಗಳ ಬಳಿ ಹೊಟೇಲ್, ರೆಸ್ಟೋರೆಂಟ್ಗಳ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕೈಗೆಟುಕುವ ದರದಲ್ಲಿ ಉತ್ತಮ ಸೇವೆ ಮತ್ತು ಆಹಾರ ನೀಡಲು ಪ್ರವಾಸೋದ್ಯಮ ನೀತಿಯಲ್ಲಿ ಸಹಕಾರ ಸಿಗಬೇಕು ಎಂದು ಆಶಿಸಿದರು.ಕರಾವಳಿ ಪ್ರವಾಸೋದ್ಯಮ ತಜ್ಞ ಮಂಗಲ ಶೆಟ್ಟಿ ಅವರು, 800 ಹೆಕ್ಟೇರ್ಗೂ ಹೆಚ್ಚು ವಿಸ್ತೀರ್ಣದ ಅರಣ್ಯ ಪರಿಸರದ ಅದ್ಭುತ ನಿಸರ್ಗ ತಾಣವಾಗಿರುವ ಅಘನಾಶಿನಿಯ ಸೌಂದರ್ಯವನ್ನು ಪ್ರವಾಸಿಗರಿಗೆ ಉಣಬಡಿಸುವ ಅವಕಾಶವಿದೆ. ಈ ಕುರಿತು ಪ್ರವಾಸಿಗರಿಗೆ ಸಮಗ್ರ ಮಾರ್ಗದರ್ಶನ ಮಾಡುವಂತಹ ವಿಶೇಷ ಯೋಜನೆಯನ್ನು ಸರ್ಕಾರ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ಪಾರಂಪರಿಕ ತಾಣಗಳನ್ನು ಕಾಪಾಡಿಕೊಳ್ಳುವಲ್ಲಿ ಕರ್ನಾಟಕ ಮೊದಲಿನಿಂದಲೂ ಹಿಂದುಳಿದಿದೆ. ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು. ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ಅರಮನೆಯ ನಿರ್ವಹಣೆ ಉತ್ತಮವಾಗಿಲ್ಲ. ನೂರಾರು ವರ್ಷಗಳ ಇತಿಹಾಸ ಇರುವ ವೆಲ್ಲಿಂಗ್ಟನ್ ಹೌಸ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು.