ಗಿರಿಯಲ್ಲಿ ಕಾರುಗಳ ಕಾರುಬಾರು । ದೇಗುಲಗಳು ಭರ್ತಿ, ಹೋಂ ಸ್ಟೇ- ಲಾಡ್ಜ್ಗಳು ಹೌಸ್ಫುಲ್,ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲೆಯಲ್ಲಿ ಸುಮಾರು 46ಕ್ಕೂ ಹೆಚ್ಚು ಪ್ರವಾಸಿ ಕೇಂದ್ರಗಳಿವೆ. ಇವುಗಳ ಸಾಲಿನಲ್ಲಿ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮಾಣಿಕ್ಯಾಧಾರ, ಹೊನ್ನಮ್ಮನ ಹಳ್ಳ, ಧಬೆ ದಭೆ ಫಾಲ್ಸ್, ಹೆಬ್ಬೆ ಜಲಪಾತ, ಕೆಮ್ಮಣ್ಣಗುಂಡಿ, ದೇವರಮನೆ, ಝರಿ ಫಾಲ್ಸ್, ಸಿರಿಮನೆ ಫಾಲ್ಸ್ ಹೀಗೆ ಪ್ರಕೃತಿ ಕೊಡುಗೆ ಯಾಗಿ ನೀಡಿರುವ ತಾಣಗಳು, ಶೃಂಗೇರಿ ಶಾರದಾಂಬೆ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯಗಳು, ಇಲ್ಲಿಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.ಸರಣಿ ರಜೆಯ ಸಾಲಿನಲ್ಲಿರುವ ಶನಿವಾರದಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಎಂದಿನಂತೆ ಮುಂದುವರೆದಿತ್ತು. ಗಿರಿ ಪ್ರದೇಶಕ್ಕೆ ತೆರಳುವ ವಾಹನಗಳ ತಪಾಸಣೆಯ ಕೈಮರ ಚೆಕ್ ಪೋಸ್ಟ್ನಲ್ಲಿ ದಾಖಲಾಗಿರುವ ಪ್ರಕಾರ ಒಂದೇ ದಿನ 205 ಬೈಕ್, 1300 ಕಾರ್ಗಳು ಹಾಗೂ 108 ಟಿಟಿಗಳಲ್ಲಿ ಪ್ರವಾಸಿಗರು ಬಂದಿದ್ದಾರೆ. ಅಂದರೆ, ಸುಮಾರು 8 ಸಾವಿರ ಜನರು ಬಂದು ಹೋಗಿದ್ದಾರೆ.
ಗಿರಿ ಪ್ರದೇಶದಲ್ಲಿ ವಾಹನಗಳ ದಟ್ಟಣೆಯಿಂದ ಆಗಾಗ ಟ್ರಾಫಿಕ್ ಜಾಮ್ ಆಗುತ್ತಿತ್ತು. ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳ ಒಂದಾಗಿರುವ ಐ.ಜಿ. ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ಗೆ ಜಾಗ ಇಲ್ಲದೆ ಪ್ರವಾಸಿಗರು ಪರದಾಡುತ್ತಿದ್ದರು.ಶೃಂಗೇರಿ ಶ್ರೀ ಮಠದ ಆವರಣ, ಶ್ರೀ ಶಾರದಾಂಬೆ ದೇಗುಲ, ನರಸಿಂಹವನ, ಭೋಜನಾ ಶಾಲೆ, ವಾಹನಗಳ ನಿಲುಗಡೆ ಪ್ರದೇಶವಾಗಿರುವ ಗಾಂಧಿ ಮೈದಾನ, ಬಸ್ ನಿಲ್ದಾಣ, ಹೋಟೆಲ್, ವಸತಿ ಗೃಹಗಳು ಎಲ್ಲೆಲ್ಲು ಜನ ಸಾಗರ, ಇಲ್ಲಿನ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣ, ಭಾರತೀ ಬೀದಿ, ಸಂತೇ ಮಾರುಕಟ್ಟೆವರೆಗಿನ ರಸ್ತೆ ಉದ್ದಕ್ಕೂ ಸಾಲುಗಟ್ಟಿ ವಾಹನಗಳು ನಿಲುಗಡೆಯಾಗಿದ್ದವು. ಟ್ರಾಫಿಕ್ ಸಮಸ್ಯೆ ಕೂಡ ಎದುರಾಗಿತ್ತು.ಹೋಂ ಸ್ಟೇಗಳು ಭರ್ತಿ:
ಜಿಲ್ಲೆಯಲ್ಲಿ ಸುಮಾರು 900ಕ್ಕೂ ಹೆಚ್ಚು ಹೋಂ ಸ್ಟೇ, ರೇಸಾರ್ಟ್ಗಳಿವೆ. ಇವುಗಳಲ್ಲಿ ಹೆಚ್ಚಿನ ಪಾಲು ಕಳೆದ ಒಂದು ತಿಂಗಳ ಹಿಂದೆಯೇ ಅಡ್ವಾನ್ಸ್ ಬುಕ್ಕಿಂಗ್ ಆಗಿವೆ. ಲಾಡ್ಜ್ಗಳು ಕೂಡ ಭರ್ತಿಯಾಗಿವೆ. ಕೊನೆ ಕ್ಷಣದಲ್ಲಿ ಬರುವ ಪ್ರವಾಸಿಗರಿಗೆ ಲಾಡ್ಜ್ಗಳಲ್ಲಿ ಜಾಗ ಸಿಗುತ್ತಿಲ್ಲ. ಹಾಗಾಗಿ ಡಿಮ್ಯಾಂಡ್ ಜಾಸ್ತಿಯಾಗಿದೆ. ಕೇಳುವಷ್ಟು ಹಣ ಕೊಡಲು ಪ್ರವಾಸಿಗರಿದ್ದರೂ ಉಳಿದುಕೊಳ್ಳಲು ಜಾಗ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಹಲವು ಮಂದಿ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಒಟ್ಟಾರೆ, ಕಾಫಿಯ ನಾಡು ಚಿಕ್ಕಮಗಳೂರು ಸರಣಿ ರಜೆ ಹಾಗೂ ಹೊಸ ವರ್ಷಾಚರಣೆ ಸಂಭ್ರಮದ ಹಿನ್ನಲೆಯಲ್ಲಿ ಪ್ರವಾಸಿಗರಿಂದ ತುಂಬಿದೆ.--
ಶೃಂಗೇರಿ: ಕ್ರಿಸ್ ಮಸ್, ವರ್ಷದ ಕೊನೆ, ಹೊಸವರ್ಷದ ಹಿನ್ನೆಲೆಯಲ್ಲಿ ಶೃಂಗೇರಿಯಲ್ಲಿ ಕಳೆದೆರೆಡು ದಿನಗಳಿಂದ ಪ್ರವಾಸಿಗರ ದಂಡೇ ನೆರೆದಿದೆ.ಶ್ರೀಮಠದ ಆವರಣ, ಶ್ರೀ ಶಾರದಾಂಬಾ ದೇವಾಲಯ, ನರಸಿಂಹವನ, ಭೋಜನಾಶಾಲೆ, ವಾಹನ ನಿಲುಗಡೆ ಪ್ರದೇಶವಾಗಿರುವ ಗಾಂಧಿ ಮೈದಾನ, ಬಸ್ ನಿಲ್ದಾಣ, ಹೋಟೆಲು, ವಸತಿ ಗೃಹಗಳು ಎಲ್ಲೆಲ್ಲು ಜನಸಾಗರ. ಕಳೆದೆರೆಡು ದಿನಗಳಿಂದ ವಾಹನ ನಿಲುಗಡೆ ಪ್ರದೇಶದಲ್ಲಿ ಜಾಗವಿಲ್ಲದೇ ವಾಹನ ನಿಲ್ಲಿಸಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಪಟ್ಟಣದ ಬಸ್ ನಿಲ್ದಾಣದಿಂದ ಹಿಡಿದು ಹಳೆ ಬಸ್ ನಿಲ್ದಾಣ, ಭಾರತೀ ಬೀದಿ, ಸಂತೇಮಾರುಟ್ಟೆವರೆಗಿನ ರಸ್ತೆಯುದ್ದಕ್ಕೂ ಸಾಲುಗಟ್ಟಿ ವಾಹನ ನಿಲುಗಡೆ, ವಿವಿಧೆಡೆಗಳಿಂದ ಪ್ರವಾಸಿ ವಾಹನಗಳು ಬರುತ್ತಿರುವುದರಿಂದ ವಾಹನ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ ಕಾಯಂ ಆಗಿದೆ.ವಸತಿ ಗೃಹಗಳೆಲ್ಲ ತುಂಬಿದ್ದು ಎಲ್ಲೆಡೆ ಫುಲ್ ಆಗಿದೆ. ಪ್ರವಾಸಿಗರು, ಶಾಲಾ ಮಕ್ಕಳು ಸಹಿತ ಪ್ರವಾಸಿಗರು ಬರುತ್ತಿದ್ದಾರೆ. ಶುಕ್ರವಾರ ರಜೆ ಇದ್ದರಿಂದ, 4ನೆ ಶನಿವಾರ ವಾಗಿದ್ದರಿಂದ ಜನಸಾಗರ ಹರಿದು ಬಂದಿತ್ತು. ಸತತ 3 ದಿನಗಳ ಸಾಲು ರಜೆಯಿಂದ ಇಡೀ ಶೃಂಗೇರಿ ಪ್ರವಾಸಿಗರಿಂದ ತುಂಬಿತ್ತು.
ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರು ಬರುವುದು ವಾಡಿಕೆ. ಜನಸಂದಣಿ, ವಾಹನ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ, ವಾಹನ ನಿಲುಗಡೆ ಸಮಸ್ಯೆ ನಿರಂತರವಾಗಿದೆ. ವಸತಿಗೃಹಗಳು ಭರ್ತಿಯಾಗಿರುವುದರಿಂದ ಪ್ರವಾಸಿಗರು ತಂಗಲು ಪರಡಾಡು ತ್ತಿರುವುದು ಕಂಡುಬರುತ್ತಿದೆ. ದಿನದಲ್ಲಿ ಅಂದಾಜು ದಿನದಲ್ಲಿ 20 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಶೃಂಗೇರಿಗೆ ಭೇಟಿ ನೀಡುತ್ತಿದ್ದಾರೆ.ಅಕ್ಷರಭ್ಯಾಸ ಮಂಟಪ, ಶ್ರೀ ಶಾರದಾಂಬಾ ದೇವಾಲಯ, ಬೋಜನಾ ಶಾಲೆಯೆದುರು ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕಂಡಕಂಡಲ್ಲಿ ವಾಹನಗಳು ನಿಲುಗಡೆಯಾಗುತ್ತಿದೆ. ಶ್ರೀ ಮಠದ ಎದುರಿನ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಜನ ಜಂಗುಳಿಯೇ ಇರುತ್ತಿದೆ. ಭಾನುವಾರವೂ ರಜೆ, ಮಂಗಳವಾರ ಇಯರ್ ಎಂಡ್ ಇರುವುದರಿಂದ ಪ್ರವಾಸಿಗರ ಸಂಖ್ಯೆ ದುಪ್ಪಟ್ಟು ಆಗುವ ನಿರೀಕ್ಷೆಗಳಿವೆ.
28 ಶ್ರೀ ಚಿತ್ರ 1-ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಶನಿವಾರ ಕಂಡುಬಂದ ಭಕ್ತರ ದಂಡು28 ಶ್ರೀ ಚಿತ್ರ 2-ಶೃಂಗೇರಿ ಪಟ್ಟಣದಲ್ಲಿ ಪ್ರವಾಸಿ ವಾಹನಗಳು,ಜನಸಂದಣಿಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿರುವುದು.
--ಪ್ರವಾಸಿಗರ ಕೈ ಬೀಸಿ ಕರೆದಿದೆ ಸಿರಿಮನೆ ಜಲಪಾತ
ಶೃಂಗೇರಿ: ದುಮ್ಮುಕ್ಕಿ ಹರಿಯುತ್ತಿರುವ ಸಿರಿಮನೆ ಜನಪಾತ ವೀಕ್ಷಣೆಗೆ ವಿವಿಧೆಡೆಗಳಿಂದ ಪ್ರವಾಸಿಗರು ಹರಿದು ಬರುತ್ತಿದ್ದಾರೆ.ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಸಮೀಪದ ಈ ಜಲಪಾತ ಈ ವರ್ಷ ಬಿದ್ದ ಅತ್ಯಧಿಕ ಮಳೆ ಯಿಂದ ಮೈದುಂಬಿ ಹರಿಯುತ್ತಿದೆ. ಹಾಗಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.ಕಳೆದ ಕೆಲ ದಿನ ರಜೆ ಹಿನ್ನೆಲೆಯಲ್ಲಿ ಜಲಪಾತ ವೀಕ್ಷಕರಿಂದ ಕಿಕ್ಕಿರಿದಿದೆ. ಇತ್ತೀಚೆಗೆ ಜಲಪಾತ ಸುತ್ತ ಅಭಿವೃದ್ಧಿ ಕಾಮಗಾರಿ ನಡೆದುವೀಕ್ಷಣಾ ಗೋಪುರ, ಮೆಟ್ಟಿಲುಗಳ ಪುನರ್ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿಗೊಂಡಿರುವುದರಿಂದ ಪ್ರಕೃತಿ ನಡುವೆ ಸುಂದರ ವಾತಾವರಣ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತಿದೆ. ಪಶ್ಚಿಮಘಟ್ಟಗಳ ತಪ್ಪಲು ನಿತ್ಯಹರಿದ್ವರಣದ ಕಾಡುಗಳು, ನರಸಿಂಹ ಪರ್ವತದ ತಪ್ಪಲಲ್ಲಿರುವ ಶೃಂಗೇರಿಯಿಂದ 10 ಕಿ. ಮೀ. ದೂರದ ಈ ಜಲಪಾತ ವೀಕ್ಷಣೆಗೆ ಶೃಂಗೇರಿಗೆ ಭೇಟಿ ನೀಡಿದ ಪ್ರವಾಸಿಗರು ಇಲ್ಲಿಗೂ ಬರುತ್ತಾರೆ. ಸುಸಜ್ಜಿತ ರಸ್ತೆ, ಜಲಪಾತ ಸಮೀಪ ಮೂಲಭೂತ ಸೌಕರ್ಯ ಗಳು ಉತ್ತಮವಾಗಿರುವುದರಿಂದ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೊಬಗಿನ ವೀಕ್ಷಣೆಗೆ ಭೇಟಿ ನೀಡುತ್ತಿದ್ದಾರೆ.ಶುಕ್ರವಾರದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಶನಿವಾರವೂ ಜನಸಂದಣಿ ಇತ್ತು. ಭಾನುವಾರ ಹಾಗೂ ಡಿಸೆಂಬರ್ ಕೊನೆಯವರೆಗೂ ಪ್ರವಾಸಿಗರು ದಂಡು ಇಲ್ಲಿಗೆ ಹರಿದು ಬರುವ ನಿರೀಕ್ಷೆಯಿದೆ.
28 ಶ್ರೀ ಚಿತ್ರ 4-ಶೃಂಗೇರಿ ಸಮೀಪದ ಕಿಗ್ಗಾದಲ್ಲಿರುವ ಸಿರಿಮನೆ ಜಲಪಾತ