ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ತುಂಗಭದ್ರಾ ಜಲಾಶಯಕ್ಕೆ ಪ್ರವಾಸಿಗರ ಲಗ್ಗೆ

KannadaprabhaNewsNetwork | Published : Jul 29, 2024 12:53 AM

Tourists flock to Tungabhadra reservoir

ಕನ್ನಡಪ್ರಭ ವಾರ್ತೆ ಕೊಪ್ಪಳ

ನಾಲ್ಕಾರು ವರ್ಷಗಳಿಂದ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದೇ ಅಪರೂಪ, ಭರ್ತಿಯಾಗಿದ್ದರೂ ಇಷ್ಟೊಂದು ಒಳಹರಿವು ಇರದೆ ಇದ್ದಿದ್ದರಿಂದ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಬಿಟ್ಟಿದ್ದು ಅಷ್ಟುಕಷ್ಟೇ. ಆದರೆ, ಈ ವರ್ಷ ಜುಲೈ ತಿಂಗಳಾಂತ್ಯಕ್ಕೆ ತುಂಗಭದ್ರಾ ಜಲಾಶಯಕ್ಕೆ ಭರಪೂರ ನೀರು ಹರಿದುಬರುತ್ತಿರುವುದರಿಂದ 33 ಕ್ರಸ್ಟ್ ಗೇಟ್ ತೆರೆದು, ನದಿಗೆ ನೀರುಬಿಟ್ಟಿರುವುದನ್ನು ನೋಡಲು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ತುಂಗಭದ್ರಾ ನದಿ ನೀರು ಹರಿಯುತ್ತಿರುವ ಪ್ರದೇಶ ವ್ಯಾಪ್ತಿಯಲ್ಲಿ ಜನವೋ ಜನ.

ಹೌದು, ತುಂಗಭದ್ರಾ ಜಲಾಶಯ ನಯನಮನೋಹರ ದೃಶ್ಯವನ್ನು ಕಣ್ಮುಂಬಿಕೊಳ್ಳಲು ಪ್ರವಾಸಿಗರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ತುಂಗಭದ್ರಾ ಜಲಾಶಯ ಈಗ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ.

ಸಾಮಾನ್ಯವಾಗಿ ಜಲಾಶಯದಿಂದ ಈ ರೀತಿಯಾಗಿ ನೀರು ನದಿಯ ಮೂಲಕ ಬಿಡುವುದು ಅಪರೂಪ. ಜಲಾಶಯದ ಒಳಹರಿವುದು ಹೀಗೆ ನಿರಂತರವಾಗಿ ಬರುವ ವೇಳೆಯಲ್ಲಿ ಮಾತ್ರ ಬಿಡುತ್ತಾರೆ. ಇಲ್ಲದಿದ್ದರೇ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೋಡುವುದಕ್ಕಷ್ಟೇ ಕ್ರಸ್ಟ್ ಗೇಟ್ ತೆರೆದು, ಕೆಲಕಾಲ ಮಾತ್ರ ನೀರು ಬಿಡುವ ಸಂಪ್ರದಾಯ ಇದೆ.

ಸೆಲ್ಫಿ ಹುಚ್ಚಾಟ:ಕ್ರಸ್ಟ್ ಗೇಟ್ ತೆರೆದು ನೀರು ಬಿಟ್ಟಿರುವುದರಿಂದ ನದಿಯ ಕೆಳಭಾಗದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟದಲ್ಲಿ ಜನರು ಮುಳುಗಿದ್ದಾರೆ. ಈ ಕುರಿತು ಎಷ್ಟೇ ಎಚ್ಚರಿಕೆ ನೀಡಿದರೂ ಸಹ ಜನರು ತಮ್ಮ ಹುಚ್ಚಾಟವನ್ನು ಮುಂದುವರೆಸಿರುವುದು ಮಾತ್ರ ಬೇಸರದ ಸಂಗತಿ.

ಡಂಗೂರ:

ಜಿಲ್ಲಾಡಳಿತ ಈ ಕುರಿತು ಭಾರಿ ಎಚ್ಚರಿಕೆ ವಹಿಸಿದೆ. ತುಂಗಭದ್ರಾ ನದಿಯುದ್ದಕ್ಕೂ ಇರುವ ಗ್ರಾಮಗಳಲ್ಲಿ ನಿತ್ಯವೂ ಡಂಗುರ ಸಾರಲಾಗುತ್ತದೆ. ನದಿಯಲ್ಲಿ ಪ್ರವಾಹ ಇರುವುದರಿದ ದನಕರುಗಳನ್ನು ನದಿಯ ಹತ್ತಿರಬಿಡಬಾರದು ಮತ್ತು ಮಕ್ಕಳನ್ನು ಸಹ ನೀರಿನಲ್ಲಿ ಆಟವಾಡಲು ಕಳುಹಿಸಬಾರದು ಎಂದು ಜಾಗೃತಿ ಮೂಡಿಸಲಾಗುತ್ತಿದೆ.

ತುಂಗಭದ್ರಾ ಜಲಾಶಯ ಬೇಗನೆ ಭರ್ತಿಯಾಗಿರುವುದು ನಿಜಕ್ಕೂ ಸಂತೋಷ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಎರಡು ಬೆಳೆ ಬರುವುದಕ್ಕೆ ಸಹಕಾರಿಯಾಗುವಂತೆ ಇನ್ನಷ್ಟು ದಿನಗಳ ಕಾಲ ಒಳಹರಿವು ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯಕ್ಕೆ ವಿಪರೀತ ನೀರು ಹರಿದುಬರುತ್ತಿದೆ. ಹೀಗಾಗಿ, ನದಿಯಲ್ಲಿ ಪ್ರವಾಹ ಇರುವುದರಿಂದ ಜನರು ಜಾಗೃತಿಯನ್ನು ವಹಿಸಬೇಕು. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಮೈಮರೆಯದಿರಿ ಎಂದು ಡಿಸಿ ನಲಿನ್ ಅತುಲ್ ತಿಳಿಸಿದ್ದಾರೆ.