ಬಳ್ಳಾರಿ: ಅಮೆರಿಕ ದೇಶದೊಂದಿಗೆ ಭಾರತ ಮಾಡಿಕೊಂಡಿರುವ ವಾಣಿಜ್ಯ ವ್ಯವಹಾರ ಒಪ್ಪಂದದಿಂದ ದೇಶದ ಕೃಷಿ ವಲಯವನ್ನು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಕೊಳ್ಳಲಿದೆ. ಇದರಿಂದ ಕೃಷಿಯನ್ನೇ ಆಶ್ರಯಿಸಿರುವ ರೈತರ ಬದುಕು ಅಪಾಯದ ಅಂಚಿಗೆ ತಲುಪುವ ಸಾಧ್ಯತೆಯಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು ಆತಂಕ ವ್ಯಕ್ತಪಡಿಸಿದರು.ಇಲ್ಲಿನ ಬಿಡಿಎಎ ಫುಟ್ಬಾಲ್ ಮೈದಾನ ಸಭಾಂಗಣದಲ್ಲಿ ರಾಜ್ಯರೈತ ಸಂಘ ಹಾಗೂ ಹಸಿರುಸೇನೆಯಿಂದ ಆಯೋಜಿಸಿದ್ದ ಭಾರತ-ಯುಎಸ್ ವ್ಯಾಪಾರ ಒಪ್ಪಂದ ಕೃಷಿ ಮತ್ತು ಕೈಗಾರಿಕಾ ವಲಯಗಳ ಮೇಲಿನ ಪರಿಣಾಮ ಕುರಿತು ಜರುಗಿದ ಜಾಗೃತಿ ಅಧಿವೇಶನದಲ್ಲಿ ಅವರು ಮಾತನಾಡಿದರು.
ವಕೀಲ ಹಾಗೂ ಚಾಗನೂರು ವಿಮಾನ ನಿಲ್ದಾಣ ಹೋರಾಟಗಾರ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಈ ಹಿಂದೆ ವ್ಯಾಪಾರದ ಹೆಸರಿನಲ್ಲಿ ಭಾರತಕ್ಕೆ ಬಂದ ವಿದೇಶಿಯರು ನಮ್ಮನ್ನು ಗುಲಾಮರನ್ನಾಗಿಸಿಕೊಂಡಿದ್ದರು. ಇದೀಗ ವಿದೇಶಿ ಒಪ್ಪಂದಗಳು ಮತ್ತೆ ನಮ್ಮನ್ನು ಗುಲಾಮಗಿರಿಗೆ ತಳ್ಳುತ್ತಿವೆ ಎಂದರು.
ಅಧಿವೇಶನಕ್ಕೆ ಚಾಲನೆ ನೀಡಿದ ಹಿರಿಯ ಆರ್ಥಿಕ ಚಿಂತಕ ಹಾಗೂ ಲೇಖಕ ಡಾ.ಟಿ.ಆರ್.ಚಂದ್ರಶೇಖರ್, ಅಮೆರಿಕಾ ಜೊತೆಗಿನ ವಾಣಿಜ್ಯ ಒಪ್ಪಂದ ಇಲ್ಲಿನ ಸಾರ್ವಭೌಮತೆಯನ್ನು ನಾಶ ಮಾಡುತ್ತಿದೆ. ಅಮೆರಿಕದ 12 ಕೋಟಿ ಜನರ ಹಿತಕಾಯಲು ಭಾರತದ 140 ಕೋಟಿ ಜನರನ್ನು ಬಲಿಕೊಡಲಾಗುತ್ತಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ಪೆಟ್ರೋಲ್ನ್ನು ಬಿಟ್ಟು ಅಮೆರಿಕಾದಿಂದ ಖರೀದಿ ಮಾಡಲಾಗುತ್ತಿದೆ. ಕೇಂದ್ರದ ನೀತಿಗಳು ಭಾರತದ ಆರ್ಥಿಕ ಪ್ರಗತಿ ಹಾಗೂ ಸಾರ್ವಭೌಮತೆಗೆ ಕುತ್ತು ತರುತ್ತಿವೆ ಎಂದು ಹೇಳಿದರು.ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಹುಚ್ಚುಸಾಬ್ ರೂಪಾಯಿ ಮೌಲ್ಯ ಕುಸಿತ ಮತ್ತು ನೋಟ್ ಬ್ಯಾನ್ನಿಂದ ಎದುರಾದ ಆರ್ಥಿಕ ಮುಗ್ಗಟ್ಟು ಕುರಿತು ಮಾತನಾಡಿದರು.