ಕನ್ನಡಪ್ರಭ ವಾರ್ತೆ ತಲಕಾಡು
ತಲಕಾಡು-ಹೆಮ್ಮಿಗೆ ಸಂಪರ್ಕ ಸೇತುವೆ ಮೇಲಿನ ಸಂಚಾರ ಬುಧವಾರ ಮತ್ತೆ ಸ್ಥಗಿತಗೊಂಡಿತು.ಬೆಳಗ್ಗೆ ಪಶ್ಚಿಮ ದಿಕ್ಕಿನ ಸೇತುವೆ ತಡೆ ಗೋಡೆಗೆ ಪ್ರವಾಹದ ನೀರು ಸ್ಪರ್ಶವಾಗುತ್ತಿದ್ದಂತೆ ಸೇತುವೆ ಎರಡು ದಿಕ್ಕಿನ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಸೇತುವೆ ಮೇಲಿನ ಸಂಚಾರವನ್ನು ಪೂರ್ಣ ಬಂದ್ ಮಾಡಲಾಯಿತು.
ತಲಕಾಡಿಗೆ ಹೆಬ್ಬಾಗಿಲಾದ ಹೆಮ್ಮಿಗೆ ಸೇತುವೆ ಬಂದ್ ನಿಂದ ಎಂದಿನಂತೆ ಸೇತುವೆ ಮೇಲೆದೈನಂದಿನ ಸಂಚರಿಸುವ ಜನವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿಕೊಂಡರು. ಹೀಗಾಗಿ ಟಿ. ನರಸೀಪುರ, ಸೋಸಲೆ, ಪೂರಿಗಾಲಿ ಅಥವಾ ಮಾದಾಪುರ, ಕಲಿಯೂರು, ಮುಳ್ಳೂರು, ಕಾವೇರಿಪುರ ನೂತನ ಸೇತುವೆ ಬಳಸು ಮಾರ್ಗವಾಗಿ ತಲಕಾಡಿಗೆ ಪ್ರಯಾಣಿಸಿದರು.ನ್ಯಾಯಾಧೀಶರಿಂದ ಪರಿಶೀಲನೆ:
ಟಿ.ನರಸೀಪುರ ತಾಲೂಕು ಸಿವಿಲ್ ನ್ಯಾಯಾಧೀಶ ಶ್ಯಾಮ್ ಪ್ರಕಾಶ್, ಹಿರಿಯ ಸಿವಿಲ್ನ್ಯಾಯಾಧೀಶ ಜಿ.ಎಚ್. ಹನುಮಂತ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೆ.ಎನ್. ವೆಂಕಟೇಶ್ ಅವರು ಪ್ರವಾಹ ಪರಿಸ್ಥಿತಿ ಪರಿವೀಕ್ಷಣೆಗೆ ಸಂಜೆ ತಡಿಮಾಲಂಗಿ ಗ್ರಾಮಕ್ಕೆ ಆಗಮಿಸಿದ್ದರು. ಪ್ರವಾಹ ಪೀಡಿತರಿಗೆ ಗ್ರಾಮದ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಇಲ್ಲಿನ ವ್ಯವಸ್ಥೆಗಳ ಪರಿಶೀಲಿಸಿದರು.ಇದಕ್ಕೂ ಮುನ್ನಾ ಬೆಳಗ್ಗೆ ಹೆಮ್ಮಿಗೆ ಸೇತುವೆ ಬಳಿಗೆ ಜಿಲ್ಲಾ ಉಪವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಸುರೇಶಾಚಾರ್, ತಾಪಂ ಇಒ, ಸಿ. ಕೃಷ್ಣ, ಸೆಸ್ಕ್ ಎಇಇ ವೀರೇಶ್ ಭೇಟಿ ನೀಡಿದ್ದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ ಅವರು ಮಾದಾಪುರ ಮಾರ್ಗವಾಗಿ ತಡಿಮಾಲಂಗಿ ಪ್ರವಾಹ ಪೀಡಿತ ಗ್ರಾಮಕ್ಕೆ ಪ್ರತ್ಯೇಕವಾಗಿ ತೆರಳಿ ಪ್ರವಾಹದ ಪರಿಸ್ಥಿತಿ ಹಾಗೂ ಕಾಳಜಿ ಕೇಂದ್ರದ ವ್ಯವಸ್ಥೆ ಪರಿಶೀಲಿದರು.ತೇಲಿ ಬಂದ ಅಪರಿಚಿತ ಶವ:
ಪ್ರವಾಹದ ನಡುವೆ ತೇಲಿ ಬಂದ ಅಪರಿಚಿತ ಪುರುಷ ಶವ (45) ಹೆಮ್ಮಿಗೆ ಸೇತುವೆ ಬಳಿಯ ಜೊಂಡಿನಲ್ಲಿ ಸಿಲುಕಿಕೊಂಡಿದ್ದನ್ನು ದಡಕ್ಕೆ ಸಾಗಿಸಿರುವ ಪೊಲೀಸರು, ಶವದ ಗುರುತು ಪತ್ತೆ ಹಚ್ಚಲು ಮುಂದಿನ ಕ್ರಮ ಕೈಗೊಂಡಿದ್ದಾರೆ.ಮುಂದುವರೆದ ಪ್ರವಾಸಿ ನಿರ್ಬಂಧ:
ಪ್ರವಾಹ ಎಂದಿನಂತೆ ತಲಕಾಡಿಗೆ ಜಲದಿಗ್ಭಂದನ ಮುಂದುವರೆಸಿದ್ದು, ಮೊದಲ ಪ್ರವಾಹಕ್ಕೆ ಮುಳುಗಡೆಯಾಗಿದ್ದ ಸ್ಥಳಗಳ ಸುತ್ತ ಎರಡನೇ ಬಾರಿ ಬಂದಿರುವ ಪ್ರವಾಹ ಮತ್ತೆ ಜಲಾವೃತಗೊಳಿಸಿದೆ. ಮಾಧವಮಂತ್ರಿ ಅಣೆಕಟ್ಟೆ ಹಳೇತಲಕಾಡಿನ ಅರಣ್ಯ ನಿಸರ್ಗಧಾಮಕ್ಕೆ ಪ್ರವಾಸಿಗರ ನಿರ್ಬಂಧ ಮತ್ತೆ ಮುಂದುವರೆಸಲಾಗಿದೆ.ತಲಕಾಡು ಠಾಣೆಯ ಸಿಪಿಐ ಆನಂದ್ ಕುಮಾರ್, ಗ್ರಾಪಂ ಪಿಡಿಒ ಮಹೇಶ್, ಹೆಮ್ಮಿಗೆ ಪಿಡಿಒ, ಚಿದಾನಂದ, ಬಿಲ್ ಕಲೆಕ್ಟರ್ ನಾಗಣ್ಣ, ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಾಣಿ, ಸದಸ್ಯ ಚಿಕ್ಕ ಮಾದನಾಯಕ, ಮುಖಂಡ ಮಹದೇಶ ಇದ್ದರು.ಕಾಳಜಿ ಕೇಂದ್ರದಲ್ಲಿರುವ ವೃದ್ಧೆಗೆ ಮೊಬೈಲ್ ಮೂಲಕ ಸಿಎಂ ಸಾಂತ್ವನ
ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾಗಿರುವ ಕುಟುಂಬದವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆಯ ಬಗ್ಗೆ ವಿವರ ಪಡೆದು ಸಾಂತ್ವನ ಹೇಳಿದರು.ಮೆಪ್ಪಾಡಿಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ 70 ವರ್ಷದ ಮಹದೇವಿ ಅವರು ಮೂಲತಃ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದವರು. ಮಹದೇವಿ ಅವರು ತಮ್ಮ ಕುಟುಂಬದ ಎಲ್ಲ 9 ಜನರನ್ನೂ ಕಳೆದುಕೊಂಡಿದ್ದು, ತಮ್ಮ ಮನೆಯವರ ಮೃತದೇಹಗಳನ್ನು ಗುರುತಿಸಲು ಶವಾಗಾರದ ಬಳಿ ಕಾಯುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಮಾತನಾಡಿದರು. ಮಹದೇವಿ ಅವರ ಜತೆಗಿದ್ದ 34 ವರ್ಷದ ಚೈತ್ರಾ ಅವರ ಜೊತೆಗೂ ಮಾತನಾಡಿದ ಸಿಎಂ, ಸೂಕ್ತ ನೆರವು ನೀಡುವ ಭರವಸೆ ನೀಡಿದರು. ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಕರ್ನಾಟಕ ಮೂಲದ ಕುಟುಂಬಗಳ ಬಗ್ಗೆ ಅಧಿಕಾರಿಗಳಿಂದ ಸಿಎಂ ಮಾಹಿತಿ ಸಂಗ್ರಹಿಸಿದರು.