ಹೊನ್ನಾವರ: ನಿಮ್ಮ ಕೆಲಸ ನೀವೆ ಮಾಡಬೇಕು. ನಾವು ಆದೇಶ ಮಾಡಬಹುದು, ನಿಮ್ಮ ಕೆಲಸ ಮಾಡದಿದ್ದರೆ ಯಾರೇ ಹೇಳಿದರೂ ಜಿಲ್ಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅನುದಾನ ತರುವುದು ನಮ್ಮ ಕೆಲಸ. ಜನರ ಕೆಲಸ ಮಾಡಿಕೊಡುವುದು ನಿಮ್ಮ ಕೆಲಸ ಎಂದು ಅಧಿಕಾರಿ ವರ್ಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಖಡಕ್ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮನ್ನು ಆಯ್ಕೆ ಮಾಡಿರುವುದು ಕೆಲಸ ಮಾಡಿಕೊಡಲು. ನಿಮ್ಮದೇ ಆದ ವ್ಯವಸ್ಥೆ ಮಾಡಿಕೊಳ್ಳುವುದಲ್ಲ. ನಿಮ್ಮ ವರ್ತನೆ ನಮ್ಮ ಗಮನಕ್ಕೂ, ಜನಸಾಮಾನ್ಯರ ಗಮನಕ್ಕೂ ಬಂದಿದೆ. ಜನರಿಗಾಗಿ ನಿಯಮ ಬದಲಾಯಿಸಿ ಕೆಲಸ ಮಾಡಿ. ರಾಜಕಾರಣಿಗಳಿಗಾಗಿ ಮಾಡಬೇಡಿ. ಇಷ್ಟು ದಿನ ಸಮ್ಮನಿದ್ದರೂ ನಿಮ್ಮ ಕಾರ್ಯವೈಖರಿ ಬದಲಾಗದೆ ಇದ್ದದ್ದು ನೋಡಿದರೆ ನಿಮ್ಮ ಜತೆ ನಾನು ಶಾಮೀಲಾಗಿದ್ದೇನೆ ಎನ್ನುತ್ತಾರೆ. ಹಾಗೆ ಆಗಬಾರದು. ಪ್ರೀತಿಯಿಂದ ಕೆಲಸ ಮಾಡಲು ಆಗುವುದಾದರೆ ಇರಿ, ಇಲ್ಲದಿದ್ದರೆ ನಾನೇ ವರ್ಗಾವಣೆ ಮಾಡಿಸುತ್ತೇನೆ. ಬಂದ ಅನುದಾನ ಖಾಲಿ ಮಾಡದೇ ರಾಜಕಾರಣ ಮಾಡುತ್ತಿರುವ ಇಲಾಖೆಯು ಇದೆ. ರಾಜಕಾರಣ ಮಾಡಲು ನಾವಿದ್ದೇನೆ. ಜನಸಾಮಾನ್ಯರಿಗೆ ಬಡವರಿಗೆ ಏನು ಮಾಡಿದರೆ ಒಳ್ಳೆಯದಾಗಲಿದೆ, ತಮ್ಮ ಇಲಾಖೆಯಿಂದ ಏನು ಸೌಲಭ್ಯ ನೀಡಬಹುದು, ಯಾವುದೇ ಕೊರತೆ ಇದೆ ಎನ್ನುವ ಮಾಹಿತಿ ನೀಡಿ ಯಾವ ಇಲಾಖೆಯ ಅಧಿಕಾರಿಗೂ ಸಮಸ್ಯೆ ಬಗೆಹರಿಸಲು ಯಾವ ಅಧಿಕಾರಿಯು ಮುಂದಾಗಿಲ್ಲ. ಜನಸಾಮಾನ್ಯರು ಕಟ್ಟಿದ ತೆರಿಗೆ ನಮಗೆ- ನಿಮಗೆ ಸಂಬಳ ಓಡಾಡಲೂ ಕಾರು ಇದೆ. ಅವರ ಸಮಸ್ಯೆಗೆ ಸ್ಪಂದಿಸೋಣ ಎಂದರು.ಡೆಂಘೀ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಹೆಚ್ಚಿನ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಜಾಗೃತಿ ಮೂಡಿಸುವಂತೆ ಸೂಚಿಸಿದರು. ಗ್ರಾಮೀಣ ಮಟ್ಟದಲ್ಲಿ ಕಸ ವಿಲೇವಾರಿ ವಾಹನದ ಮೂಲಕ ಜಾಗೃತಿ ಮೂಡಿಸಲು ಹಲವು ವಾಹನಗಳಿಗೆ ಚಾಲಕರೆ ಇಲ್ಲ. ಮಂಕಿ ಪಪಂ ವ್ಯಾಪ್ತಿಗೆ ಎಡು ವರ್ಷದ ಹಿಂದೆ ವಾಹನ ಬಂದರು ಚಾಲಕರಿಲ್ಲ. ಇಂತಹ ವ್ಯವಸ್ಥೆಯಿಂದ ನಾವು ಹೊರಬರಬೇಕಿದೆ. ಗ್ರಾಪಂ ಮಟ್ಟದಲ್ಲಿ ಫಾಗಿಂಗ್ ವ್ಯವಸ್ಥೆ ಕಲ್ಪಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಭಟ್ಕಳ ವ್ಯಾಪ್ತಿಯಲ್ಲಿ ಎಂಡೊಸಲ್ಫಾನ್ ಶಿಬಿರದ ಮೂಲಕ 111 ಹೊಸ ಪ್ರಕರಣ ಪತ್ತೆಯಾಗಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದರು. ಅದೇ ಮಾದರಿಯಲ್ಲಿ ಹೊನ್ನಾವರದಲ್ಲಿಯೂ ಶಿಬಿರ ನಡೆಸಲು ಸಚಿವರು ಸೂಚಿಸಿದರು. ಎಂಡೊಸಲ್ಪಾನ್ ಪೀಡಿತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಬೇಕು. ಇದರಿಂದ ಯಾರೊಬ್ಬರೂ ವಂಚಿತರಾಗದಂತೆ ಕ್ರಮ ವಹಿಸಿ ಎಂದರು.ಪಪಂನಲ್ಲಿ ಇ- ಸ್ವತ್ತು, ಪರವಾನಗಿ ಪತ್ರ ನೀಡಲು ವಿಳಂಬ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿ ಬರುತ್ತಿದ್ದು, ಅರ್ಜಿ ಬಂದು 10 ದಿನದೊಳಗೆ ಕೆಲಸ ಮುಗಿಸುವಂತೆ ಮುಖ್ಯಾಧಿಕಾರಿಗಳಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗಧಿಕಾರಿ ಡಾ. ನಯನಾ ಎಸ್., ಜಿಪಂ ಯೋಜನಾಧಿಕಾರಿ ವಿನೋದ ಅಣ್ವೇಕರ್, ತಹಸೀಲ್ದಾರ್ ರವಿರಾಜ ದಿಕ್ಷೀತ್, ತಾಪಂ ಇಒ ಜಿ.ಎಸ್. ನಾಯ್ಕ ಉಪಸ್ಥಿತರಿದ್ದರು.