ಮಂಗಳಮುಖಿ ಈಗ ಬಳ್ಳಾರಿ ವಿವಿ ಕನ್ನಡ ಪ್ರಾಧ್ಯಾಪಕಿ! - ತೃತೀಯ ಲಿಂಗಿಗೆ ಈ ಹುದ್ದೆ ಸಿಕ್ಕಿದ್ದು ರಾಜ್ಯದಲ್ಲೇ ಮೊದಲು

KannadaprabhaNewsNetwork | Updated : Dec 17 2024, 05:00 AM IST

ಸಾರಾಂಶ

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ ಶಿಕ್ಷಣದ ಬಲವೊಂದಿದ್ದರೆ ಬದುಕಿನ ಅನೇಕ ಸಂಕಷ್ಟಗಳ ಹಾದಿಯನ್ನು ಸಲೀಸಾಗಿ ದಾಟಬಹುದು ಎಂಬುದನ್ನು ಸಾಬೀತುಗೊಳಿಸಿದ್ದಾರೆ.

ಮಂಜುನಾಥ ಕೆ.ಎಂ.

 ಬಳ್ಳಾರಿ : ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ ಶಿಕ್ಷಣದ ಬಲವೊಂದಿದ್ದರೆ ಬದುಕಿನ ಅನೇಕ ಸಂಕಷ್ಟಗಳ ಹಾದಿಯನ್ನು ಸಲೀಸಾಗಿ ದಾಟಬಹುದು ಎಂಬುದನ್ನು ಸಾಬೀತುಗೊಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕಿಯಾಗಿ ಸೇವೆ ಆರಂಭಿಸಿದ್ದಾರೆ.

ಮಂಗಳಮುಖಿಯೊಬ್ಬರು ವಿಶ್ವವಿದ್ಯಾಲಯವೊಂದರಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಮಾಡಲು ಅವಕಾಶ ಪಡೆದುಕೊಂಡಿರುವುದು ರಾಜ್ಯದಲ್ಲಿ ಇದೇ ಮೊದಲು. ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಮೂವರು ಮಂಗಳಮುಖಿಯರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದರಾದರೂ ಉನ್ನತ ಶಿಕ್ಷಣ ಪಡೆದು ವಿವಿಯಲ್ಲಿ ಪ್ರಾಧ್ಯಾಪಕಿಯಾಗಿದ್ದು ಇದೇ ಪ್ರಥಮ.

ಯಾರು ಈ ರೇಣುಕಾ ಪೂಜಾರಿ?:

ರೇಣುಕಾ ಪೂಜಾರಿ (ಹಿಂದಿನ ಹೆಸರು- ಮಲ್ಲೇಶ್ ಕೆ.) ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದವರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿ, ಪದವಿಪೂರ್ವ ಶಿಕ್ಷಣವನ್ನು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ (ಮುನ್ಸಿಪಲ್‌) ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣವನ್ನು ಕುರುಗೋಡಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು (ಎಂಎ-ಕನ್ನಡ) ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಅಭ್ಯಾಸ ಮಾಡಿದ್ದಾರೆ.

ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ರೆಗ್ಯುಲರ್ ಆಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಪದವಿ ವಿದ್ಯಾರ್ಥಿಯಾಗಿರುವ ವೇಳೆ ದೇಹದಲ್ಲಿ ನೈಸರ್ಗಿಕ ಬದಲಾವಣೆ ಆದ ಹಿನ್ನೆಲೆಯಲ್ಲಿ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಎಸ್‌ಎಸ್ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ.70ರಷ್ಟು ಅಂಕಗಳನ್ನು ಪಡೆದಿರುವ ಇವರು, ವಿಶ್ವವಿದ್ಯಾಲಯದ ಪೂರ್ಣಕಾಲಿಕ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಆಸೆ ಹೊತ್ತಿದ್ದಾರೆ.

ನೀಟ್ ಪರೀಕ್ಷೆ ಬರೆದಿರುವ ರೇಣುಕಾ ಅವರನ್ನು ಯುಜಿಸಿಯು ತೃತೀಯ ಲಿಂಗಿ ಮೀಸಲಾತಿ ಅಡಿಯಲ್ಲಿ ಪರಿಗಣಿಸಿದ್ದರೆ, ಇಷ್ಟೊತ್ತಿಗೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುತ್ತಿದ್ದರು. ಒಬಿಸಿ ಎಂದು ಪರಿಗಣಿಸಿದ್ದರಿಂದ ನೀಟ್ ಪರೀಕ್ಷೆ ಫಲಿತಾಂಶ ನೆನೆಗುದಿಗೆ ಬಿದ್ದಿದೆ. ಇದಕ್ಕಾಗಿ ರೇಣುಕಾ ಕಳೆದ 2 ವರ್ಷಗಳಿಂದ ಹೋರಾಟ ನಡೆಸಿದ್ದಾರೆ.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಅರೆಕಾಲಿಕ ಸಹಾಯಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳಲು ಬಳ್ಳಾರಿ ವಿಶ್ವವಿದ್ಯಾಲಯದ ಕುಲಸಚಿವ ಎಸ್‌.ಎನ್. ರುದ್ರೇಶ್ ಕಾರಣ. ಪಿಜಿ ಸೆಂಟರ್‌ನಲ್ಲಿರುವ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿ, ಪ್ರೋತ್ಸಾಹಿಸಿದರು. ಪಿಎಚ್‌ಡಿ ಮಾಡಬೇಕು ಎಂಬ ಕನಸಿದೆ.

-ರೇಣುಕಾ ಪೂಜಾರಿ, ನಂದಿಹಳ್ಳಿ ಪಿಜಿ ಸೆಂಟರ್‌ನ ಅರೆಕಾಲಿಕ ಕನ್ನಡ ಸಹಾಯಕ ಪ್ರಾಧ್ಯಾಪಕಿ, ಬಳ್ಳಾರಿ

Share this article