ಚಿಂತಾಮಣಿ: ಕಂದಾಯ ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಗ್ರಾಮಗಳ ವ್ಯಾಪ್ತಿಯಲ್ಲಿಯೇ ಕಂದಾಯ, ಪಿಂಚಣಿ ಅದಾಲತ್ ಹಾಗೂ ಫವತಿ ಖಾತೆ ಆಂದೋಲನಗಳನ್ನು ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರು ಅದಾಲತ್ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಕೆ.ಆರ್.ಸುದರ್ಶನ ಯಾದವ್ ಹೇಳಿದರು.
ಆಧಾರ್ ಜೋಡಣೆ ಕಡ್ಡಾಯ
ಇತ್ತೀಚೆಗೆ ಪಹಣಿ ದುರ್ಬಳಕೆ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪಹಣಿಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿದೆ. ಇದರಿಂದ ಪಹಣಿ ದುರ್ಬಳಕೆಗೆ ಅವಕಾಶವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಪಹಣಿಗೆ ಆಧಾರ್ ನಂಬರ್ ಜೋಡಣೆ ಮಾಡಬೇಕು ಎಂದರು.ಅಧಿಕಾರಿಗಳನ್ನು ಭೇಟಿ ಮಾಡಿ
ವಿಧವಾ ವೇತನ, ವೃದ್ಧಾಪ್ಯ ವೇತನಕ್ಕೆ ಅರ್ಹರು ಅರ್ಜಿ ಸಲ್ಲಿಸಿ ವೇತನ ಪಡೆದು ನೆಮ್ಮದಿಯ ಜೀವನ ನಡೆಸಬಹುದು. ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಬೇರೆಯವರ ಮೂಲಕ ಹೋಗಿ ಹಣ ವ್ಯರ್ಥ ಮಾಡಬಾರದು ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಹೆಚ್ಚುವರಿ ಶಿರಸ್ತೇದಾರ್ ರವೀಶ್, ಶೋಭಾ, ರಾಜಸ್ವ ನಿರೀಕ್ಷಕ ಗೋಕುಲ್, ಗ್ರಾಮ ಲೆಕ್ಕಿಗರಾದ ಸುಧಾಕರ್, ನಾಗವೇಣಿ, ಅಲ್ಫಿಯ, ಸುನೀಲ್, ಕಂದಾಯ ಇಲಾಖೆಯ ಸಿಬ್ಬಂದಿ, ಫಲಾನುಭವಿಗಳು ಇದ್ದರು.