ಕೊಪ್ಪಳ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ
ಕನ್ನಡಪ್ರಭ ವಾರ್ತೆ ಕೊಪ್ಪಳಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಆಗ್ರಹಿಸಿದರು.
ಹುಲಿಗಿ ಗ್ರಾಮದಲ್ಲಿ ಕೊಪ್ಪಳ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಆಶಾ ಕಾರ್ಯಕರ್ತೆಯರು ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ತಾಯಿ ಮಕ್ಕಳ ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು, ಆಶಾಗಳಿಂದಲೇ ಎನ್ನುವುದು ಎಲ್ಲರೂ ಒಪ್ಪಲೇಬೇಕು. ಕೋವಿಡ್ ಸಂದರ್ಭದಲ್ಲಿ ಆಶಾಗಳು ತಮ್ಮ ಜವಾಬ್ದಾರಿ ನಿಭಾಯಿಸಿದ ರೀತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಹಾಗಾಗಿಯೇ ಅವರಿಗೆ ಆರೋಗ್ಯದ ಜಾಗತಿಕ ನಾಯಕರು ಎಂಬ ಬಿರುದು ಕೂಡ ಲಭಿಸಿದೆ. ಆದರೆ ಏನೇ ಬಿರುದು, ಸನ್ಮಾನ ಲಭಿಸಿದರೂ, ಅವರ ಜೀವನ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ. ಅತ್ಯಂತ ಕನಿಷ್ಠ ವೇತನಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಪ್ರೋತ್ಸಾಹ ಧನದ ಹೆಸರಲ್ಲಿ ಅವರ ಶೋಷಣೆ ನಿತ್ಯ ನಿರಂತರವಾಗಿ ನಡೆಯುತ್ತಿದೆ. 10-15 ವರ್ಷಗಳಿಂದ ದುಡಿಯುತ್ತಿದ್ದರೂ, ಸರ್ಕಾರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ತಯಾರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಹಲವಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಸಂಘವು ಯಶಸ್ವಿಯಾಗಿದೆ. ಇನ್ನು ಹೋರಾಟವನ್ನು ಮುಂದುವರೆಸಬೇಕಾಗಿದೆ ಎಂದರು.ಜಿಲ್ಲಾಧ್ಯಕ್ಷ ಶರಣು ಗಡ್ಡಿ, ತಾಲೂಕುಗಳ ಅಧ್ಯಕ್ಷರಾದ ಜ್ಯೋತಿ ಲಕ್ಷ್ಮಿ, ವಿಜಯಲಕ್ಷ್ಮಿ, ಸುನೀತಾ, ಶೋಭಾ, ಮುಖಂಡರಾದ ಶಂಕ್ರಮ್ಮ, ಶಿವಮ್ಮ, ಅನ್ನಪೂರ್ಣ, ನಿರ್ಮಲ, ರತ್ನಮ್ಮ ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಹೊಸ ಕಮಿಟಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಗಿರಿಜಾಬಾಯಿ ಹುಲಿಗಿ, ಸುನೀತಾ ಆಚಾರ್ ಅಧ್ಯಕ್ಷೆ, ಶಕುಂತಲಾ ಉಪಾಧ್ಯಕ್ಷೆ, ಶನಮೀಮ ಬೇಗಂ, ಅನ್ನಪೂರ್ಣ, ಹುಲಿಗೆಮ್ಮ, ಲಲಿತಾ, ಬಸಮ್ಮ, ದೇವಕ್ಕ, ಕಲಾವತಿ, ಹುಲಿಗೆಮ್ಮ, ಮರಿಯಮ್ಮ, ರಜಿಯಾಬೇಗಂ, ಶಾರದಾ, ಕಾರ್ಯದರ್ಶಿ ರತ್ನಮ್ಮ ಬಹದ್ದೂರ್ ಬಂಡಿ ಜಂಟಿ ಕಾರ್ಯದರ್ಶಿಗಳು ನಿರ್ಮಲ ಇರಕಲ್ ಗಡ ಕಾರ್ಯದರ್ಶಿ ಮಂಡಳಿ ಸದಸ್ಯರು ಶಬನಾಜ್ ಬಿ, ಶಾರದಾ, ಪುಷ್ಪವತಿ, ಲಕ್ಷ್ಮಿ ಅಳವಂಡಿ, ಅನ್ನಪೂರ್ಣ ಅವರನ್ನು ನೇಮಕ ಮಾಡಲಾಯಿತು.