ಹಾನಗಲ್ಲ: ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಗಳ ವಿಳಂಬಕ್ಕೆ ಅವಕಾಶ ನೀಡದೇ ಗೌರವದಿಂದ ಅವರ ಕೆಲಸ ಪೂರೈಸುವಲ್ಲಿ ವೈಫಲ್ಯ ಕಾಣತಕ್ಕದ್ದಲ್ಲ ಎಂದು ಶಾಸಕ ಶ್ರೀನಿವಾಸ್ ಮಾನೆ ಕಟ್ಟಪ್ಪಣೆ ಮಾಡಿದರು.
ತಾಲೂಕಿನಲ್ಲಿ ಎಲ್ಲ ಶಾಲೆಗಳು, ಅಂಗನವಾಡಿ ಕೇಂದ್ರಗಳ ಭೂ ದಾಖಲೆ ಸರಿಪಡಿಸಿ, ಇ-ಸ್ವತ್ತು ಮಾಡಿಸಬೇಕು. ತಾಪಂ ಇಒ, ಬಿಇಒ ಹಾಗೂ ಸಿಡಿಪಿಒ ಜಂಟಿ ಸಭೆ ನಡೆಸಿ ಕ್ರಮ ವಹಿಸುವಂತೆ ಸೂಚಿಸಿದರು. ಹಾನಗಲ್ ನಗರಕ್ಕೆ ಮಳಗಿ ಧರ್ಮಾ ಜಲಾಶಯದಿಂದ ಪೈಪ್ಲೈನ್ ಮೂಲಕ ನೀರು ತರುವ ಕಾಮಗಾರಿ ಕುಂಟುತ್ತಾ ಸಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಮಾನೆ, ಕಾಮಗಾರಿ ಚುರುಕುಗೊಳಿಸಿ. ಕಾಮಗಾರಿಗಾಗಿ ಅಲ್ಲಲ್ಲಿ ಅಗೆದು ಹಾಕಿರುವ ರಸ್ತೆ ಸರಿ ಪಡಿಸಿ, ಗುಂಡಿಗಳನ್ನು ಮುಚ್ಚಿಸಿ. ನಿರ್ಲಕ್ಷ್ಯ ವಹಿಸಿದರೆ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿ ಎಂದರು.
ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೀರೇಶ ಬೈಲವಾಳ, ಹಳ್ಳಿಗಳಲ್ಲಿ ಹಗಲಿನಲ್ಲಿಯೂ ಬೀದಿ ದೀಪ ಉರಿಯುತ್ತವೆ, ಧರ್ಮಾ ಕಾಲುವೆ ಏರಿಯ ಮೇಲಿನ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ, ನೀರಾವರಿ ಇಲಾಖೆಯ ಕಾಮಗಾರಿಯಲ್ಲಿ ಬಹಳಷ್ಟು ಲೋಪದೋಷಗಳಿವೆ, ಹುಲಗಿನಹಳ್ಳಿ ಕೆರೆ ಕಾಮಗಾರಿ ಕಳಪೆಯಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದರೆ ಅದು ತಾಲೂಕಿನ ಅಭಿವೃದ್ಧಿಗೆ ಮಾರಕ ಎಂದು ಕಿಡಿ ಕಾರಿದರು.ಕೆಡಿಪಿ ಸದಸ್ಯೆ ಅನಿತಾ ಡಿಸೋಜಾ, ಹಾನಗಲ್ಲ ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆಯೇ ಇಲ್ಲ. ಚರಂಡಿಗಳ ಕಸ ಬಳೆದರೂ ಅದನ್ನು ಕೊಂಡೊಯ್ಯದೆ ಅದು ಮತ್ತೆ ಚರಂಡಿಯನ್ನೇ ಸೇರಿಸುತ್ತಿದೆ. ಕೃಷಿ ತೋಟಗಾರಿಕೆ ಇಲಾಖೆ ಸಾವಯವ ಕೃಷಿಗೆ ಆದ್ಯತೆ ನೀಡುವಲ್ಲಿ ವಿಫಲವಾಗಿವೆ. ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಸ್ವಚ್ಛತೆ ಇಲ್ಲ. ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಇಲ್ಲಿ ಸುರಕ್ಷತೆ ಇಲ್ಲ. ಬಸ್ಗಳಲ್ಲಿ ಕೂಡ ಪ್ರಯಾಣಿಕರಿಗೆ ಸಹಕರಿಸುತ್ತಿಲ್ಲ. ಉಚಿತ ಎಂಬ ಕಾರಣಕ್ಕೆ ಬಸ್ಗಳಲ್ಲಿ ನಿರ್ವಾಹಕರು ಅಸಭ್ಯ ವರ್ತನೆ ಮಾಡುತ್ತಾರೆ ಎಂದು ದೂರಿದರು.
ಸಭೆಯಲ್ಲಿ ತಾಲೂಕು ತಹಸೀಲ್ದಾರ್ ವಿಠ್ಠಲ ಚೌಗುಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವೀರೇಶ ಬೈಲವಾಳ, ಕೆಡಿಪಿ ಸದಸ್ಯರಾದ ಅನಿತಾ ಡಿಸೋಜಾ, ರಾಘವೇಂದ್ರ ಹಾನಗಲ್ಲ, ದಯಾನಂದ ನಾಗನೂರ, ರಾಜಶೇಖರ ಪುರದ, ಮಂಜಪ್ಪ ತಡಸದ ವೇದಿಯಲ್ಲಿದ್ದರು.