ಬೀದಿ ಬದಿಯ ವ್ಯಾಪಾರಸ್ಥರನ್ನು ಗೌರವದಿಂದ ಕಾಣಿ

KannadaprabhaNewsNetwork | Published : Jun 25, 2025 11:47 PM

ಬೀದಿಬದಿ ವ್ಯಾಪಾರಸ್ಥರು ಒಗ್ಗಟ್ಟಿನಿಂದ ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಬೀಳಗಿ

ಬೀದಿ ಬದಿ ವ್ಯಾಪಾರಸ್ಥರನ್ನು ರಸ್ತೆ ಮೇಲೆ ವ್ಯಾಪಾರ ಮಾಡುವವರು ಎಂದು ಕೀಳಾಗಿ ಕಾಣಬೇಡಿ. ಅವರು ಯಾರು ಹಂಗೂ ಇಲ್ಲದೆ ಕಷ್ಟಪಟ್ಟು ದುಡಿಯುವ ಸ್ವಾಭಿಮಾನಿ ವ್ಯಾಪಾರಸ್ಥರು. ಅಂತಹ ವ್ಯಾಪಾರಸ್ಥರನ್ನು ಎಲ್ಲರು ಗೌರವದಿಂದ ಕಾಣಬೇಕು ಎಂದು ತಾಲೂಕು ವ್ಯಾಪಾರಸ್ಥರ ಸಂಘದ ಅಧ್ಯಕ್ಷ, ಯುವ ಮುಖಂಡ ಪ್ರವೀಣ ಪಾಟೀಲ ಹೇಳಿದರು.

ಪಟ್ಟಣದ ಮುಖ್ಯ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿ ಒಕ್ಕೂಟ (ರಿ)ಬೆಂಗಳೂರು, ಬೀಳಗಿ ಶಾಖೆಯಿಂದ ಆಯೋಜಿಸಲಾಗಿದ್ದ ರಾಷ್ಟೀಯ ಬೀದಿ ಬದಿ ವ್ಯಾಪಾರಿಗಳ ದಿನಾಚಾರಣೆ ಹಾಗೂ ಬೃಹತ್‌ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮುತ್ತು-ರತ್ನಗಳನ್ನು ಬೀದಿಗಳಲ್ಲೇ ಮಾರಾಟ ಮಾಡುತ್ತಿದ್ದ ದೇಶ ನಮ್ಮದು. ನಿವೇಲ್ಲ ಬೀದಿ ಬದಿ ವ್ಯಾಪಾರಸ್ಥರು ಆ ಮುತ್ತು-ರತ್ನಗಳಿದ್ದಂತೆ ಎಂದು ವಿಶ್ವಾಸ ತುಂಬಿದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹುಚ್ಚಪ್ಪಯ್ಯನಮಠದ ಫಕೀರಯ್ಯ ಸ್ವಾಮೀಜಿ ಮಾತನಾಡಿ, ನಾವುಗಳು ಅನಾವಶ್ಯಕ ವಸ್ತುಗಳನ್ನು ಗಾಜಿನಲ್ಲಿ ಹಾಕಿ ಶೋ ರೂಮ್‌ನಲ್ಲಿ ಇಟ್ಟು ಮಾರುತ್ತೇವೆ. ನಮ್ಮ ಜೀವನಕ್ಕೆ ಬೇಕಾಗಿರುವ ವಸ್ತಗಳನ್ನು ಬೀದಿಯಲ್ಲಿ ಮಾರಾಟ ಮಾಡುತ್ತೇವೆ ಅಂದರೆ ನಮ್ಮ ನೋಡುವ ದೃಷ್ಟಿಕೋಣ ಬದಲಾಗಬೇಕಾಗಿದೆ. ಬೀದಿಬದಿ ವ್ಯಾಪಾರಿಗಳು ನಮ್ಮ ದಿನ ನಿತ್ಯದ ಜೀವನಾಡಿ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಸಿ.ಈ.ರಂಗಸ್ವಾಮಿ, ರಾಜ್ಯ ಉಪಾಧ್ಯಕ್ಷ ಪವಾಡೆಪ್ಪ ಚಲವಾದಿ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ಒಗ್ಗಟ್ಟಿನಿಂದ ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಪಪಂ ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಪಪಂ ಸದಸ್ಯರಾದ ಪಡಿಯಪ್ಪ ಕರಿಗಾರ, ಮಹಮದ್ ಬಾಗವಾನ, ಪಪಂ ಅಧಿಕಾರಿ ವೈ.ಎಸ್.ಪ್ರಶಾಂತ, ತೋಟಗಾರಿಕೆ ಇಲಾಖೆ ಅಧಿಕಾರಿ ವಿವೇಕಾನಂದ ಕೆರೂರ, ರವಿಕುಮಾರ ನಾಗನಗೌಡರ, ನವೀನ ಅಮಲಝರಿ, ಮುತ್ತಪ್ಪ ಭಜಂತ್ರಿ, ಶಶಾಂಕ ವಳವಾಡ, ಯಲ್ಲಪ್ಪ ಸನಕ್ಯಾನವರ, ಆಂಜನೇಯ ಕಾಗಿ, ಮನೋಹರ ಕಲಾಲ ಸೇರಿದಂತೆ ಇತರರು ಇದ್ದರು.

ಪಟ್ಟಣ ಪಂಚಾಯತಿ ವತಿಯಿಂದ ಕೂಡಲೇ ಬೀದಿ ಬದಿ ವ್ಯಾಪಾರಸ್ಥರಿಗೆ ನಿತ್ಯ ವ್ಯವಹಾರ ಸಭೆ ಮಾಡಲು ಒಂದು ಕಚೇರಿ ಹಾಗೂ ಅವರಿಗೆ ವಿಶಾಲವಾದ ಮಾರುಕಟ್ಟೆ ಪ್ರಾಂಗಣ ನಿರ್ಮಿಸಿ ಕೊಡಬೇಕು. ಬೀದಿ ಬದಿ ವ್ಯಾಪಾರಸ್ಥರ ಜೊತೆ ಯಾವುದೇ ಸಂದರ್ಭದಲ್ಲಿ ನಾನು ಹಗಲಿರುಳು ಇರುತ್ತೇನೆ.

ಪ್ರವೀಣ ಪಾಟೀಲ, ಅಧ್ಯಕ್ಷ, ತಾಲೂಕು ವ್ಯಾಪಾರಸ್ಥರ ಸಂಘ ಬೀಳಗಿ