ಶಿಗ್ಗಾಂವಿ: ಪ್ರಾರ್ಥನೆ ಹಾಗೂ ಸ್ವಾಗತ ಹೊರತಾಗಿ ಮಹಿಳೆಯರಿಗೆ ವೇದಿಕೆಯಲ್ಲಿ ಸ್ಥಾನ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಮಂಗಳವಾರ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಶಕ್ತಿಯಾಗಿದ್ದಾಳೆ. ಎಲ್ಲಿ ಮಹಿಳೆಯನ್ನು ಗೌರವಿಸಲಾಗುತ್ತದೆಯೊ ಆ ಸಂಸ್ಥೆ ಎತ್ತರದಲ್ಲಿ ಬೆಳೆಯುತ್ತದೆ. ಇವತ್ತು ಮಹಿಳೆ ಮಾಡದ ಕೆಲಸ ಇಲ್ಲ. ಹಾಗಾಗಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಹೇಳಿದರು.ಜನಪದ ತಾಯಿ ಬೇರು. ಅದು ನಶಿಸಬಾರದು. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ವಿವಿ ಕೆಲಸ ಮಾಡಬೇಕು. ಯುವ ಸಮುದಾಯಕ್ಕೆ ಜಾನಪದ ಕಲೆ, ಸಂಸ್ಕೃತಿ ಪರಿಚಯಿಸುವ ಕೆಲಸವಾಗಬೇಕು. ಜನಪದ ಹೊಟ್ಟೆ ತುಂಬಿಸಬೇಕು. ಆಗ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು. ಜಾನಪದ ವಿವಿಯಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ರಚನೆ ಮಾಡಬೇಕು. ಸಮಿತಿ ಮಾಹಿತಿ ಸೂಚನಾ ಫಲಕದಲ್ಲಿ ಅಳವಡಿಸಬೇಕೆಂದು ಹೇಳಿದರು. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಯುವ ಪೀಳಿಗೆಗೆ ಜನಪದ ಕಲೆಗಳನ್ನು ಪರಿಚಯಿಸಬೇಕೆಂದು ಜಾನಪದ ವಿವಿ ಕುಲಪತಿಗಳಿಗೆ ಸಲಹೆ ನೀಡಿದರು. ಹೆಣ್ಣುಮಕ್ಕಳು ಅಗತ್ಯ ಕಾನೂನು ತಿಳಿದುಕೊಳ್ಳಬೇಕು ಹಾಗೂ ಸಬಲರಾಗಬೇಕು ಎಂದು ಕಿವಿಮಾತು ಹೇಳಿದರು. ಜಾನಪದ ವಿವಿ ಕುಲಪತಿ ಟಿ.ಎಂ. ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕುಲ ಸಚಿವ ಷಹಜಹಾನ್ ಮುದುಕವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಸಿ.ಟಿ. ಗುರುಪ್ರಸಾದ್ ಸ್ವಾಗತಿಸಿದರು. ಉಪನ್ಯಾಸಕಿ ವಿಜಯಲಕ್ಷ್ಮಿ ನಿರೂಪಿಸಿ, ವಂದಿಸಿದರು.ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ರಾಣಿಬೆನ್ನೂರು: ಪರಸ್ಥಳಕ್ಕೆ ತೆರಳಿದಾಗ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ಇತ್ತೀಚೆಗೆ ನಗರದಲ್ಲಿ ನಡೆದಿದೆ.ಇಲ್ಲಿನ ವಿದ್ಯಾನಗರ ಅಂಬೇಡ್ಕರ್ ಸ್ಕೂಲ್ ಹಿಂಭಾಗದ ನಿವಾಸಿ ಚಿಕ್ಕಪ್ಪ ಅರ್ಕಾಚಾರಿ ಎಂಬವರು ಬೆಂಗಳೂರಿಗೆ ತೆರಳಿದಾಗ(ಜು. 25ರಿಂದ ಆ. 2ರ ಅವಧಿಯಲ್ಲಿ) ಮನೆಗೆ ನುಗ್ಗಿದ ಕಳ್ಳರು ಬೆಡ್ ರೂಮಿನಲ್ಲಿನ ಲಾಕರ್ ತೆರೆದು ಅದರಲ್ಲಿದ್ದ ತಲಾ ₹75 ಸಾವಿರ ಮೌಲ್ಯದ 10 ಗ್ರಾಂ ಎರಡು ಬಂಗಾರದ ಕೊರಳ ಚೈನ್, ₹90 ಸಾವಿರ ಮೌಲ್ಯದ 12 ಗ್ರಾಂ 3 ಜೊತೆ ಬಂಗಾರದ ಕಿವಿ ಓಲೆಗಳು, ತಲಾ ₹37500 ಮೌಲ್ಯದ 5 ಗ್ರಾಂ ಬಂಗಾರದ ಬೆರಳ ಉಂಗುರ ಮತ್ತು ಒಂದು ಗುಂಡಿನ ಸರ ಹಾಗೂ ₹10 ಸಾವಿರ ನಗದು ಸೇರಿದಂತೆ ₹3.25 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.