ಕಾರ್ಗಿಲ್ ವಿಜಯ ಸೈನಿಕರ ಬಲಿದಾನಕ್ಕೆ ಸಂದ ಗೌರವ

KannadaprabhaNewsNetwork | Published : Jul 27, 2024 12:59 AM
ಪೊಟೊ-ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಹತ್ತಿರ ಕಾರ್ಗಿಲ್ ವಿಜಯೋತ್ಸವದ ಸವಿ ನೆನಪಿಗಾಗಿ ಪಂಜಿನ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು.  | Kannada Prabha

ಕಾರ್ಗಿಲ್ ಯುದ್ದಕ್ಕೆ ಸುಮಾರು 20 ಸಾವಿರ ಸೈನಿಕರನ್ನು ಕಳಿಸಿ ಕಾರ್ಗಿಲ್ ಪ್ರದೇಶದಲ್ಲಿ ಅವಿತು ಕುಳಿತಿದ್ದ ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ಮಾಡಿ ಕಾರ್ಗಿಲ್ ವಶಪಡಿಸಿಕೊಂಡು ಇಂದಿಗೆ 25 ವರ್ಷ ಗತಿಸಿದೆ

ಲಕ್ಷ್ಮೇಶ್ವರ: ಭಾರತದ ಸೇನೆಯು ಕಳೆದ 25 ವರ್ಷಗಳ ಹಿಂದೆ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಕದನದಲ್ಲಿ ವಿಜಯಶಾಲಿಯಾಗಿದ್ದ ಸವಿ ನೆನಪನ್ನು ಮೆಲಕು ಹಾಕುವ ಮೂಲಕ ನಮ್ಮ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಸವರಾಜ ಚಕ್ರಸಾಲಿ ಹೇಳಿದರು.

ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಹತ್ತಿರ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆಯ ಸವಿ ನೆನಪಿಗಾಗಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು.

ಪಾಕಿಸ್ತಾನದ ಸೈನಿಕರು ನಮ್ಮ ದೇಶದ ಹಿಮಾಲಯದ ಉನ್ನತ ತೆಪ್ಪಲು ಪ್ರದೇಶವಾದ ಕಾರ್ಗಿಲ್‌ ಕಣಿವೆ ಆಕ್ರಮಿಸಿಕೊಂಡು ಭಾರತೀಯ ಸೇನೆಯ ಮೇಲೆ ದಾಳಿ ಮಾಡಿ ನಮ್ಮ ಸೈನಿಕರನ್ನು ಕೊಂದು ಹಾಕಿದ್ದರು. ಹೀಗೆ ಕಾರ್ಗಿಲ್ ಕಣಿವೆಯಲ್ಲಿ ಅವಿತು ಕುಳಿತು ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿದ ಭಾರತದ ಸರ್ಕಾರ ಪಾಕಿಸ್ತಾನಿ ಕಪಟಿಗಳಿಗೆ ತಕ್ಕ ಪಾಠ ಕಲಿಸುವ ನಿರ್ಧಾರ ಮಾಡಿ ಕಾರ್ಗಿಲ್ ಯುದ್ದಕ್ಕೆ ಸುಮಾರು 20 ಸಾವಿರ ಸೈನಿಕರನ್ನು ಕಳಿಸಿ ಕಾರ್ಗಿಲ್ ಪ್ರದೇಶದಲ್ಲಿ ಅವಿತು ಕುಳಿತಿದ್ದ ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ಮಾಡಿ ಕಾರ್ಗಿಲ್ ವಶಪಡಿಸಿಕೊಂಡು ಇಂದಿಗೆ 25 ವರ್ಷ ಗತಿಸಿದೆ, ಇದು ನಮ್ಮ ಯುವ ಪೀಳಿಗೆಯು ಅರಿತು ನಮ್ಮ ಸೈನಿಕರಿಗೆ ಸೂಕ್ತ ಗೌರವ ಕೊಡಬೇಕು ಎಂದರು.

ಪಂಜಿನ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಹಾಗೂ ಕಾರ್ಗಿಲ್ ವಿಜಯೋತ್ಸವ ಆಚರಿಸಿದ್ದು ಕಂಡು ಬಂದಿತು.

ಈ ವೇಳೆ ಪ್ರಕಾಶ ಮಾದನೂರ, ನವೀನ ಕುಂಬಾರ, ಮಹಾಂತೇಶ ಕುಂಬಾರ, ಸೋಮು ಗೌರಿ, ಫಕ್ಕೀರೇಶ ಅಣ್ಣಿಗೇರಿ, ಫಕ್ಕೀರೇಶ ಬಸವಾನಾಯ್ಕರ, ಮುತ್ತು ಗೊಜನೂರ, ಹನುಮಂತ ರಾಮಗೇರಿ, ಕಿರಣ ಚಿಲ್ಲೂರಮಠ, ವಿಶ್ವನಾಥ ದಾನಿ, ಮಂಜುನಾಥ ಬಳಗಾನೂರ ಸೇರಿದಂತೆ ಅನೇಕರು ಇದ್ದರು.