ಕನ್ನಡಪ್ರಭ ವಾರ್ತೆ, ತುಮಕೂರು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನವರಿಗೆ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಅಂಬೇಡ್ಕರ್ರವರ ಪುತ್ಥಳಿಯ ಮುಂಭಾಗದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕನ್ನಡಪರ ಸಂಘಟನೆಗಳ ಮುಖಂಡ ಸಂತೋಷ್ ಮಾತನಾಡಿ ಮಕ್ಕಳಿಲ್ಲದ ತಿಮ್ಮಕ್ಕ ಮತ್ತು ಚಿಕ್ಕಯ್ಯರವರು ಮರಗಳನ್ನೇ ತಮ್ಮ ಮಕ್ಕಳನ್ನಾಗಿ ಮಾಡಿಕೊಂಡು ಅವುಗಳ ಬೆಳವಣಿಗೆಯನ್ನೇ ತಮ್ಮ ಮಕ್ಕಳ ಬೆಳವಣಿಗೆಯಿಂದ ತಿಳಿದು ಅವುಗಳನ್ನು ಮಕ್ಕಳಂತೆ ಬೆಳಸಿದರಲ್ಲದೇ ಮರಗಳೊಟ್ಟಿಗೆ ತಮ್ಮ ಪ್ರೀತಿ, ವಾತ್ಸಲ್ಯವನ್ನು ತೋರುತ್ತಾ, ಸಲಹುತ್ತಾ ಸಾಕಿದಂತಹ ವ್ಯಕ್ತಿಗಳು. ಆದರೆ ಅವರು ತೋರಿಸಿಕೊಟ್ಟಿರುವ ಪರಿಸರ ಪ್ರೇಮವನ್ನು ನಾವುಗಳು ಇನ್ಮುಂದೆ ಬೆಳಸಿಕೊಳ್ಳುವಂತಹ ಕಾರ್ಯಗಳು ಆಗಬೇಕಾಗಿದೆ. ಇದರ ಪ್ರೇರಣೆಯನ್ನು ತೆಗೆದುಕೊಂಡು ಪ್ರತಿಯೊಬ್ಬರು ವಾರಕ್ಕೊಂದರಂತೆ ಗಿಡಗಳನ್ನು ನೆಡುವುದರ ಮೂಲಕ ಅವರನ್ನು ಮರಗಿಡಗಳಲ್ಲಿ ಕಾಣುವಂತಹ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯ ಗೋವಿಂದರಾಜು ಮಾತನಾಡಿ, ತಿಮ್ಮಕ್ಕ ಅವರು ಶಾಶ್ವತವಾಗಿ ಮರಗಳನ್ನು ನೆಟ್ಟು, ಪರಿಸರ ಪ್ರೀತಿ ಮತ್ತು ಹಸಿರು ಕನಸುಗಳ ಸಂದೇಶವನ್ನು ಮುಂದಿನ ತಲೆಮಾರಿಗೆ ಹಂಚಿದಂತಹ ವ್ಯಕ್ತಿ, ತಿಮ್ಮಕ್ಕರವರ ಪರಿಶ್ರಮ, ಧೈರ್ಯ ಮತ್ತು ಸಮರ್ಪಣೆ ಅಪಾರವಾದ ಪ್ರೇರಣೆ, ಪ್ರತಿಯೊಬ್ಬರ ಹೃದಯದಲ್ಲಿ ಶಾಶ್ವತವಾಗಿ ಬೆಳಗುತ್ತಿದೆ, ಅವರಿಗೆ ೨೦೧೯ರಲ್ಲಿ ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರೀಯ ನಾಗರಿಕ ಪ್ರಶಸ್ತಿ ಮತ್ತು ಬಿಬಿಸಿಯ ಪ್ರಮುಖ ೧೦೦ ವ್ಯಕ್ತಿಗಳಲ್ಲಿ ಇವರನ್ನು ಒಬ್ಬರನ್ನಾಗಿ ಪರಿಗಣಿಸಿರುವುದು ನಮ್ಮ ರಾಜ್ಯಕ್ಕೆ ಸಿಕ್ಕಂತಹ ಅತ್ಯುತ್ತಮ ಗೌರವವೆಂದರೇ ತಪ್ಪಾಗಲಾರದು ಎಂದು ತಿಳಿಸಿದರು.ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ, ಯುವ ಘಟಕದ ಜಿಲ್ಲಾಧ್ಯಕ್ಷರಾದ ಪುರದಕಟ್ಟೆ ಮಂಜು, ನಗರಾಧ್ಯಕ್ಷರಾದ ಮನು ಟಿ., ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್, ಕನ್ನಡಪರ ಸಂಘಟನೆಗಳ ಮುಖಂಡರಾದ ಸಂತೋಷ್, ಮಹಾನಗರ ಪಾಲಿಕೆ ಮಾಜಿ ಉಪಾಧ್ಯಕ್ಷರಾದ ಹನುಮಂತರಾಯಪ್ಪ, ಕೊರಟಗೆರೆ ಛಲವಾದಿ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಆಟೋ ಕುಮಾರ್ ಮುಖಂಡರುಗಳಾದ ತ್ಯಾಗರಾಜ್, ಶಿವರಾಜ್ ಕುಂಚಂಗಿ, ಮಾರ್ಗೋ ವೆಂಕಟೇಶ್, ಕಿರಣ್ ವೈ.ಎಸ್, ರಂಗಸೋಮಯ್ಯ, ಗಂಗಾಧರ್, ಲಕ್ಷ್ಮೀನಾರಾಯಣ, ಶಿವಣ್ಣ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿರಿದರು. ಈ ವೇಳೆ ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮಾಡಲಾಯಿತು.