ಕನ್ನಡಪ್ರಭ ವಾರ್ತೆ ವಿಜಯಪುರ
ಭಾರತ ದೇಶದ ಅಭಿವೃದ್ಧಿಯಲ್ಲಿ ಅತ್ಯುನ್ನತ ಕೊಡುಗೆ ನೀಡಿ ಕೋಟ್ಯಂತರ ಜನರಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಆಸರೆ ಆದ ಅಪ್ಪಟ ದೇಶಭಕ್ತ, ರಾಷ್ಟ್ರಪ್ರೇಮಿ ಖ್ಯಾತ ಉದ್ಯಮಿ ಮಾನವತಾವಾದಿ ರತನ್ ಟಾಟಾ ಅವರ ಅಗಲಿಕೆಯಿಂದ ರಾಷ್ಟ್ರಕ್ಕೆ ಬಹುದೊಡ್ಡ ಹಾನಿಯಾಗಿದೆ ಎಂದು ಬಿಜ್ಜರಗಿ ಸಮೂಹ ಸಂಸ್ಥೆಯ ಮುಖ್ಯಸ್ಥ ರಾಜು ಬಿಜ್ಜರಗಿ ಹೇಳಿದರು.ನಗರದ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಬಿಜ್ಜರಗಿ ಸಮೂಹ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸೇರಿ ಆಯೋಜಿಸಿದ್ದ ಉದ್ಯಮಿ ಮಾನವತಾವಾದಿ ರತನ್ ಟಾಟಾ ಅವರ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸೂಜಿಯಿಂದ ವಿಮಾನದವರೆಗೆ, ಉಪ್ಪಿನಿಂದ ಉಕ್ಕಿನ ಕಾರ್ಖಾನೆಯವರೆಗೆ ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಿ ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಸಿ ಅಪ್ರತಿಮ ಸಾಧನೆ ಮಾಡಿದ್ದ ಪುಣ್ಯಾತ್ಮ ಅವರಾಗಿದ್ದರು ಎಂದು ಸ್ಮರಿಸಿದರು.ಪ್ರಕೃತಿ ವಿಕೋಪ ಸೇರಿದಂತೆ ದೇಶ ಸಂಕಷ್ಟದಲ್ಲಿದ್ದಾಗ ಸಾವಿರಾರು ಕೋಟಿ ರುಪಾಯಿ ಪರಿಹಾರ ನೀಡಿ ಮಾನವೀಯತೆ ಮೆರೆದಿರುವ ರತನ್ ಟಾಟಾ ಅವರು ಕ್ಯಾನ್ಸರ್ ರೋಗಿಗಳಿಗಾಗಿ ಮುಂಬೈಯಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಿ ಸೇವೆ ನೀಡುತ್ತಿರುವ ಧನ್ವಂತರಿ. ವಿಮಾನಯಾನ ಸೇರಿದಂತೆ ಅನೇಕ ಕೈಗಾರಿಕಾ ಉದ್ಯಮಗಳನ್ನು ಸ್ಥಾಪಿಸಿದ ಕೀರ್ತಿ ಅವರದ್ದು, ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಹಕಾರ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಿ ಸಹಕಾರಿಯಾಗಿದ್ದಾರೆ ಎಂದರು.ಸ್ವಾಮಿ ವಿವೇಕಾನಂದ ಸಂಸ್ಥೆಯ ಮುಖ್ಯಸ್ಥ ರಾಘವ ಅಣ್ಣಿಗೇರಿ ಮಾತನಾಡಿ, ದೇಶ ಮೊದಲು ನಂತರ ನಾನು ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಭಾರತೀಯರು ಸೇರಿದಂತೆ ಇಡೀ ಜಗತ್ತಿಗೆ ಮಾದರಿ ಉದ್ಯಮಿಯಾಗಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯಾಗಿ ನೆಲೆಸಿದ್ದಾರೆ ಎಂದು ರತನ್ ಟಾಟಾ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.ಪಶುವೈದ್ಯ ಪ್ರಾಣೇಶ ಜಹಗೀರದಾರ ಮಾತನಾಡಿ, ನೌಕರರ ವರ್ಗದ ಕುರಿತು ರತನ್ ಟಾಟಾ ಅಪಾರ ಗೌರವ ಹೊಂದಿದ್ದರು. ಜತೆಗೆ ಶರವಾನ ಪ್ರೀಯ ಅವರಾಗಿದ್ದರು. ಮುಂಬೈಯಲ್ಲಿ ಶ್ವಾನಗಳಿಗಾಗಿ ಉಚಿತ ಆಸ್ಪತ್ರೆ ಪ್ರಾರಂಭಿಸಿದ್ದನ್ನು ಸ್ಮರಿಸಿದರು.
ಯುವ ಮುಖಂಡ ರಾಜು ಗಚ್ಚಿನಮಠ ಮಾತನಾಡಿ, ರತನ್ ಟಾಟಾ ಅವರಲ್ಲಿ ದೇಶಾಭಿಮಾನ ಬಹಳಷ್ಟಿತ್ತು. ದೇಶದ ರಕ್ಷಣೆಗಾಗಿ ಕಾರ್ಯ ನಿರ್ವಹಿಸುವ ಸೈನಿಕರಿಗೂ ಸಹಕಾರ ನೀಡಿದ್ದನ್ನು ನೆನೆಪಿಸಿದರು.ಸಂಗನಬಸಪ್ಪ ಸಜ್ಜನ, ಹರ್ಷಗೌಡ ಪಾಟೀಲ, ಗುರುಪಾದಯ್ಯ ಗಚ್ಚಿನಮಠ, ವಿಜಯಕುಮಾರ ಇಜೇರಿ, ರವೀಂದ್ರ ಬಿಜ್ಜರಗಿ, ಸಂದೀಪ ಬಿಜ್ಜರಗಿ, ಸಂತೋಷ ಗಣಿ, ಸಂಕೇತ ಬಗಲಿ, ಈರಣ್ಣ ಧಾರವಾಡಕರ, ಅಶೋಕ ನ್ಯಾಮಗೌಡ, ರಾಜೇಶ ದೇವಗಿರಿ, ಸಿದ್ಧು ಜೋಗುರ, ಅರುಣ ವಾರದ, ಗೀರಿಶ ಅನಂತಪೂರ, ಶರಣಪ್ಪ ಕೋರಳ್ಳಿ, ಮಹೇಶ ಬಿದನೂರ, ಬಸವರಾಜ ಬೈಚಬಾಳ, ಶರಣು ಸಬರದ, ಗೀರಿಶ ಪಾಟೀಲ, ಮುತ್ತು ಗಂಗಾಧರ ಹಾಗೂ ಬಿಜ್ಜರಗಿ ಮೋಟರ್ಸ್ನ ಸಮೂಹದ ಸಿಬ್ಬಂದಿ, ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.