ಅಸಮಾನತೆ ವಿರುದ್ಧ ಕ್ರಾಂತಿ ಕಹಳೆ: ಶರಣಬಸಪ ಕಲ್ಲಾ

KannadaprabhaNewsNetwork |  
Published : Mar 28, 2024, 12:46 AM IST
ಶಹಾಪುರ ನಗರದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು 113ರ ಕಾರ್ಯಕ್ರಮದಲ್ಲಿ ಶರಣ ಶರಣಬಸವ ಕಲ್ಲಾ ಮಾತನಾಡಿದರು. | Kannada Prabha

ಸಾರಾಂಶ

ಶಹಾಪುರ ನಗರದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು 113ರ ಕಾರ್ಯಕ್ರಮದಲ್ಲಿ ಶರಣ ಶರಣಬಸವ ಕಲ್ಲಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಎಲ್ಲ ಧರ್ಮಕ್ಕಿಂತಲೂ ಮಾನವಧರ್ಮ ಶ್ರೇಷ್ಠ. ಸಮಾನತೆಯೇ ಅದರ ತಿರುಳು ಎನ್ನುವ ಸಂದೇಶವನ್ನು ಇಡೀ ಜಗತ್ತಿಗೆ ಬಸವಾದಿ ಶರಣರು ತೋರಿಸಿಕೊಟ್ಟಿದ್ದಾರೆ. ಮೌಢ್ಯ ಕಂದಾಚಾರ ಅಸಮಾನತೆ ವಿರುದ್ಧ ಜೇವರ್ಗಿಯ ಷಣ್ಮುಖ ಶಿವಯೋಗಿಗಳು 17ನೇ ಶತಮಾನದಲ್ಲಿ ಬಹುದೊಡ್ಡ ವೈಚಾರಿಕ ಕ್ರಾಂತಿಯನ್ನೆ ಮಾಡಿದ್ದಾರೆ ಎಂದು ಶರಣಬಸವ ಕಲ್ಲಾ ತಿಳಿಸಿದರು.

ನಗರದಲ್ಲಿ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ನಡೆದ ತಿಂಗಳ ಬಸವ ಬೆಳಕು 113ರ ಕಾರ್ಯಕ್ರಮದಲ್ಲಿ ಷಣ್ಮುಖ ಶಿವಯೋಗಿಗಳ ಜಯಂತ್ಯುತ್ಸವದ ನಿಮಿತ್ತ "ಸತ್ಯದ ಮನೆಯಲ್ಲಿ ಶಿವನಿದ್ದಾನೆ " ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಸತ್ಯವಾದ ಮಾತು, ನಡೆ-ನುಡಿಗಳು ಜನ ಜೀವನವನ್ನು ಹಸನುಗೊಳಿಸುತ್ತವೆ. ಆದರೆ, ಪಟ್ಟಭದ್ರರಿಗೆ ಅವು ಸಿಂಹಸ್ವಪ್ನವಾಗುತ್ತವೆ. ದೇವರು ಧರ್ಮ ಪೂಜೆ ಇತ್ಯಾದಿಗಳ ಒಳ ಮರ್ಮವನ್ನು ತಮ್ಮ ಸರಳ ವಚನ ರಚನೆ ಮೂಲಕ ಬಿಚ್ಚಿಟ್ಟರು. ಆಗ ಪಟ್ಟಭದ್ರ ಶಕ್ತಿಗಳು, ಯಥಾಸ್ಥಿತಿವಾದಿಗಳು ಅವರನ್ನು ತೀವ್ರವಾಗಿ ಕಾಡಿದರು. ಆದರೆ, ಷಣ್ಮುಖ ಶಿವಯೋಗಿಗಳು ಸತ್ಯವನ್ನೆ ಮೇಟಿಯಾಗಿಟ್ಟುಕೊಂಡು ಜೀವನವನ್ನು ಸವೆಯೆ ಬಳಸಿದ ವಚನಕಾರರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರು, ಬಸವಾದಿ ಶರಣರ ವಚನಗಳು ಹಾಗೂ ಬದುಕು ತುಂಬಾ ಸರಳವಾದದು. ಸರಳವಾಗಿ ಬದುಕುವುದು. ಆದರ್ಶದ ನಡೆ-ನುಡಿಗಳನ್ನು ಜೀವಿಸುವುದು. ಸರ್ವರಿಗೂ ಸ್ವಾತಂತ್ರ್ಯ ಸಮಾನತೆ ವೈಚಾರಿಕ ವೈಜ್ಞಾನಿಕ ನಿಲುವುಗಳನ್ನು ಹೇಳಿಕೊಟ್ಟ ಶರಣರ ವಿಚಾರಧಾರೆ ಮನುಷ್ಯ ಜೀವನವನ್ನು ಹಸನುಗೊಳಿಸುವ ಸಂಜೀವಿನಿ ಆಗಿವೆ ಎಂದರು.

ಯೋಗ ಗುರು ಲಕ್ಷ್ಮಣ ಲಾಳಸೇರಿ ಮಾತನಾಡಿ, ಸಜ್ಜನರ ಸಂಗ, ಸದಾಚಾರ, ಸದು ವಿನಯ ನಡೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಎತ್ತರಿಸುವ ಕೀಲಿ ಕೈಗಳು. ಹಣ, ಅಂತಸ್ತು ಅಧಿಕಾರ ಇದ್ದವರು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿಲ್ಲ. ಸಾಮಾಜಿಕ ತುಡಿತ ಇರುವ ವ್ಯಕ್ತಿಗಳು ಚರಿತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಸ್ವಾಮಿ ವಿವೇಕಾನಂದ, ಬಸವಾದಿ ಶರಣರು, ಅಂಬೇಡ್ಕರ್, ಬುದ್ಧ ಮಹಾತ್ಮಗಾಂಧೀಜಿ ಮೊದಲಾದವರ ಬದುಕು ನಮಗೆಲ್ಲ ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಶಿವನಗೌಡ ಕಲ್ಲಹಂಗರಗಾ ವಹಿಸಿದ್ದರು. ಚಂದ್ರಶೇಖರ ಮಸ್ಕಿಯವರು ಸಭೆಯನ್ನು ಉದ್ಘಾಟಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು. ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಚನ ಪ್ರಾರ್ಥನೆ ಮಾಡಿದರು.

ಮಲ್ಕಣ್ಣ ವಡಿಗೇರಿ, ಶಿವಯೋಗಪ್ಪ ಮುಡಬೂಳ,ಚೆನ್ನಬಸಯ್ಯ ಸಿದ್ಧಲಿಂಗೇಶ್ವರ ಬೆಟ್ಟ, ಸಣ್ಣನಿಂಗಪ್ಪ ನಾಯ್ಕೋಡಿ, ಗುರುಬಸವಯ್ಯ ಗದ್ದುಗೆ, ಶಿವು ಆವಂಟಿ, ಷಣ್ಮುಖ ಅಣಬಿ, ಅಮರೇಶ ಹೂಗಾರ, ಶಂಭುಲಿಂಗ ದೇಸಾಯಿ, ಶಿವಲಿಂಗಪ್ಪ ಸಾಹು, ಶರಾವತಿ ಸತ್ಯಂಪೇಟೆ, ಕಮಲಮ್ಮ ಸತ್ಯಂಪೇಟೆ, ತಿಪ್ಪಣ್ಣ ಜಮಾದಾರ, ಪಂಚಾಕ್ಷರಯ್ಯ ಹಿರೇಮಠ, ಕವಿತಾ ಗುಡಗುಂಟಿ, ಮಹಾದೇವಿ ವಡಿಗೇರಿ, ಸಂಗಮ್ಮ ಹರನೂರ, ಪಂಪಣ್ಣಗೌಡ ಮಳಗ, ಮಲ್ಲು ಗುಡಿ, ಶಂಕ್ರಪ್ಪ ಪೋಸ್ಟ ಮಾಸ್ಟರ್, ಖಾಜಾ ಪಟೇಲ, ಶಿವು ಕರದಳ್ಳಿ, ದೇವಿಂದ್ರಪ್ಪ ಬಡಿಗೇರ, ಗುರಣ್ಣ ಮದರಿ ಇತರರಿದ್ದರು.

PREV

Recommended Stories

ಎನ್‌ಒಸಿ ಬೇಕಾ? : ವಾಹನದ ಪೂರ್ಣ ಮಾಹಿತಿ ಅಪ್ಡೇಟ್‌ ಮಾಡಿ
ಬೆಂಗಳೂರು : ಕೆರೆ ಜಾಗದಲ್ಲಿ ಕಟ್ಟಿದ್ದ 20 ಮನೆ ನೆಲಸಮ