ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸ ಮುಖ್ಯ: ಡಾ. ಬಾಲು ಕೆಂಚಪ್ಪ

KannadaprabhaNewsNetwork |  
Published : Jan 12, 2025, 01:18 AM IST
 ರಿಸರ್ವ್  ಬ್ಯಾಂಕ್ ಬ್ಯಾಂಕಿಂಗ್ ಒಂಬುಡ್ಸಮನ್ ಡಾ. ಬಾಲು ಕೆಂಚಪ್ಪ ಮಾತನಾಡಿದರು. | Kannada Prabha

ಸಾರಾಂಶ

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ನಂಬಿಕೆ ಹಾಗೂ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ. ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳಿವಳಿಕೆ ನೀಡುವುದು ಒಂಬಡ್ಸ್‌ಮನ್‌ನ ಜವಾಬ್ದಾರಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಡಾ. ಬಾಲು ಕೆಂಚಪ್ಪ ಹೇಳಿದರು.

ಕಾರವಾರ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಬಹಳ ಮುಖ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಡಾ. ಬಾಲು ಕೆಂಚಪ್ಪ ತಿಳಿಸಿದರು.

ನಗರದ ಸಾಗರ ದರ್ಶನ ಸಭಾಂಗಣದಲ್ಲಿ ಶನಿವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ಗ್ರಾಹಕರಿಗೆ ನಡೆದ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ನಂಬಿಕೆ ಹಾಗೂ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ. ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳಿವಳಿಕೆ ನೀಡುವುದು ಒಂಬಡ್ಸ್ ಮನ್‌ನ ಜವಾಬ್ದಾರಿ. ಆರ್‌ಬಿಐ ವ್ಯಾಪ್ತಿಯೊಳಗೆ ಬರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ತೊಂದರೆ ಕಂಡುಬಂದಾಗ ನ್ಯಾಯಾಲಯಕ್ಕೆ ಹೋಗುವ ಬದಲು ಆರ್‌ಬಿಐನ ಒಂಬಡ್ಸ್‌ಮನ್‌ಗೆ ದೂರು ನೀಡಿದಲ್ಲಿ ಶುಲ್ಕ ರಹಿತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದರು. ಬ್ಯಾಂಕ್‌ಗಳು ದೂರು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಉತ್ತರವನ್ನು ದೂರುದಾರರಿಗೆ ತಿಳಿಸಬೇಕು. ಗ್ರಾಹಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರಿನ ನಮೂನೆಯನ್ನು ಬ್ಯಾಂಕಿನ ವೆಬ್ ಸೈಟ್ ಮುಖಪುಟದಲ್ಲಿ ಒದಗಿಸಬೇಕು. ಬ್ಯಾಂಕಿನ ಶಾಖೆಯಲ್ಲಿಯೂ ದೂರು ಕೊಡುವ ಸೌಲಭ್ಯವಿರುತ್ತದೆ ಎಂದ ಅವರು, ಗ್ರಾಹಕ ಸೇವೆಯ ಕುರಿತು ಆರ್‌ಬಿಐ ಮಾಸ್ಟರ್ ಸುತ್ತೋಲೆಯ( Master Circular on Customer Service in Banks ) ಬಗ್ಗೆ ವಿವರಣೆ ನೀಡಿದರು.

ಆರ್‌ಬಿಐ ಒಂಬಡ್ಸ್ ಮನ್ ಯೋಜನೆ 2021ರ ಅಡಿ ಯಲ್ಲಿ ಇರುವ ಪರಿಹಾರ ವಿಧಾನ ಹಾಗೂ ದೂರುಗಳನ್ನು ಆ‌ರ್ ಬಿಐ ಪೋರ್ಟಲ್ ಹಾಗೂ ಇತರ ಮಾಧ್ಯಮದ ಮೂಲಕ ಹೇಗೆ ಸಲ್ಲಿಸಬೇಕು. ಹಲವು ವಿಧವಾದ ವಂಚನೆಗಳ ಬಗ್ಗೆ ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ವಿವರಿಸಿದರು.

ಅಂದಾಜು1000 ಗ್ರಾಹಕರು ಈ ಕಾರ್ಯಕ್ರಮದಲ್ಲಿ ಭಾಗವಸಿದ್ದು, ಪ್ರಶೋತ್ತರ ಅವಧಿಯನ್ನು ಏರ್ಪಡಿಸಲಾಗಿತ್ತು, ಸಭಿಕರ ಪ್ರಶ್ನೆಗಳಿಗೆ ಒಂಬಡ್‌ಸ್‌ಮನ್ ಹಾಗೂ ಇತರ ಬ್ಯಾಂಕುಗಳ ವತಿಯಿಂದ ಆಗಮಿಸಿದ್ದ ಅಧಿಕಾರಿಗಳು ಉತ್ತರಿಸಿದರು.

ರಿಸರ್ವ್ ಬ್ಯಾಂಕ್ ಒಂಬಡ್ಸ್‌ಮನ್ ಯೋಜನೆ 2021ಗೆ ಸಂಬಂಧಿಸಿದಂತಹ ಕರಪತ್ರ ಹಾಗೂ ಕಿರು ಹೊತ್ತಿಗೆಯನ್ನು ವಿತರಿಸಲಾಯಿತು. ಉಪ ಒಂಬಡ್ಸ್ ಮನ್ ನಿಧಿ ಅಗರ್ವಾಲ್, ಕೆನರಾ ಬ್ಯಾಂಕ್ ಉಪ ಜನರಲ್ ಮ್ಯಾನೇಜರ್ ರಾಜೀವ್ ತುಕ್ರಾಲ್ ಮತ್ತು ಎನ್ ಬಿಐ ಉಪ ಜನರಲ್ ಮ್ಯಾನೇಜರ್ ಎಲ್. ಶ್ರೀನಿವಾಸ ರಾವ್ ಇದ್ದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ