ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸ ಮುಖ್ಯ: ಬ್ಯಾಂಕಿಂಗ್ ಒಂಬಡ್ಸ್ಮನ್ ಮೋಹನ್

KannadaprabhaNewsNetwork |  
Published : Aug 20, 2025, 01:30 AM IST

ಸಾರಾಂಶ

ಗ್ರಾಹಕರ ಪ್ರತಿಯೊಂದು ರುಪಾಯಿಯೂ ವ್ಯತ್ಯಾಸವಾಗದಂತೆ ಸುರಕ್ಷಿತವಾಗಿಡುವುದು ಬ್ಯಾಂಕಿಂಗ್‌ನ ಉದ್ದೇಶ. ಗ್ರಾಹಕರು ಜಾಗೃತರಾದಾಗ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗಳು ಸುಲಭ .

ಕನ್ನಡಪ್ರಭ ವಾರ್ತೆ ತುಮಕೂರು

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸ ಬಹಳ ಮುಖ್ಯ ಎಂದು ಆರ್‌ಬಿಐ ಬೆಂಗಳೂರಿನ ಬ್ಯಾಂಕಿಂಗ್ ಒಂಬಡ್ಸ್ಮನ್ ಎನ್. ಮೋಹನ್ ಅಭಿಪ್ರಾಯಪಟ್ಟರು.

ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಮಂಗಳವಾರ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ, ನಂಬಿಕೆಗಳಿಂದ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ. ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳಿವಳಿಕೆ ನೀಡುವುದು ಒಂಬಡ್ಸ್ಮನ್ ಕಾರ್ಯಾಲಯದ ಜವಾಬ್ದಾರಿ ಎಂದು ತಿಳಿಸಿದರು.

ಆರ್‌ಬಿಐ ವ್ಯಾಪ್ತಿಯೊಳಗೆ ಬರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ತೊಂದರೆ ಕಂಡು ಬಂದಾಗ ಆರ್‌ಬಿಐನ ಒಂಬಡ್ಸ್ಮನ್‌ಗೆ ದೂರು ನೀಡಿದ್ದಲ್ಲಿ ಶುಲ್ಕ ರಹಿತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಗ್ರಾಹಕರು ತಮ್ಮ ಬ್ಯಾಂಕಿನ ಶಾಖೆಯಲ್ಲಿ ದೂರು ಕೊಡುವ ಸೌಲಭ್ಯವಿರುತ್ತದೆ. ಬ್ಯಾಂಕುಗಳು ದೂರು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ದೂರುದಾರರಿಗೆ ಉತ್ತರವನ್ನು ತಿಳಿಸಬೇಕು. ಗ್ರಾಹಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರಿನ ನಮೂನೆಯನ್ನು ಬ್ಯಾಂಕಿನ ವೆಬ್‌ಸೈಟ್‌ನ ಮುಖಪುಟದಲ್ಲಿ ಒದಗಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ಆರ್‌ಬಿಐ ಬೆಂಗಳೂರಿನ ಉಪ ಒಂಬಡ್ಸ್ಮನ್ ನಿಧಿ ಅಗರ್ವಾಲ್ ಮಾತನಾಡಿ, ಬ್ಯಾಂಕಿನ ಆಂತರಿಕ ಕುಂದು- ಕೊರತೆಗಳ ಪರಿಹಾರ ವ್ಯವಸ್ಥೆಯ ಬಗ್ಗೆ ವಿವರಿಸುತ್ತಾ, ಆರ್‌ಬಿಐ ಒಂಬಡ್ಸ್ಮನ್ ಯೋಜನೆ 2021ರ ಅಡಿ ಇರುವ ಪರಿಹಾರ ವಿಧಾನ ಹಾಗೂ ದೂರುಗಳನ್ನು ಆರ್‌ಬಿಐ ಪೋರ್ಟಲ್ ಹಾಗೂ ಇತರೆ ಮಾಧ್ಯಮದ ಮೂಲಕ ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರಲ್ಲದೆ ಬ್ಯಾಂಕ್ ವಂಚನೆಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ವಿವರಿಸಿದರು.

ಗ್ರಾಹಕರಿಗಾಗಿ ಪ್ರತಿಯೊಂದು ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್‌ಗೊಳಿಸಿ ಅವರ ಕೈಯಲ್ಲೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಡಿಜಿಟಲ್ ವಹಿವಾಟು ಸುರಕ್ಷಿತ ಎಂಬ ಧೈರ್ಯ ಮೂಡಿಸುವ ಸಲುವಾಗಿ ಒಂಬಡ್ಸ್ಮನ್ ಕಾರ್ಯಾಲಯವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗ್ರಾಹಕರ ಪ್ರತಿಯೊಂದು ರುಪಾಯಿಯೂ ವ್ಯತ್ಯಾಸವಾಗದಂತೆ ಸುರಕ್ಷಿತವಾಗಿಡುವುದು ಬ್ಯಾಂಕಿಂಗ್‌ನ ಉದ್ದೇಶ. ಗ್ರಾಹಕರು ಜಾಗೃತರಾದಾಗ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗಳು ಸುಲಭ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಒಂಬಡ್ಸ್ಮನ್ ಯೋಜನೆ 2021 ಕ್ಕೆ ಸಂಬಂಧಿಸಿದ ಕರಪತ್ರ ಹಾಗೂ ಕಿರು ಹೊತ್ತಿಗೆಗಳನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಮುಖ್ಯ ಜನರಲ್ ಮ್ಯಾನೇಜರ್ ಮಹೇಶ್ ಎಂಪೈ ಮತ್ತು ಭಾರತೀಯ ಸ್ಟೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಲೇಖಾಮೆನನ್, ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಚೈತನ್ಯ ಕಂಚಿಬೈಲ್ ಸೇರಿ ಇತರೆ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

ಸುಮಾರು 850ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಶ್ನೋತ್ತರ ಅವಧಿಯನ್ನೂ ಸಹ ಏರ್ಪಡಿಸಲಾಗಿತ್ತು. ಸಭಿಕರ ಪ್ರಶ್ನೆಗಳಿಗೆ ಆರ್‌ಬಿಐನ ಬ್ಯಾಂಕಿಂಗ್ ಒಂಬಡ್ಸ್ಮನ್ ಹಾಗೂ ಇತರ ಬ್ಯಾಂಕುಗಳ ಅಧಿಕಾರಿಗಳು ಉತ್ತರಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ