- ಬ್ರಹ್ಮಾ ತಂದೆಯ 57ನೇ ವರ್ಷದ ಸ್ಮೃತಿ ದಿನ । ವಿಶ್ವ ಶಾಂತಿ ದಿನ ಆಚರಣಾ ಕಾರ್ಯಕ್ರಮ
ಸಂಘಟನೆಯನ್ನು ಒಂದು ಸೂತ್ರದಲ್ಲಿ ಬಂಧಿಸುವ ಸಾಧನ ವಿಶ್ವಾಸ ಎಂದು ತರೀಕೆರೆ ಬ್ರಹ್ಮಕುಮಾರೀಸ್ ಸೇವಾ ಕೇಂದ್ರದ ಮುಖ್ಯಸ್ಥ ಬಿ.ಕೆ.ಕಲೈವಾಣಿ ಹೇಳಿದ್ದಾರೆ.
ಪಟ್ಟಣದ ಬ್ರಹ್ಮಕುಮಾರೀಸ್ ಸೇವಾ ಕೇಂದ್ರ ದಿಂದ ನಡೆದ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥಾಪಕ ಪ್ರಜಾಪಿತ ಬ್ರಹ್ಮಾ ತಂದೆ 57ನೇ ವರ್ಷದ ಸ್ಮೃತಿ ದಿನ-ವಿಶ್ವ ಶಾಂತಿದಿನ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯರ್ಥ ವಿಚಾರಗಳ ಸಮಾಪ್ತಿಗೆ ತನ್ನ ಸಂಘಟನೆಯನ್ನು ಶಕ್ತಿಶಾಲಿ ಹಾಗೂ ಏಕಮತ ಮಾಡಲು ಒಂದು ವಿಶ್ವಾಸ ಅಳವಡಿಸಿಕೊಳ್ಳುವ ಶಕ್ತಿ ಬೇಕು. ಸಂಘಟನೆಯನ್ನು ಒಂದು ಸೂತ್ರದಲ್ಲಿ ಬಂಧಿಸುವ ಸಾಧನ ವಿಶ್ವಾಸ, ಒಂದು ವೇಳೆ ಬೇರೆಯವರಿಂದ ತಪ್ಪುಗಳು ಆದಾಗ ಅದನ್ನು ತನ್ನ ತಪ್ಪಿಂದು ಭಾವಿಸಿ ಕ್ಷಮಿಸಿ, ಅದರಲ್ಲೂ ಕಲ್ಯಾಣವಿದೆ. ಸಮಾವೇಶ ಮಾಡಿಕೊಳ್ಳಿ ಹಾಗೂ ಅವರ ಪ್ರತಿ ಆತ್ಮಿಕ ದೃಷ್ಟಿ ಇಟ್ಟುಕೊಳ್ಳಿ ಅದನ್ನು ಹೊರಗಡೆ ಯಾರೊಂದಿಗೂ ಹರಡಬೇಡಿ. ಸಂಘಟನೆಯಲ್ಲಿ ಪರಸ್ಪರ ಅವ್ಯಕ್ತ ಭಾವ ಇರಬೇಕು. ಸೂಕ್ಷ್ಮ ದೇವತೆಗಳ ಹಾಗೆ ಭಾಷೆ ಇರಬೇಕು ಎಂದು ಹೇಳಿದರು.ಪರಮಾತ್ಮ ತಂದೆ ವರದಾನಿ ಹಸ್ತ ನನ್ನ ಮೇಲಿದೆ ಹಾಗೂ ತಂದೆ ಸದಾ ನನ್ನ ಜೊತೆಯಲ್ಲೇ ಇರುತ್ತಾರೆ. ಈ ಸ್ಮೃತಿಯಲ್ಲಿ ಇದ್ದು, ಸಹಜವಾಗಿ ಸರ್ವ ಬಂಧನಗಳ ಪಂಜರದಿಂದ ಮುಕ್ತರಾಗಿ ಹಾರುತ್ತ ಪಕ್ಷಿ ಯಾಗಿದ್ದೇನೆ ಎಂದು ಅನುಭವ ಮಾಡುತ್ತೀರಿ. ಪ್ರಜಾಪಿತ ಬ್ರಹ್ಮಾ ಅವರ ತನುವನ್ನು ಪಂಚ ತತ್ವಗಳ ಸಹಿತ ಸರ್ವ ಮನುಷ್ಯಾತ್ಮರಿಗೆ ಮುಕ್ತಿ ಹಾಗೂ ಜೀವನ ಮುಕ್ತಿ ನೀಡಲು ಆಧಾರ ತೆಗೆದುಕೊಂಡಿದ್ದಾರೆ.ಶಿವ ಪರಮಾತ್ಮ ಪರಕಾಯ ಪ್ರವೇಶ ಮಾಡಿ ಗೀತಾ ಜ್ಞಾನ ಹಾಗೂ ರಾಜಯೋಗದ ಶಿಕ್ಷಣದ ಮೂಲಕ ಸಾಧಾರಣ ಮನುಷ್ಯರನ್ನು ದೇವಾತ್ಮರನ್ನಾಗಿ ಮಾಡಿ, ಭಾರತ ಭೂಮಿಯಲ್ಲಿ ಪುನಃ ದೈವಿ ರಾಜ್ಯದ ಸ್ಥಾಪನೆ ಮಾಡುತ್ತಿದ್ದಾರೆ ಎಂದು ಹೇಳಿದರು.ಸಮಾಜ ಸೇವಕ ಟಿ.ಜಿ.ಮಂಜುನಾಥ ಮಾತನಾಡಿ ಸಮಾಜ ಸೇವೆ ಮಾಡುವುದು ನಮ್ಮ ಮನಸ್ಸಿನ ತೃಪ್ತಿ ಗಾಗಿ,ಈ ಮೂಲಕ ಅಶಕ್ತರಿಗೆ ನೆರವಾಗಿ ಅವರ ಸಂತೋಷದಲ್ಲಿ ದೇವರನ್ನು ಕಾಣಬೇಕು. ಈಶ್ವರೀಯ ವಿಶ್ವವಿದ್ಯಾಲಯ ಆಧ್ಯಾತ್ಮಿಕ ಸಾಧನೆ ಕೇಂದ್ರವಾಗಿ ಹಲವು ಹಿರಿಯ ಜೀವಿಗಳಿಗೆ ದೈವಿ ಜ್ಞಾನ ತುಂಬಿ ಜೀವನದಲ್ಲಿ ಹೊಸತನ ತರುತ್ತಿದೆ ಎಂದು ಹೇಳಿದರು.ವಕೀಲ ಜಿ.ಸುಬ್ರಹ್ಮಣ್ಯ ಮಾತನಾಡಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ನೇತೃತ್ವದ ಸ್ವಾವಲಂಬಿ ಅಧ್ಯಾತ್ಮಿಕ ಮತ್ತು ಸಾಮಾಜಿಕ ಶೈಕ್ಷಣಿಕ ಕೇಂದ್ರವಾಗಿ ರೂಪಿಸಲು ಬ್ರಹ್ಮ ಬಾಬಾ ಸವೆಸಿದ ಹಾದಿ ಅತ್ಯಂತ ಕ್ಲಿಷ್ಟಕರ, ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ ನಂತರ ಮಹಿಳೆಯರಿಗೆ ಇದ್ದ ಸಾಮಾಜಿಕ ಕಠಿಣ ಪರಿಸ್ಥಿತಿ ದುರ್ಗಮ ಹಾದಿಯನ್ನು ಆತ್ಮ ವಿಶ್ವಾಸ ವೆಂಬ ಜ್ಞಾನದ ಮೂಲಕ ಎದುರಿಸಲು ಶಕ್ತಿ ತುಂಬಿದ ದಿವ್ಯ ಚೇತನ ಬಾಬಾ ಎಂದು ಹೇಳಿದರು.ಹಾಗಾಗಿ ಸಂಸ್ಥೆ ನಡೆದು ಬಂದ ಇತಿಹಾಸವನ್ನು ಎಲ್ಲರೂ ಅವಲೋಕಿಸುವ ಮೂಲಕ ಸಶಕ್ತ ಸ್ವಾವಲಂಬನೆ ಆತ್ಮವಿಶ್ವಾಸದ ಭಕ್ತ ಪಡೆ ಮುಂದುವರಿಯುವಂತೆ ಆಗಬೇಕು. ಅಶಕ್ತ ನಿರ್ಗತಿಕರ ಆಶಾ ಕಿರಣ ಎಂದೇ ಕರೆ ಯಲ್ಪಡುವ ಸಮಾಜ ಸೇವಕ ಟಿ.ಜಿ.ಮಂಜುನಾಥ್ ಅವಿರತ ಸೇವೆ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ ದಾಯಕ ಹಾಗೂ ಮಾರ್ಗದರ್ಶಕವಾಗಿದೆ ಪತ್ರಿಕಾ ಕ್ಷೇತ್ರದ ಸುದೀರ್ಘ ಸೇವೆ ಪರಿಶ್ರಮದ ಫಲ ಪತ್ರಕರ್ತ ಅನಂತ ನಾಡಿಗ್ ಅವರಿಗೆ ಮಾದ್ಯಮ ಅಕಾಡಮಿ ಪ್ರಶಸ್ತಿ ಹುಡುಕಿಕೊಂಡು ಬರುವ ಮೂಲಕ ಪ್ರಶಸ್ತಿ ಹಿರಿಮೆ ಹೆಚ್ಚಿದೆ ಎಂದು ಹೇಳಿದರು.
ತರೀಕೆರೆ ಸೇವಾ ಕೇಂದ್ರದಲ್ಲಿ ವಿಶ್ವಶಾಂತಿ ದಿನದಂದು ಸಮಾಜ ಸೇವಕ ಟಿ.ಜಿ.ಮಂಜುನಾಥ್ ಮತ್ತು ಹಿರಿಯ ಪತ್ರಕರ್ತ ಆನಂತ ನಾಡಿಗ್ ಅವರನ್ನು ಸನ್ಮಾನಿಸಲಾಯಿತು.-19ಕೆಟಿಆರ್.ಕೆ.2ಃ
ತರೀಕೆರೆಯಲ್ಲಿ ಬ್ರಹ್ಮಕುಮಾರೀಸ್ ಸೇವಾ ಕೇಂದ್ರದಿಂದ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ ಸೇವಾ ಕೇಂದ್ರದಮುಖ್ಯಸ್ಥ ಬಿ.ಕೆ.ಕಲೈವಾಣಿ, ಸಮಾಜ ಸೇವಕ ಟಿ.ಜಿ.ಮಂಜುನಾಥ್, ವಕೀಲ ಜಿ.ಸುಬ್ರಹ್ಮಣ್ಯ, ಪತ್ರಕರ್ತ ಅನಂತ ನಾಡಿಗ್ ಮತ್ತಿತರರು ಭಾಗವಹಿಸಿದ್ದರು.