ಕನ್ನಡಪ್ರಭ ವಾರ್ತೆ ವಿಜಯಪುರ
ಸತ್ಯ ಮತ್ತು ಅಹಿಂಸೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನ ಸಂದೇಶಗಳಾಗಿವೆ. ನನ್ನ ಜೀವನ ಕ್ರಮವೇ ನನ್ನ ಜೀವನ ಸಂದೇಶ ಎಂದು ಗಾಂಧೀಜಿ ಅವರು ಯಾವಾಗಲೂ ಹೇಳುತ್ತಿದ್ದರು ಎಂದು ಹಿರಿಯ ಗಾಂಧೀವಾದಿ ಸುಧೀಂದ್ರ ಕುಲಕರ್ಣಿ ಹೇಳಿದರು.ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಗಸ್ಟ್ ಕ್ರಾಂತಿ ಟ್ರಸ್ಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿ ಅವರ ಜೀವನ ಸಂದೇಶಗಳು ಕುರಿತು ಮಾತನಾಡಿದರು.
ನಾನು ಬರೆದದ್ದು, ನನ್ನ ಬಗೆಗೆ ಬೇರೆಯವರು ಬರೆದಿರುವುದಕ್ಕಿಂತ ನನ್ನ ಬದುಕೇ ನನ್ನ ಜೀವನದ ಸಂದೇಶ ಎಂದು ಹೇಳುತ್ತಿದ್ದ ಮಹಾತ್ಮಾ ಗಾಂಧೀಜಿಯವರ ವಿಚಾರ-ಆಚಾರಗಳಲ್ಲಿ ಯಾವುದೇ ಅಂತರವಿರುತ್ತಿರಲಿಲ್ಲ. ಇಂಥ ಮಹಾನ್ ವ್ಯಕ್ತಿಯ ಆದರ್ಶ ಇಡೀ ಜಗತ್ತಿಗೇ ಮಾದರಿ ಎಂದು ಬಣ್ಣಿಸಿದರು.ಮಹಾತ್ಮಾಗಾಂಧಿ ಫೌಂಡೇಶನ್ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಗಾಂಧೀಜಿಯು ಕಲಿಯುಗದ ಬುದ್ಧ ಎಂದು ಕುವೆಂಪು ಅವರು ವಿಶ್ಲೇಷಿಸಿದ್ದಾರೆ. ಮಹಿಳಾ ಸಬಲೀಕರಣ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ಗಾಂಧೀಜಿಯವರು ವಿಜಯಪುರಕ್ಕೂ ನಾಲ್ಕು ಬಾರಿ ಭೇಟಿ ನೀಡಿದ್ದರು. ಗಾಂಧೀಜಿಯ ಗ್ರಂಥಗಳನ್ನು ಓದುವುದರಿಂದ ಸಹಿಷ್ಣುತೆ, ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕುವ ಶಕ್ತಿ ದೊರೆಯುತ್ತದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಗಾಂಧೀಜಿಯ ತತ್ವಗಳನ್ನು ಪುನರ್ಮನನ ಮಾಡಿಕೊಳ್ಳುವುದು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಅವರಿಗೆ ನೀಡುವ ನಿಜವಾದ ಗೌರವವಾಗಿದೆ. ಶಿಸ್ತು ಜೀವನದ ಆಸ್ತಿಯಾಗಿದ್ದು, ಅದು ವ್ಯಕ್ತಿಯ ನೈತಿಕತೆ, ಹೊಣೆಗಾರಿಕೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಮಾರ್ಗದರ್ಶಿಯಾಗುತ್ತದೆ ಎಂದು ಹೇಳಿದರು.ಪ್ರಬಂಧ ಸ್ಪರ್ಧೆ: ಕಾರ್ಯಕ್ರಮದಂಗವಾಗಿ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು, ವಿಜೇತ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಲಾಯಿತು. ಗಾಂಧೀಜಿಯವರ ಜೀವನದ ಪ್ರಮುಖ ಘಟನಾವಳಿಗಳ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಗಾಂಧಿ ಭಜನೆ ಮಾಡಿದರು.ಆಗಸ್ಟ್ ಕ್ರಾಂತಿ ಟ್ರಸ್ಟ್ನ ಸದಸ್ಯೆ ರೇವತಿ ಕಟ್ಟಿ, ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ವಿವಿಧ ವಿಭಾಗಗಳ ಮುಖ್ಯಸ್ಥರು, ಅತಿಥಿ ಉಪನ್ಯಾಸಕರು, ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿನಿಯರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಕೋಶದ ಸಂಯೋಜನಾಧಿಕಾರಿ ಪ್ರೊ.ಅಶೋಕಕುಮಾರ ಸುರಪುರ ಸ್ವಾಗತಿಸಿದರು. ಗಾಂಧಿ ಜಯಂತಿ ಸಮಿತಿಯ ಅಧ್ಯಕ್ಷ ಪ್ರೊ.ಮಹೇಶ ಚಿಂತಾಮಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್.ಎಸ್ ಕೋಶದ ಕಾರ್ಯಕ್ರಮಾಧಿಕಾರಿ ಡಾ.ಕಲಾವತಿ ಕಾಂಬಳೆ ನಿರೂಪಿಸಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಅಮರನಾಥ ಪ್ರಜಾಪತಿ ವಂದಿಸಿದರು.