ತುಮಕೂರು: ಕಲ್ಪತರು ನಾಡಿನಾದ್ಯಂತ ರಾಮನಾಮ ಸ್ಮರಣೆ

KannadaprabhaNewsNetwork | Published : Jan 23, 2024 1:47 AM

ಸಾರಾಂಶ

ತುಮಕೂರು ಜಿಲ್ಲೆಯಾದ್ಯಂತ ರಾಮನಾಮ ಸ್ಮರಣೆ

ಕನ್ನಡಪ್ರಭ ವಾರ್ತೆ ತುಮಕೂರು

ಅಯೋಧ್ಯೆಯಯಲ್ಲಿ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಲ್ಪತರುನಾಡಿನಲ್ಲಿ ರಾಮೋತ್ಸವದ ಸಡಗರ ಸಂಭ್ರಮ ಮನೆ ಮಾಡಿತ್ತು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲೆಡೆ ರಾಮನಾಮ ಸ್ಮರಣೆ ಮೊಳಗಿದ್ದು, ಮಧ್ಯಾಹ್ನ 12.30 ಕ್ಕೆ ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಶುಭ ಸಂದರ್ಭದಲ್ಲಿ ಶ್ರೀರಾಮ ದೇವಾಲಯಗಳಲ್ಲಿ ವಿಶೇಷ ಪೂಜಾದಿಗಳು, ಹೋಮ ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.

ಈಗಾಗಲೇ ಜಿಲ್ಲೆಯಾದ್ಯಂತ ಮನೆ ಮನೆಗೆ ಅಯೋಧ್ಯೆ ಮಂತ್ರಾಕ್ಷತೆ ತಲುಪಿಸಲಾಗಿದ್ದು, ಪ್ರತಿ ದೇವಾಲಯ, ಮನೆ ಮನೆಗಳಲ್ಲೂ ದೀಪ ಹಚ್ಚಿ, ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿ ಹಾಕಿ ವಿಶೇಷ ಭಕ್ತಿಯನ್ನು ಶ್ರೀರಾಮನಿಗೆ ಸಮರ್ಪಿಸಲಾಯಿತು.

ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯ, ಹನುಮಂತಪುರ, ಬನಶಂಕರಿ, ಮರಳೂರು, ಎಸ್.ಎಸ್. ಪುರಂನ ಸೀತಾ ರಾಮ ಮಂದಿರ, ಶೆಟ್ಟಿಹಳ್ಳಿ ಗೇಟ್‌ನ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶ್ರೀರಾಮ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಭಜನೆಗಳು ನಡೆದಿದ್ದು, ಭಕ್ತರಿಂದ ಶ್ರೀರಾಮ ನಾಮ ಸ್ಮರಣೆ ಮೊಳಗಿತು.

ಬಿ.ಎಚ್.ರಸ್ತೆ, ಎಂ.ಜಿ. ರಸ್ತೆ, ಅಶೋಕ ರಸ್ತೆ, ಎಸ್.ಎಸ್. ಪುರಂ ರಸ್ತೆ, ಕೋತಿತೋಪು ರಸ್ತೆ, ಮಂಡಿಪೇಟೆ ಸೇರಿದಂತೆ ವಿವಿಧೆಡೆಗಳಲ್ಲಿ ಬಾಳೆಕಂದು, ಮಾವಿನ ತೋರಣ ಕಟ್ಟಿ ಸಿಂಗರಿಸಲಾಗಿದ್ದು, ಭಕ್ತರು ಪೆಂಡಾಲ್‌ಗಳನ್ನು ಹಾಕಿ ಶ್ರೀರಾಮ ಭಾವಚಿತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆ ಸೇರಿದಂತೆ ಪ್ರಸಾದ ವಿತರಣೆ ಮಾಡಲಾಯಿತು.

ಬಾರ್‌ಲೈನ್ ರಸ್ತೆಯ ಶ್ರೀರಾಮಮಂದಿರದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಠಾಪನೆಯ ನೇರ ಪ್ರಸಾರದ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀರಾಮನ ಘೋಷಣೆಗಳನ್ನು ಕೂಗಿದ ಭಕ್ತರ ಕಣ್ಣಲ್ಲಿ ಆನಂದಬಾಷ್ಪ ಕಂಡು ಬಂತು.

ಶೆಟ್ಟಿಹಳ್ಳಿ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಜನಾ ಮಂಡಳಿಗಳಿಂದ ಭಜನೆಗಳು ಮೊಳಗಿದವು. ಭಕ್ತರಿಗೆ ಪಾನಕ, ಹೆಸರುಬೇಳೆ, ಮಜ್ಜಿಗೆ ವಿತರಿಸಲಾಯಿತು.

ಅಮರಜ್ಯೋತಿ ನಗರದಲ್ಲಿರುವ ಶಿರಡಿಸಾಯಿಬಾಬ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯ, ಭಜನೆಗಳು ಮೊಳಗಿದ್ದು, ಪ್ರಸಾದ ವಿತರಣೆ ಮಾಡಲಾಯಿತು. ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾ ಮಂಟಪದಲ್ಲಿ ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿ ಭಾಗವಹಿಸಿದ್ದ ಕರಸೇವಕರ ಮಿಲನ ಕಾರ್ಯಕ್ರಮ ಸಹ ಇದೇ ವೇಳೆ ನಡೆಯಿತು.

ಕರಸೇವಕರ ಮಿಲನ ಕಾರ್ಯಕ್ರಮದಲ್ಲಿ ರಾಮ, ಭಾರತಮಾತೆ ಭಾವಚಿತ್ರದೊಂದಿಗೆ ಪವಿತ್ರ ಗಂಗಾ ಜಲ ಮತ್ತು ಕರಸೇವೆಯ ಸಮಯದಲ್ಲಿ ತಂದ ನಾಲ್ಕು ಇಟ್ಟಿಗೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಸೊಗಡು ಶಿವಣ್ಣ, ಕೆ.ಪಿ. ಮಹೇಶ್, ಸಂಪಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು.

ರಾಮಮಂದಿರ ಉದ್ಘಾಟನೆ ಅಂಗವಾಗಿ ನಗರದ ಎಲ್ಲೆಡೆ ಆಟೋಗಳಲ್ಲಿ ಶ್ರೀರಾಮ ಮತ್ತು ರಾಮಮಂದಿರದ ಚಿತ್ರ ಇರುವ ಬಾವುಟಗಳು ರಾರಾಜಿಸುತ್ತಿದ್ದವು. ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಶ್ರೀರಾಮನ ಬೃಹತ್ ಕಟೌಟ್‌ಗಳು, ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

Share this article