ತುಮಕೂರು: ಇಂದಿನಿಂದ ಲಾರಿ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ

KannadaprabhaNewsNetwork |  
Published : Jan 17, 2024, 01:50 AM IST
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಲಾರಿ ಚಾಲಕರ ಸಂಘದಿಂದ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ

ಕನ್ನಡಪ್ರಭ ವಾರ್ತೆ ತುಮಕೂರು

ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ತಂದಿರುವ ತಿದ್ದುಪಡಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಕೂಡಲೆ ಹಿಂಪಡೆಯವಂತೆ ಒತ್ತಾಯಿಸಿ ಜ.17 ರಿಂದ ರಾಜ್ಯದಾದ್ಯಂತ ಲಾರಿ ಚಾಲಕರು ಮತ್ತು ಮಾಲೀಕರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸುತ್ತಿರುವುದಾಗಿ ತುಮಕೂರು ಜಿಲ್ಲಾ ಲಾರಿ ಚಾಲಕರ ಮತ್ತು ಸಹಾಯಕರ ಸಂಘ ನೇತೃತ್ವದಲ್ಲಿ ಲಾರಿ ಮಾಲೀಕರ ಸಂಘ ಹಾಗೂ ಇನ್ನಿತರ ಚಾಲಕರ ಸಂಘಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತುಮಕೂರು ಜಿಲ್ಲಾ ಲಾರಿ ಚಾಲಕರ ಮತ್ತು ಸಹಾಯಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸೈಯದ್ ಮೆಹಬೂಬ್ ಪಾಷ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಶೌಕತ್, ತುಮಕೂರು ತಾಲೂಕು ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ನಿರ್ದೇಶಕ ಟಿ.ಆರ್‌. ಸದಾ ಶಿವಯ್ಯ, ಸುರೇಶ್, ನಾಗಭೂಷಣ್ ಸೇರಿದಂತೆ ಹಲವರು, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಯ ಪ್ರಕಾರ ಒಂದು ವೇಳೆ ಅಪಘಾತ ಜರುಗಿ, ಜನರು ನನ್ನ ಮೇಲೆ ಹಲ್ಲೆ ಮಾಡಬಹುದೆಂಬ ಭಯದಿಂದ ಚಾಲಕ ಲಾರಿ ಬಿಟ್ಟು ಓಡಿ ಹೋದರೆ, ಆತನಿಗೆ 7 ವರ್ಷ ಸಜೆ ಹಾಗೂ 10 ಲಕ್ಷ ರು. ದಂಡ ವಿಧಿಸಲು ಭಾರತೀಯ ನ್ಯಾಯ ಸಂಹಿತೆಯಲ್ಲಿ ಅವಕಾಶವಿದೆ. ಇದು ಅತ್ಯಂತ ಖಂಡನೀಯ ಮತ್ತು ಅವೈಜ್ಞಾನಿಕವಾಗಿದೆ. ಭಾರತೀಯ ದಂಡ ಸಂಹಿತೆ 1860 ರಲ್ಲಿ ಇಂತಹ ಪ್ರಕರಣಗಳಲ್ಲಿ ಮೊದಲು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿ, ವಿಚಾರಣೆ ನಡೆದು ತಪಿತಸ್ಥ ಎಂದು ಕಂಡ ಬಂದ ನಂತರ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿತ್ತು.

ಆದರೆ ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಇದಕ್ಜೆ ಅವಕಾಶವೇ ಇಲ್ಲದಂತಾಗಿದೆ. ಹಾಗಾಗಿ ಇದೊಂದು ಅವೈಜ್ಞಾನಿಕ ಕಾಯ್ದೆಯಾಗಿದ್ದು, ಚಾಲಕರಿಗೆ ಮಾರಕವಾಗಿದೆ. ಇದು ಕೇವಲ ಬಾರಿ ವಾಹನಗಳಿಗೆ ಸಂಬಂಧಿಸಿದಲ್ಲ. ಲಘು ವಾಹನಗಳಿಗೂ ಅನ್ವಯವಾಗುವ ಕಾರಣ, ಜ.17 ರಿಂದ ಅನಿರ್ಧಿಷಾವಧಿ ಮುಷ್ಕರ ಆರಂಭಿಸುವುದಾಗಿ ಟಿ.ಆರ್‌. ಸದಾಶಿವಯ್ಯ ತಿಳಿಸಿದರು.

ಕೇಂದ್ರ ಸರಕಾರ ಸದರಿ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ಲಾರಿ ಚಾಲಕರಾಗಲಿ, ಮಾಲೀಕರ ಅಭಿಪ್ರಾಯ ಆಲಿಸಿಲ್ಲ. ಏಕಪಕ್ಷೀಯವಾಗಿ ಕಾಯ್ದೆ ಜಾರಿಗೆ ತಂದಿದೆ. ಈ ಹಿಂದೆ ಭಾರತೀಯ ದಂಡ ಸಂಹಿತೆಯ ಕಲಂ 304(ಎ) ಅಡಿಯಲ್ಲಿ ಇದ್ದ ಹಿಟ್ ಅಂಡ್ ರನ್ ವಿಷಯವನ್ನು ಭಾರತೀಯ ನ್ಯಾಯ ಸಂಹಿತೆ-2023 ರಲ್ಲಿ ಕಲಂ 104 (1) ಮತ್ತು (2)ರಲ್ಲಿ ಇದ್ದ ಶಿಕ್ಷೆಯ ಪ್ರಮಾಣವನ್ನ ಎರಡು ವರ್ಷದಿಂದ ೭ ವರ್ಷಗಳಿಗೆ ಹೆಚ್ಚಿಸಲಾಗಿದೆ. ಇದನ್ನು ಖಂಡಿಸಿ ಮತ್ತು ಹಿಂಪಡೆಯುವಂತೆ ಒತ್ತಾಯಿಸಿ ಜನವರಿ 17 ರಿಂದ ಲಾರಿ ಮಾಲೀಕರು, ಚಾಲಕರು ಮುಷ್ಕರ ಹಮ್ಮಿಕೊಂಡಿದ್ದು, ಇದಕ್ಕೆ ಆಟೋ, ಕ್ಯಾಬ್, ಸರಕು ಸಾಗಾಣಿಕೆ ವಾಹನಗಳ ಚಾಲಕರು, ಮಾಲೀಕರು, ಆಟೋ ಮಾಲೀಕರು ಮುಷ್ಕರದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಮೆಹಬೂಬ್ ಪಾಷ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ