ಹೊಸಪೇಟೆ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಹೊಸಪೇಟೆ, ಸುತ್ತಮುತ್ತ ಗ್ರಾಮಗಳ ರೈತರು ಮೈಲಾರ್ ಶುಗರ್ಸ್ ಬೀರಬ್ಬಿ, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ್ದು, ನವೆಂಬರ್ 30 ರಿಂದ ಇದುವರೆಗೂ ಒಂದು ರುಪಾಯಿ ಹಣವನ್ನು ಕಾರ್ಖಾನೆಯವರು ರೈತರಿಗೆ ಪಾವತಿಸಿಲ್ಲ. ಆದರೆ ಮುಂಡರಗಿ, ಸಿರಗುಪ್ಪ ಸೇರಿದಂತೆ ಇತರೆ ಸಕ್ಕರೆ ಕಾರ್ಖಾನೆಯವರು ಈಗಾಗಲೇ ಸಂಪೂರ್ಣ ಹಣವನ್ನು ರೈತರಿಗೆ ಪಾವತಿಸಿದ್ದಾರೆ. ಮೈಲಾರ್ ಶುಗರ್ಸ್ ಕಾರ್ಖಾನೆಯವರು 4-5 ತಿಂಗಳಿಂದ ಹಣ ನೀಡಿಲ್ಲ. ರೈತರು ಹಣ ಕೇಳಿದರೆ ಕಾರ್ಖಾನೆಯವರು ಸರ್ಕಾರದಿಂದ ಇಥೆನಾಲ್ ಪೇಮೆಂಟ್ ಆಗಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ.
ಕೃಷಿ ಇಲಾಖೆಯಲ್ಲಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕು. ತಕ್ಷಣವೇ ರೈತರಿಗೆ ಸಬ್ಸಿಡಿ ರೂಪದಲ್ಲಿ ಸೆಣಬನ್ನು ವಿತರಿಸಬೇಕು. ರೈತರು ಹೊರಗಡೆ ತೆಗೆದುಕೊಳ್ಳಲು ಹೋದರೆ ಒಂದು ಕ್ವಿಂಟಲ್ ಸೆಣಬಿಗೆ ₹14 ಸಾವಿರ ಆಗುತ್ತದೆ. ಸಬ್ಸಿಡಿ ರೂಪದಲ್ಲಿ ಆದರೆ ರೈತರಿಗೆ ಕ್ವಿಂಟಲ್ ₹5000ಕ್ಕೆ ಸಿಗುತ್ತದೆ. ಸಿಟಿಕಾಂಪೋಸ್ಟ್, ಬೇವಿನಹಿಂಡಿ, ಮತ್ತು ಹಲವಾರು ಔಷಧಿಗಳು, ಜಿಪ್ಸಂ, ಇನ್ನು ಹಲವಾರು ಗೊಬ್ಬರಗಳನ್ನು ನೀಡುತ್ತಿದ್ದು. ಆದರೆ ಈ ಸರ್ಕಾರ ಬಂದ ನಂತರ ಯಾವುದೇ ಗೊಬ್ಬರವಾಗಲಿ, ಔಷಧಿಗಳಾಗಲಿ, ಕೃಷಿಹೊಂಡಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ. ಮಣ್ಣು ಪರೀಕ್ಷಾ ಕೇಂದ್ರವನ್ನು ಒಂದು ವಾರದೊಳಗಾಗಿ ಇನ್ಸ್ಟಾಲೇಷನ್ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ತುಂಗಭದ್ರಾ ಜಲಾಶಯದ 33 ಕ್ರಸ್ಟ್ಗೇಟ್ಗಳನ್ನು ಮೇ 31ರೊಳಗಾಗಿ ಸರಿಪಡಿಸಿಕೊಡಬೇಕು. ಇಲ್ಲವಾದಲ್ಲಿ ತುಂಗಭದ್ರಾ ಮಂಡಳಿಯ ಆಡಳಿತ ಕಚೇರಿಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ರೈತ ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.