ಕನ್ನಡಪ್ರಭ ವಾರ್ತೆ ಭಟ್ಕಳ
ಹನುಮಂತ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಗೋವುಗಳನ್ನು ಸೋಮವಾರ ಬೆಳಗಿನ ಜಾವ ೩.೧೫ರ ಸುಮಾರಿಗೆ ಅಪರಿಚಿತರು ಬಿಳಿ ಬಣ್ಣದ ಮಾರುತಿ ಸುಜುಕಿ ಕಾರಿನಲ್ಲಿ ಬಂದು ಅಪಹರಣ ಮಾಡಿರುವುದು ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಗೋ ಕಳ್ಳತನದ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರವಾಗುತ್ತಲೇ ನಗರ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳಾದ ಚೌಥನಿ ನಿವಾಸಿ ಮೊಹಮ್ಮದ್ ರಾಹೀನ ಹಾಗೂ ಮದೀನಾ ಕಾಲನಿಯ ಮೋಹಿದಿನ್ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಫೈಜಾನ್ ಎನ್ನುವ ಇಬ್ಬರನ್ನು ಗುರುತಿಸಿ ಬಂಧಿಸಿದ್ದು, ಅವರು ಕೃತ್ಯಕ್ಕೆ ಬಳಸಿದ್ದ ಕಾರನ್ನು ಕೂಡಾ ವಶಕ್ಕೆ ಪಡೆದುಕೊಂಡಿದ್ದಾರೆ. ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ಪದೇ ಪದೇ ಗೋವು ಕಳ್ಳತನವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್. ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ. ಮಹೇಶ್ ಎಂ.ಕೆ., ನಗರ ಠಾಣೆ ಸಿಪಿಐ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ಪಿಎಐ ನವೀನ್ ನಾಯ್ಕ ಹಾಗೂ ತಂಡ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಕೃಷ್ಣ ಎನ್.ಜಿ., ಮಲ್ಲಿಕಾರ್ಜುನ ಉಟಿಗಿ, ಕಿರಣ ಪಾಟೀಲ್, ನಾಗರಾಜ್ ಮೊಗೇರ್, ದೀಪಕ್ ನಾಯ್ಕ, ಸುರೇಶ್ ಮರಾಠಿ, ಲೊಕೇಶ್ ಕತ್ತಿ, ಮಹೇಶ್ ಪಟಗಾರ ಸೇರಿ ಹಲವರು ಪಾಲ್ಗೊಂಡಿದ್ದರು. ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂಜಾವೇ ಒತ್ತಾಯಿಸಿದೆ.