ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ವರು ಬಾಲಕರು ನೀರು ಪಾಲಾಗಿರುವ ಘಟನೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕುರ್ಕಿ ಗ್ರಾಮದ ಪಾಂಡು (16), ತುರ್ಚಘಟ್ಟ ಗ್ರಾಮದ ಗಣೇಶ (16) ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕರು. ತುರ್ಚಘಟ್ಟದ ಗುರುಕುಲ ವಸತಿ ಶಾಲೆಯಲ್ಲಿ ಈ ಬಾಲಕರು ಎಸ್ಸೆಸ್ಸೆಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಭಾನುವಾರ ಶಾಲೆಗೆ ರಜೆ ಇದ್ದರಿಂದ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಇಬ್ವರು ಕುರ್ಕಿ ಗ್ರಾಮಕ್ಕೆ ಬಂದಿದ್ದಾರೆ.
ಗ್ರಾಮದ ಬಳಿ ಹರಿಯುತ್ತಿರುವ ದೊಡ್ಡದಾದ ಭದ್ರಾ ಕಾಲುವೆಯಲ್ಲಿ ಪಾಂಡು ಮತ್ತು ಗಣೇಶ ಈಜಲು ನೀರಿಗೆ ಇಳಿದಿದ್ದಾರೆ. ಪಾಂಡುಗೆ ಈಜು ಬರುತ್ತಿತ್ತು, ಆದರೆ, ಗಣೇಶನಿಗೆ ಈಜಲು ಬರುತ್ತಿರಲಿಲ್ಲ. ಮೊದಲು ಪಾಂಡು ಕಾಲುವೆಗೆ ಜಿಗಿದು ಈಜಾಡುತ್ತಿದ್ದ. ಅನಂತರ ಗಣೇಶ ಸಹ ನೀರಿಗೆ ಜಿಗಿದಿದ್ದಾನೆ. ಈ ವೇಳೆ ಗಣೇಶ ಮುಳುಗಿ ಏಳುತ್ತಿದ್ದಾಗ ಪಾಂಡು ಅವನ ರಕ್ಷಣೆಗೆ ಯತ್ನಸಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ಈ ಬಾಲಕರು ಈಜುತ್ತಿದ್ದ ಸಮೀಪವೇ ಗೇಟು ಇದ್ದು, ಈ ಗೇಟ್ ಬಳಿ ಪಾಂಡು ಮೃತದೇಹ ಪತ್ತೆಯಾಗಿದ್ದು, ಗಣೇಶ್ ಮೃತದೇಹ ಸಿಕ್ಕಿಲ್ಲ.
ಶಾಸಕ ಬಸವಂತಪ್ಪ ಭೇಟಿ:
ಸುದ್ದಿ ತಿಳಿದ ಕೂಡಲೇ ಘಟನೆ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು. ನೀರು ಪಾಲಾದ ಬಾಲಕರ ಮೃತದೇಹ ಹೊರತೆಗೆಯುವಲ್ಲಿ ಸಹಕರಿಸಿದರು. ಹದಡಿ ಪೊಲೀಸರು ಭೇಟಿ ನೀಡಿದ್ದಾರೆ. ಇಬ್ಬರು ಬಾಲಕರು ನೀರು ಪಾಲಾದ ಸುದ್ದಿ ಹಬ್ಬುತ್ತಿದ್ದಂತೆ ಕುರ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಬೈಕ್, ಕಾರು, ಟ್ರ್ಯಾಕ್ಟರ್ಗಳಲ್ಲಿ ನಾಲೆ ಬಳಿಗೆ ದೌಡಾಯಿಸಿದ್ದರು. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕ ಕೆ.ಎಸ್.ಬಸವಂತಪ್ಪ ಸಾಂತ್ವನ ಹೇಳಿದರು.
- - -
-2ಕೆಡಿವಿಜಿ42: ಪಾಂಡು -2ಕೆಡಿವಿಜಿ43: ಗಣೇಶ -2ಕೆಡಿವಿಜಿ33, 34.ಜೆಪಿಜಿ: ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ನಾಲೆಯಲ್ಲಿ ಈಜಲು ಹೋದ ಬಾಲಕರು ನೀರು ಪಾಲಾದ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.