ಅವಳಿ ರಸ್ತೆ ಧೂಳುಮುಕ್ತ ಮಾಡಲು ಬಂದ್ವು ಎರಡು ಯಂತ್ರ

KannadaprabhaNewsNetwork |  
Published : Apr 01, 2024, 12:45 AM IST
ಹು-ಧಾ ಮಹಾನಗರ ಪಾಲಿಕೆಗೆ ಆಗಮಿಸಿರುವ ದೂಳು ತೆಗೆಯುವ ಯಂತ್ರ. | Kannada Prabha

ಸಾರಾಂಶ

ಮಹಾನಗರ ಪಾಲಿಕೆ ₹2.96 ಕೋಟಿ ವೆಚ್ಟದಲ್ಲಿ ಧೂಳು ತೆಗೆಯುವ 2 ಯಂತ್ರಗಳನ್ನು ಮತ್ತೆ ಖರೀದಿಸಿದೆ. ಪುಣೆಯಿಂದ ಗುರುವಾರ ಯಂತ್ರಗಳು ಬಂದಿದ್ದು, ಮೇ ಮೊದಲ ಇಲ್ಲವೇ 2ನೇ ವಾರದಲ್ಲಿ ರಸ್ತೆಗಿಳಿಯಲಿವೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹು-ಧಾ ಮಹಾನಗರವನ್ನು ಧೂಳು ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದೊಂದಿಗೆ ಮಹಾನಗರ ಪಾಲಿಕೆ ₹2.96 ಕೋಟಿ ವೆಚ್ಟದಲ್ಲಿ ಧೂಳು ತೆಗೆಯುವ 2 ಯಂತ್ರಗಳನ್ನು ಮತ್ತೆ ಖರೀದಿಸಿದೆ. ಪುಣೆಯಿಂದ ಗುರುವಾರ ಯಂತ್ರಗಳು ಬಂದಿದ್ದು, ಮೇ ಮೊದಲ ಇಲ್ಲವೇ 2ನೇ ವಾರದಲ್ಲಿ ರಸ್ತೆಗಿಳಿಯಲಿವೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧಗಾಳಿ ಯೋಜನೆ (ಎನ್‌ಸಿಪಿಎ) ಅಡಿಯಲ್ಲಿ ಮೊದಲ ಹಂತದಲ್ಲಿ ಧೂಳು ತೆಗೆಯುವ 2 ಯಂತ್ರಗಳನ್ನು ಖರೀದಿಸಲಾಗಿದೆ. ಒಂದು ಯಂತ್ರಕ್ಕೆ ₹1.48 ಕೋಟಿ ವೆಚ್ಚ ಮಾಡಲಾಗಿದ್ದು. ಮೂರು ವರ್ಷದ ನಿರ್ವಹಣೆಗೆ ₹2.88 ಕೋಟಿ ವಿನಿಯೋಗಿಸಲಾಗುತ್ತಿದೆ.

ಗುಜರಿ ಸೇರಿದ ಹಳೆಯ ಯಂತ್ರ

ನಗರದ ಜನತೆಗೆ ಧೂಳಿನಿಂದಾಗಿ ಮುಕ್ತಿ ದೊರೆಯುವ ಉದ್ದೇಶದೊಂದಿಗೆ ಈ ಹಿಂದೆಯೇ ಪಾಲಿಕೆಯು ₹1 ಕೋಟಿ ಖರ್ಚು ಮಾಡಿ ದೂಳು ಸ್ವಚ್ಛಗೊಳಿಸುವ ಯಂತ್ರ ಖರೀದಿಸಿತ್ತು. ಆದರೆ, ಇದು ನಿತ್ಯವೂ ರಸ್ತೆಗಿಳಿದು ಜನರಿಗೆ ಧೂಳಿನಿಂದ ಮುಕ್ತಿ ಕೊಡುತ್ತದೆ ಎಂದು ನಂಬಲಾಗಿತ್ತು. ಆದರೆ, ನಗರಕ್ಕೆ ಗಣ್ಯ ವ್ಯಕ್ತಿಗಳು ಬಂದಾಗ ಈ ಗಾಡಿಯು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಸಮರ್ಪಕ ನಿರ್ವಹಣೆಯಿಲ್ಲದೆ ಈ ಯಂತ್ರ ಹಾಳಾಗಿ ಗುಜರಿಗೆ ಸೇರಿದೆ. ಇದೀಗ ಮತ್ತೆ ಜರ್ಮನ್ ತಂತ್ರಜ್ಞಾನದ ಹೊಸ ಮಾದರಿಯ ಯಂತ್ರವನ್ನು ಪಾಲಿಕೆಗೆ ತರಿಸಲಾಗಿದ್ದು, ಈ ಯಂತ್ರವಾದರೂ ನಿತ್ಯ ರೋಡಿಗಿಳಿಯಲಿದೆಯೇ ಎಂಬುದು ಜನರ ಪ್ರಶ್ನೆಯಾಗಿದೆ.

3 ವರ್ಷ ಗುತ್ತಿಗೆ:

ಈ ಹಿಂದಿನ ಯಂತ್ರದ ನಿರ್ವಹಣೆಯ ಕೊರತೆಯಿಂದಾಗಿ ಗುಜರಿಗೆ ಸೇರಿತ್ತು. ಆದರೆ, ಈಗ ತರಿಸಿರುವ ಯಂತ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ಮೂರು ವರ್ಷಗಳ ಅವಧಿಗೆ ಫುಣೆ ಮೂಲದ ಚಾಲೆಂಜರ್‌ ಕಂಪನಿಯೇ ಗುತ್ತಿಗೆ ಪಡೆದಿದೆ. ಈ ವಾಹನಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಚಾಲಕರಿಗೆ ಇದೇ ಕಂಪನಿ ತರಬೇತಿ ನೀಡಲಿದೆ.

ಈ ವಾಹನದ ನಿರ್ವಹಣೆಯ ಜವಾಬ್ದಾರಿಯನ್ನು ಕಂಪನಿಗೆ ವಹಿಸಿರುವುದರಿಂದ, ಏನೇ ಸಮಸ್ಯೆಯಾದರೂ ಕಂಪನಿಯೇ ನಿಭಾಯಿಸಬೇಕು. ಯಂತ್ರಗಳ ಬಿಡಿಭಾಗಗಳು ಇಲ್ಲ ಎಂದು ಸಬೂಬು ಹೇಳಿ ಕಾರ್ಯಾಚರಣೆ ನಿಲ್ಲಿಸುವಂತಿಲ್ಲ. ಈ ಎಲ್ಲ ನಿಯಮಾವಳಿಗಳನ್ನು ಒಪ್ಪಿಕೊಂಡೇ ಕಂಪನಿಯು ಗುತ್ತಿಗೆ ಪಡೆದಿದೆ.

ಯಂತ್ರದ ವಿಶೇಷತೆ ಏನು?:

ಈ ಯಂತ್ರಗಳು ಪ್ರತಿದಿನ ರಾತ್ರಿ 12ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಕಾರ್ಯಾಚರಣೆ ನಡೆಸಲಿವೆ. ಮೊದಲಿದ್ದ ಧೂಳು ತೆಗೆಯುವ ಯಂತ್ರ ಕೇವಲ ಧೂಳಿನ ಕಣಗಳನ್ನು ಮಾತ್ರ ಸಂಗ್ರಹಿಸುತ್ತಿತ್ತು. ಆದರೆ, ಈ ಯಂತ್ರ 2.5 ಎಂಎಂನಿಂದ 10 ಎಂಎಂ ಗಾತ್ರದ ವರೆಗಿನ ವಸ್ತುಗಳನ್ನು ತೆಗೆಯಲಿದೆ. ಮೊದಲಿನ ಯಂತ್ರ ಮಳೆಗಾಲದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿರಲಿಲ್ಲ. ಈ ಹೊಸ ಯಂತ್ರ ವರ್ಷದ 12 ತಿಂಗಳ ಕಾಲ ಕಾರ್ಯನಿರ್ವಹಿಸಲಿದೆ. ಧೂಳು ತೆಗೆಯುವುದರ ಜತೆಗೆ ರಸ್ತೆಗೆ ನೀರು ಸಿಂಪಡಿಸಿ ಧೂಳು ಮುಕ್ತವಾಗಿಸಲಿದೆ. ಒಂದು ಯಂತ್ರ ಒಂದು ದಿನಕ್ಕೆ 20ರಿಂದ 25 ಕಿ.ಮೀ ವರೆಗೆ ಕಾರ್ಯಾಚರಣೆ ನಡೆಸಲಿದೆ. 5 ಕಿಮೀ ಧೂಳು ತೆಗೆಯಲು ಒಂದು ಗಂಟೆ ಸಮಯ ಬೇಕು. ಇದಕ್ಕೆ 7ರಿಂದ 8 ಲೀಟರ್‌ ಡೀಸೆಲ್‌ ಬೇಕಾಗುತ್ತದೆ. 10 ಗಂಟೆಯಲ್ಲಿ ಸುಮಾರು 40 ಕಿಮೀ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಈ ವಾಹನಗಳು ಹೊಂದಿವೆ.

ಮಹಾನಗರಕ್ಕೆ ಬೇಕಿವೆ 6 ಯಂತ್ರಗಳು

ಹು-ಧಾ ಮಹಾನಗರದ ದೂಳು ನಿವಾರಣೆಗೆ ಬೇಕಿರುವುದು ಒಟ್ಟು 6 ಯಂತ್ರಗಳು. ಮೊದಲ ಹಂತದಲ್ಲಿ ಈಗ 2 ಯಂತ್ರಗಳನ್ನು ಖರೀದಿಸಲಾಗಿದ್ದು, ಮತ್ತೊಂದು ಯಂತ್ರ ಖರೀದಿಗೆ ಅನುಮೋದನೆ ದೊರೆತಿದೆ. ಲೋಕಸಭೆ ಚುನಾವಣೆಯ ನಂತರ ಯಂತ್ರ ಖರೀದಿಗೆ ಟೆಂಡರ್‌ ಕರೆಯಲಾಗುವುದು. ಮುಂದಿನ ದಿನಗಳಲ್ಲಿ ಇನ್ನುಳಿದ 3 ಯಂತ್ರಗಳ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಕನ್ನಡಪ್ರಭಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ