ವಡಗೇರಾದ ಮಾಚನೂರಿನಲ್ಲಿ ಘಟನೆ । ಭಾರಿ ಮಳೆ ಹಿನ್ನೆಲೆ ನದಿಯಲ್ಲಿ ಹೆಚ್ಚಿದ್ದ ಒಳಹರಿವು । ಪ್ರವಾಹದ ಭೀತಿ
ಕನ್ನಡಪ್ರಭ ವಾರ್ತೆ ಯಾದಗಿರಿ
ಶುಕ್ರವಾರ ಬೆಳಿಗ್ಗೆ ಜಾನುವಾರುಗೆ ನೀರು ಕುಡಿಸಲು ಭೀಮಾ ನದಿಗೆ ಇಳಿದಿದ್ದ ದನಗಾಹಿ ಯುವಕರಿಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋದ ದುರ್ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಮಾಚನೂರಿನಲ್ಲಿ ಘಟಿಸಿದೆ.ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಭಾರಿ ಪ್ರಮಾಣದ ಮಳೆಯಿಂದಾಗಿ ಭೀಮಾ ನದಿ ಪಾತ್ರದಲ್ಲಿ ಒಳಹರಿವು ರಭಸವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಯಾದಗಿರಿ ಹೊರವಲಯದ ಭೀಮಾ ಬ್ರಿಡ್ಜ್ ಕಂ ಬ್ಯಾರೇಜಿನಿಂದ ಸುಮಾರು 30 ಸಾವಿರ ಕ್ಯುಸೆಕ್ ಪ್ರಮಾಣದಷ್ಟು ನೀರನ್ನು ನದಿಗೆ ಬಿಡಲಾಗಿದ್ದರಿಂದ, ನದಿ ತೀರದ ಗ್ರಾಮಗಳಲ್ಲೀಗ ಪ್ರವಾಹ ಭೀತಿ ಎದುರಾಗಿದೆ.
ಈ ಮಧ್ಯೆ, ಮಾಚನೂರು ಗ್ರಾಮದ ರಮೇಶ (ಪರಶುರಾಮ) (17) ಮತ್ತು ಸಿದ್ದಪ್ಪ (20) ಎಂಬ ಯುವಕರು ಗ್ರಾಮದ ಸಮೀಪ ಹರಿಯುಯುವ ಭೀಮಾ ನದಿಯಲ್ಲಿ ನೀರುಪಾಲಾಗಿದ್ದಾರೆ. ಜಾನುವಾರಿಗೆ ನೀರು ಕುಡಿಸಲು ನದಿಗಿಳಿದಾಗ ಪ್ರವಾಹದೊತ್ತಡಕ್ಕೆ ಸಿಲುಕಿ ಕೊಚ್ಚಿಹೊಗಿದ್ದಾರೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ವಡಗೇರಾ ತಹಸಿಲ್ದಾರರು, ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಈ ಇಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ. ನುರಿತ ಈಜುಗಾರರು ಹಾಗೂ ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚಾರಣೆ ನಡೆಸಿದ್ದಾರೆ.ಮಕ್ಕಳು ನೀರುಪಾಲಾದ ಸುದ್ದಿ ಕೇಳಿ ನದಿದಡಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಶುಕ್ರವಾರ ಮೋಡ ಕವಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆಯ ಸಿಂಚನದ ಮಧ್ಯೆ ಶೋಧಕ್ಕಾಗಿ ಹರಸಾಹಸ ನಡೆದಿತ್ತು. ಈ ಮಧ್ಯೆ, ಈ ಅವಘಡದಲ್ಲಿ ಮೊಮ್ಮಗ ರಮೇಶ (ರಾಮು) ನೀರುಪಾಲಾದ ಸುದ್ದಿ ಕೇಳಿ ಆಘಾತಕ್ಕೊಳಗಾದ ಆತನ ಅಜ್ಜ ಸಿದ್ದಣ್ಣ ಕಣ್ಣೀರಿಡುತ್ತ ನದಿಗೆ ಹಾರಲು ಮುಂದಾಗಿದ್ದರು.
ತೀವ್ರ ದು:ಖತಪ್ತರಾಗಿದ್ದ ಅಜ್ಜ ಸಿದ್ದಣ್ಣ, ‘ರಾಮು...ರಾಮು..’ ಎಂದು ಕೂಗುತ್ತ ನದಿಯೊಳಗೆ ಹಾರಲೆತ್ನಿಸಿದರು. ತಕ್ಷಣವೇ ಅಲ್ಲಿನ ಶ್ರೀಶೈಲ ಎಂಬಾತ, ಇತರರು ಕೂಡಿಕೊಂಡು ಅಜ್ಜ ಸಿದ್ದಣ್ಣರನ್ನು ರಕ್ಷಿಸಿದರು. ಇಡೀ ಕುಟುಂಬ ಕಣ್ಣೀರಿಡುತ್ತಿರುವ ದೃಶ್ಯ ಅಲ್ಲಿ ಮನಕುಲುಕವಂತೆ ಮಾಡಿತ್ತು. ಶುಕ್ರವಾರ ಸಂಜೆವರೆಗೂ ಶೋಧಕಾರ್ಯ ಮುಂದುವರಿದಿತ್ತು.ದೇವಸ್ಥಾನಗಳು ಮುಳುಗಡೆ:
ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಯಾದಗಿರಿಯ ಗುರುಸುಣಗಿ ಬ್ರಿಡ್ಜ್ ಕಂ ಬ್ಯಾರೇಜಿನಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ, ಯಾದಗಿರಿಯ ಭೀಮಾ ನದಿ ದಡದ ಶ್ರೀಕಂಗಳೇಶ್ವರ, ಶ್ರೀವೀರಾಂಜನೇಯ ದೇವಸ್ಥಾನಗಳು ಮುಳುಗಡೆಯಾಗಿವೆ. ಕೆಲವರು ನದಿದಡದಲ್ಲೇ ಕುಳಿತು ದೇವರಿಗೆ ಪೂಜೆ ಪುನಸ್ಕಾರಗಳ ಸಲ್ಲಿಸಿದರೆ, ಬಟ್ಟೆ ಒಗೆಯಲು ಈಜಾಡಲು ಬಂದವರನ್ನು ಅಲ್ಲಿ ನಿಯೋಜಿತ ರಕ್ಷಣಾ ಸಿಬ್ಬಂದಿ, ಪ್ರವಾಹ ಸ್ಥಿತಿಗತಿ ಬಗ್ಗೆ ತಿಳಿಸಿ ವಾಪಸ್ ಕಳುಹಿಸುತ್ತಿದ್ದರು.