ಕನ್ನಡಪ್ರಭ ವಾರ್ತೆ ಬೇಲೂರು
ನೂತನ ವರ್ಷದ ಸಂಭ್ರಮಾಚರಣೆ ಮಾಡಲು ಮಲಸಾವರ ಗ್ರಾಮದ ಲಕ್ಷ್ಮಿಪುರ ಕೆರೆ ಏರಿಯ ಮೇಲೆ ಇಬ್ಬರು ಯುವಕರು ಪಾರ್ಟಿ ಮಾಡಿದ್ದಾರೆ. ಬೆಳಿಗ್ಗೆಯಾದರೂ ಮನೆಗೆ ಯುವಕರು ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅವರನ್ನು ಹುಡುಕಾಡಿದ ಸಂದರ್ಭದಲ್ಲಿ ಕೆರೆಯ ಏರಿ ಮೇಲೆ ಚಪ್ಪಲಿ ಹಾಗೂ ಮದ್ಯದ ಬಾಟಲು ಕಂಡು ಬಂದಿರುತ್ತದೆ. ಈ ಬಗ್ಗೆ ಸಂಶಯಗೊಂಡ ಗ್ರಾಮಸ್ಥರು ಅಗ್ನಿಶಾಮಕ ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಿರುತ್ತಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟು ಸಂಜೆ 6ರ ಸಮಯದಲ್ಲಿ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಲಕ್ಷ್ಮಿಪುರ ಬಡಾವಣೆಯ ನಿವಾಸಿಗಳಾದ ಅಜಿತ್ (30) ಹಾಗೂ ಅಶೋಕ್ (35) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಯುವಕರು. ಈ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.