ಕನ್ನಡಪ್ರಭ ವಾರ್ತೆ ಉಡುಪಿ ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ವೈಭವದಿಂದ ನಡೆಯುತ್ತಿರುವ ಉಚ್ಚಿಲ ದಸರಾ - 23ರಲ್ಲಿ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷವಾಗಿ ಜನಮನ ರಂಜಿಸಿತು. ಸಂಜೆ 4.30ರಿಂದ ಮಣಿಪಾಲದ ವಿದುಷಿ ಪವನ ಬಿ. ಆಚಾರ್ಯ ಅವರ ಸಾರಥ್ಯದಲ್ಲಿ ಶತವೀಣಾವಲ್ಲರಿ - 151 ಮಂದಿ ವೀಣಾವಾದಕಿಯರು ಏಕಕಾಲದಲ್ಲಿ ವೀಣಾವಾದನ ಕಛೇರಿ ನಡೆಸಿಕೊಟ್ಟು ದಾಖಲೆ ನಿರ್ಮಿಸಿದರು. ನಂತರ ಇಡಿ ತಂಡದ ಪರವಾಗಿ ದೇವಾಲಯದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್ ದಂಪತಿಗಳು ವಿದುಷಿ ಪವನ ಆಚಾರ್ಯರನ್ನು ಸನ್ಮಾನಿಸಿ ಗೌರವಿಸಿದರು. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಇಂದು ಶಾರದಾ ಛದ್ಮವೇಷ: ಇಂದು ಮಾತೆ ಶ್ರೀ ಕಾತ್ಯಾಯಿನಿ ದೇವಿಯ ಅರಾಧನೆ ನಡೆಯಲಿದೆ, ಬೆಳಗ್ಗೆ ಮುದ್ದಮಕ್ಕಳಿಂದ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಧಾರ್ಮಿಕ ಸಭೆಯಲ್ಲಿ ಮಣಿಪಾಲ ಸಮೂಹ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಅವರಿಂದ ಪ್ರಮುಖ ಭಾಷಣ, ಮಂಗಳೂರಿನ ನೃತ್ಯ ಭಾರತಿಯ ವಿದುಷಿ ರಶ್ಮಿ ಸರಳತ್ತಾಯ ನಿರ್ದೇಶನದಲ್ಲಿ ಶಿವನಾದ ಲಹರಿ ನೃತ್ಯ ವೈಭವ ನಡೆಯಲಿದೆ