ಉಡುಪಿ : 28ರಂದು ಲಕ್ಷ ಭಕ್ತರೊಂದಿಗೆ ಮೋದಿ ಭಗವದ್ಗೀತೆ ಪಠಣ

KannadaprabhaNewsNetwork |  
Published : Nov 07, 2025, 03:00 AM IST
Udupi Mutt

ಸಾರಾಂಶ

ಉಡುಪಿ ಕೃಷ್ಣಮಠದಲ್ಲಿ ಒಂದು ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವದಂಗವಾಗಿ ನ. 28ರಂದು ನಡೆಯುವ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ, ಅವರು ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತರ ಜೊತೆಗೆ ಭಗವದ್ಗೀತೆ ಪಠಣ ಮಾಡಲಿದ್ದಾರೆ.

 ಉಡುಪಿ : ಉಡುಪಿ ಕೃಷ್ಣಮಠದಲ್ಲಿ ಒಂದು ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವದಂಗವಾಗಿ ನ. 28ರಂದು ನಡೆಯುವ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ, ಅವರು ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತರ ಜೊತೆಗೆ ಭಗವದ್ಗೀತೆ ಪಠಣ ಮಾಡಲಿದ್ದಾರೆ. 

ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದರು. ತಾವು 2 ವರ್ಷದ ಹಿಂದೆ ಕೋಟಿ ಗೀತಾ ಲೇಖನ ಯಜ್ಞ ಸಂಕಲ್ಪಿಸಿದ್ದು, ಅದು ಪೂರ್ಣಗೊಳ್ಳುತ್ತಿದೆ. ಪ್ರಧಾನಿ ಮೋದಿ ಗೀತೆಯ ಸಂದೇಶದಂತೆ ನಡೆದುಕೊಳ್ಳುತ್ತಿರುವ ದೇಶದ ಏಕೈಕ ನಾಯಕರಾಗಿದ್ದಾರೆ, ವಿದೇಶಕ್ಕೆ ಹೋದಾಗಲೂ ಭಗವದ್ಗೀತೆಯನ್ನು ತಮ್ಮೊಂದಿಗೆ ತೆಗದುಕೊಂಡು ಹೋಗಿ ಅಲ್ಲಿನ ನಾಯಕರಿಗೆ ಉಡುಗೊರೆಯಾಗಿ ನೀಡಿ, ಗೀತೆಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡಿದ್ದಾರೆ. ಆದ್ದರಿಂದ ಕೋಟಿ ಗೀತಾ ಯಜ್ಞವನ್ನು ಶ್ರೀ ಕೃಷ್ಣನಿಗೆ ಮೋದಿ ಅವರಿಂದಲೇ ಅರ್ಪಣೆ ಮಾಡಬೇಕು ಎಂಬ ಆಶಯದಂತೆ ಅವರನ್ನು ಆಹ್ವಾನಿಸಲಾಗಿದೆ ಎಂದರು. 

ಪ್ರಧಾನಿ ಮೋದಿ ಭೇಟಿ ವಿವರ: ಅಂದು ಮಧ್ಯಾಹ್ನ 12 ಗಂಟೆಗೆ ಮೋದಿ ಕೃಷ್ಣ ಮಠಕ್ಕೆ ಆಗಮಿಸುತ್ತಾರೆ, ನಂತರ ಕೃಷ್ಣಮಠದಲ್ಲಿ ಸುಮಾರು 2.50 ಕೋಟಿ ರು. ವೆಚ್ಚದಲ್ಲಿ ಚಿನ್ನ ಹೊದಿಸಲಾಗಿರುವ ತೀರ್ಥ ಮಂಟಪವನ್ನು ಮತ್ತು ಕನಕನ ಕಿಂಡಿ ಉದ್ಘಾಟಿಸಲಿದ್ದಾರೆ. ನಂತರ ಮೋದಿ ಭಗವದ್ಗೀತೆ ಪಠಣ ಮಾಡುತ್ತಿರುವ 1 ಲಕ್ಷ ಭಕ್ತರೊಂದಿಗೆ ಕೊನೆಯ 10 ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ, ಬಳಿಕ ಸಭಾ ಕಾರ್ಯಕ್ರಮದಲ್ಲಿ ಮೋದಿ ಅವರನ್ನು ವಿಶಿಷ್ಟವಾಗಿ ಸನ್ಮಾನಿಸಲಾಗುತ್ತದೆ ಎಂದು ಶ್ರೀಗಳು ಮಾಹಿತಿ ನೀಡಿದರು. 

 ಈ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಅವಿಭಜಿತ ದ.ಕ. ಜಿಲ್ಲೆ ಮಾತ್ರವಲ್ಲ, ಉಕ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಹಾಸನಗಳಿಂದಲೂ ಸುಮಾರು ಲಕ್ಷ ಮಂದಿ ಭಕ್ತರು ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ. ಇದೊಂದು ದಾಖಲೆ ಕಾರ್ಯಕ್ರಮವಾಗಲಿದೆ ಎಂದರು.

30ರಂದು ಯೋಗಿ ಉಡುಪಿಗೆ:

30ರಂದು ನಾಡಿನ ವಿವಿಧ ಕಡೆಯ ಮಠಾಧಿಪತಿಗಳು ಭಾಗವಹಿಸುವ ಸಂತ ಸಂಗಮ ಮತ್ತು ಭಜನೋತ್ಸವ ನಡೆಯಲಿದ್ದು. ಇದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ, ಅಂದು ಮಧ್ಯಾಹ್ನ 3 ಗಂಟೆಗೆ ಯೋಗಿ ಅವರಿಗೆ ವೈಭವದ ಶೋಭಾಯಾತ್ರೆ, 4 ಗಂಟೆಗೆ ಸಾಮೂಹಿತ ಭಜನೋತ್ಸವ ಆಯೋಜಿಸಲಾಗಿದೆ. ಜೊತೆಗೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು. 

ನಿತ್ಯವೂ ಸಂತರಿಂದ ಸಂದೇಶ:

ಶನಿವಾರ ಬೃಹತ್ ಗೀತೋತ್ಸವವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾರು ಉದ್ಘಾಟಿಸುತ್ತಾರೆ. ನಂತರ ಡಿ. 8ರವರೆಗೆ ಕನಕದಾಸ ಜಯಂತಿ, ಅಂತರಾಷ್ಟ್ರೀಯಯ ಗೀತಾ ಸಮ್ಮೇಳನ, ಶ್ರೀನಿವಾಸ ಕಲ್ಯಾಣ, 18 ಕುಂಡಗಳಲ್ಲಿ ಗೀತಾ ಮಹಾಯಾಗ, ಗೀತಾ ಜಯಂತಿ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಿತ್ಯವೂ ಆಯೋಜಿಸಲಾಗಿದೆ. ಪ್ರತಿದಿನ ನಾಡಿನಾದ್ಯಂತದಿಂದ ಸಾಧು ಸಂತರು ಆಗಮಿಸಿ ಸಂದೇಶ ನೀಡಲಿದ್ದಾರೆ. ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಶ್ರೀಗಳು ಹೇಳಿದರು.ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. 

ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸ್ವಾಗತಿಸಿದರು, ದಿವಾನರಾದ ನಾಗರಾಜ ಆಚಾರ್ಯ ಮತ್ತು ಗೀತೋತ್ಸವದ ಸಂಯೋಜಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು, ಸಾಂಸ್ಕೃತಿಕ ಸಂಯೋಜಕ ರಮೇಶ್ ಭಟ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌