ಉಡುಪಿ: ಇನ್ನೂ 4 ದಿನ ರೆಡ್‌ ಅಲರ್ಟ್, ನದಿಗಳಲ್ಲಿ ಪ್ರವಾಹದ ಆತಂಕ

KannadaprabhaNewsNetwork |  
Published : May 27, 2025, 01:05 AM IST
26ಮಲ್ಪೆ | Kannada Prabha

ಸಾರಾಂಶ

ಭಾರತೀಯ ಹವಾಮಾನ ಇಲಾಖೆ ಮೇ 30ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ರೆಡ್‌ ಅಲರ್ಟ್ ಮುಂದುವರಿಸಿದೆ. ಸಮುದ್ರ ತೀರದಲ್ಲಿ ಗಂಟೆಗೆ 45- 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಮಳೆಗೆ ಜಿಲ್ಲೆಯಲ್ಲಿ 17ಕ್ಕೂ ಹೆಚ್ಚು ಮನೆಗಳಿಗೆ, ಒಂದು ಅಡಕೆ ತೋಟಕ್ಕೆ ಹಾನಿಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯಲ್ಲಿ ಸೋಮವಾರವೂ ಭಾರಿ ಮಳೆಯಾಗಿದೆ. ದಿನವಿಡಿ ಬಿಡದೇ ಸುರಿದ ಮಳೆಗೆ ನದಿಗಳಲ್ಲಿ ನೀರು ತುಂಬಿದ್ದು, ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರವಾಹದ ಉಂಟಾಗಿದೆ. ಇನ್ನೂ 4 ದಿನ ರೆಡ್ ಅಲರ್ಟ್ ಘೋಷಿಸಿರುವುದರಿಂದ, ನದಿ ಪಾತ್ರಗಳಲ್ಲಿ ಪ್ರವಾಹದ ಪರಿಸ್ಥಿತಿ ಜನರ ಆತಂಕಕ್ಕೆ ಕಾರಣವಾಗಿದೆ.ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 65.40 ಮಿ.ಮೀ. ಮಳೆಯಾಗಿದೆ. ಜೊತೆಗೆ ಗಾಳಿ ಮಳೆಯಿಂದ ಜಿಲ್ಲೆಯಲ್ಲಿ 17ಕ್ಕೂ ಹೆಚ್ಚು ಮನೆಗಳಿಗೆ, ಒಂದು ಅಡಕೆ ತೋಟಕ್ಕೆ ಗಣನೀಯ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ಭಾರತೀಯ ಹವಾಮಾನ ಇಲಾಖೆ ಮೇ 30ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ರೆಡ್‌ ಅಲರ್ಟ್ ಮುಂದುವರಿಸಿದೆ. ಸಮುದ್ರ ತೀರದಲ್ಲಿ ಗಂಟೆಗೆ 45- 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.ಗಾಳಿ ಮಳೆಗೆ ಮರಗಳು ಉರುಳಿ ಬಿದ್ದು, ಕಾಪು ತಾಲೂಕಿನ ನಡ್ಪಾಲು ಗ್ರಾಮದಲ್ಲಿ ಭಾನು ಅವರ ಮನೆಗೆ 10,000 ರು., ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಶರಾವತಿ ಅವರ ಮನೆಗೆ 20,000 ರು., ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಗುಲಾಬಿ ಬಾಬು ಅವರ ಮನೆಗೆ 15,000, ಕೊರ್ಗಿ ಗ್ರಾಮದ ಗಿರಿಜಾ ಬಾಬು ಅವರ ಮನೆಗೆ 10,000 ರು., ಉಡುಪಿ ತಾಲೂಕಿನ ಕಡೆಕಾರು ಗ್ರಾಮದ ರುಕ್ಮಿಣಿ ಶೆಟ್ಟಿ ಅವರ ಮನೆಗೆ 50,000 ರು. ನಷ್ಟು ನಷ್ಟ ಸಂಭವಿಸಿದೆ.ಅಲ್ಲದೇ ಬೈಂದೂರು ತಾಲೂಕಿನ ಶೀರೂರು ಗ್ರಾಮದ ಬಿ.ಬಿ. ಐಶಾ ಅವರ ಮನೆಗೆ ಗಾಳಿ ಮಳೆಯಿಂದ 50,000 ರು., ಬ್ರಹ್ಮಾವರ ತಾಲೂಕಿನ ಕೆಂಜೂರು ಗ್ರಾಮದ ಮೋಹನ ನಾಯ್ಕ ಅವರ ಮನೆಗೆ 10,000 ರು., ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಗ್ರಾಮದ ಕೂಸು ಹಾಂಡ್ತಿ ಅವರ ಮನೆಗೆ 10,000 ರು., ಪಾರಂಪಳ್ಳಿ ಗ್ರಾಮದ ಗಿರಿಜಾ ಸೀತಾರಾಮ ಅವರ ಮನೆಗೆ 20,000 ರು., ವಡ್ಡರ್ಸೆ ಗ್ರಾಮದ ನಾಗರತ್ನ ಅವರ ಮನೆಗೆ 20,000 ರು., ಪಾರಂಪಳ್ಳಿ ಗ್ರಾಮದ ವಸುಮತಿ ಕೃಷ್ಣ ಅವರ ಮನೆಗೆ 10,000 ರು., ಬಸವ ಅವರ ಮನೆಗೆ 10,000 ರು., ಪಾಂಡೇಶ್ವರ ಗ್ರಾಮದ ಮುತಕ್ಕ ಅವರ ಮನೆಗೆ 15,000 ರು., ಚೇರ್ಕಾಡಿ ಗ್ರಾಮದ ಮಂಜುನಾಥ ಅವರ ಮನೆಗೆ 20,000 ರು, ಹನೇಹಳ್ಳಿ ಗ್ರಾಮದ ಬೇಬಿ ಪೂಜಾರ್ತಿ ಅವರ ಮನೆಗೆ 10,000 ರು., ಕುದಿ ಗ್ರಾಮದ ಸೀತಾರಾಮ್ ಶೆಟ್ಟಿ ಅವರ ಮನೆಗೆ 10,000 ರು. ನಷ್ಟವಾಗಿದೆ.ಬೈಂದೂರು ತಾಲೂಕಿನ ಉಳ್ಳೂರು ಗ್ರಾಮದ ತುಂಗಾ ಗಾಣಿಗ ಅವರ ಅಡಕೆ ತೋಟಕ್ಕೆ ಗಾಳಿ ಮಳೆಯಿಂದ ಸುಮಾರು 18,000 ರು. ನಷ್ಟ ಅಂದಾಜಿಸಲಾಗಿದೆ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಅಶೋಕ್ ಕುಮಾರ್ ಅವರ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು 80,000 ರು.ಗಳಷ್ಟು ಹಾನಿ ಸಂಭವಿಸಿದೆ.

-----------------ರಾ.ಹೆದ್ದಾರಿಯೋ ಕಂಬಳ ಗದ್ದೆಯೋ?

ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲಾದ್ಯಂತ ಲೋಕೋಪಯೋಗಿ ರಸ್ತೆಗಳು ಮತ್ತು ಗ್ರಾಮೀಣ ಭಾಗದ ರಸ್ತೆಗಳಲ್ಲಿ ಭಾರಿ ಪ್ರಮಾಣದ ಹೊಂಡಗುಂಡಿಗಳ‍ು ಸೃಷ್ಟಿಯಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಗಲಗೊಳ್ಳುತ್ತಿರುವ ಉಡುಪಿಯಿಂದ ಮಲ್ಪೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಂತೂ ಕಂಬಳ ಗದ್ದೆಯಂತಾಗಿದ್ದು, ಇದರಲ್ಲಿ ಸಂಚರಿಸುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಹೆದ್ದಾರಿ ಇಲಾಖೆಯ ಆಮೆಗತಿಯ ಕಾಮಗಾರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.-------------

2 ದಿನಗಳಲ್ಲಿ ಮೆಸ್ಕಾಂಗೆ 45 ಲಕ್ಷ ನಷ್ಟ

ಒಂದೇ ವಾರದ ತೂಫಾನ್ ಮಳೆಗೆ ಮೆಸ್ಕಾಂ ಇಲಾಖೆ ಭಾರಿ ನಷ್ಟ ಅನುಭವಿಸುತ್ತಿದೆ. ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿ ಗಾಳಿಯಿಂದ ಮರಗಳು ಉರುಳಿ ಬೀಳುತ್ತಿದ್ದು, ಇದರಿಂದ ಮೆಸ್ಕಾಂನ ವಿದ್ಯುತ್ ಕಂಬ ಮತ್ತು ತಂತಿಗೆ ಹಾನಿಯಾಗುತ್ತಿದೆ. ಕಳೆದರಡು ದಿನಗಳಲ್ಲಿಯೇ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿವೆ, 2 ಕಿ.ಮೀ. ಉದ್ದದಷ್ಟು ತಂತಿ ಕಡಿದಿದೆ ಮತ್ತು 5 ಟ್ರಾನ್ಸ್ ಫಾರ್ಮರ್‌ಗಳು ಸುಟ್ಟು ಹೋಗಿ ಇಲಾಖೆಗೆ ಸುಮಾರು 45 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ