ಉಡುಪಿ: ಇಲ್ಲಿನ ಬ್ರಹ್ಮಗಿರಿ ಸಮೀಪದ ನಾಯಕರೆಯ ಹಾಶಿಮಿ ಮಸೀದಿಯಲ್ಲಿ ಕೇಂದ್ರ ಸರ್ಕಾರದ ಎಸ್.ಐ.ಆರ್. ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಕಾರ್ಯಾಗಾರದಲ್ಲಿ ಪ್ರಾಧ್ಯಾಪಕ ಪ್ರೊ.ಫಣಿರಾಜ್ ಮಾತನಾಡಿ, “ಎಸ್.ಐ.ಆರ್ ಇಂದು ದೇಶದ ನಾಗರಿಕರ ಸಂವಿಧಾನಿಕ ಹಕ್ಕುಗಳ ಮೇಲೆ ಪ್ರಹಾರವಾಗಿದೆ. ಈ ದೇಶದಲ್ಲಿ ಮೊದಲ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ತಪ್ಪಿ ಹೋಗಬಾರದೆಂದು ಎಷ್ಟೇ ಸಮಸ್ಯೆಗಳಿದ್ದರೂ ಮತದಾರರನ್ನು ತಲುಪಿ ಮತದಾರರ ಪಟ್ಟಿ ಸಿದ್ಧಪಡಿಸಲಾಗಿತ್ತು. ಅದು ಚುನಾವಣಾ ಆಯೋಗದ ಕರ್ತವ್ಯ ಕೂಡ ಆಗಿತ್ತು. ಆದರೆ ಇವತ್ತು ಸ್ವತಃ ನಾವೇ ಅರ್ಹ ಮತದಾರರು ಎಂದು ಸಾಬೀತು ಪಡಿಸಬೇಕಾದ ಪರಿಸ್ಥಿತಿಯನ್ನು ನಿರ್ಮಿಸಲಾಗಿದ್ದು, ಇದು ಸಂವಿಧಾನ ಬಾಹಿರ ನಡೆ” ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ವಕೀಲರಾದ ಯಾಸೀನ್ ಕೋಡಿಬೆಂಗ್ರೆ ಹಾಗೂ ಕಾನೂನು ವಿದ್ಯಾರ್ಥಿ ಆಯಾನ್ ಮಲ್ಪೆ ಎಸ್.ಐ.ಆರ್. ಪ್ರಕ್ರಿಯೆ ಯಾವ ರೀತಿ ನಡೆಸಲಾಗುತ್ತದೆ. ಎಸ್.ಐ.ಅರ್. ಅರ್ಜಿ ಭರ್ತಿ ಮಾಡುವಿಕೆ, ದಾಖಲಾತಿಗಳ ವಿವರ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಹಾಶಿಮಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಝಕ್ರಿಯಾ ಅಸ್ಸಾದಿ, ಸಂಘಟಕರಾದ ಇಕ್ಬಾಲ್ ಮನ್ನಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.