)
ಉಡುಪಿ: ಉಡುಪಿಯ ಶ್ರೀ ಕೃಷ್ಣಾನುಗ್ರಹ ಕೇಂದ್ರದ ಆಶ್ರಯದಲ್ಲಿದ್ದ 3 ಮಂದಿ ಅನಾಥ ಮಕ್ಕಳನ್ನು ದತ್ತು ಸ್ವೀಕರಿಸಲು ಮುಂದೆ ಬಂದ ಪೋಷಕರಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ದತ್ತು ನೀಡಿದರು.ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯ್ದೆ 2021 ರ ಸೆಕ್ಷನ್ 56(1), 58 ಮತ್ತು 61 ರ ಅಡಿಯಲ್ಲಿ, ಈ ಮಕ್ಕಳನ್ನು ಬೆಂಗಳೂರು, ತೆಲಂಗಾಣ ಹಾಗೂ ಉಡುಪಿ ಜಿಲ್ಲೆಯ ದಂಪತಿಗಳಿಗೆ ಅಂತಿಮ ದತ್ತು ಆದೇಶವನ್ನು ಹಸ್ತಾಂತರಿಸುವ ಮೂಲಕ ದತ್ತು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ರಕ್ಷಣಾಧಿಕಾರಿಗಳಾದ ಸುರಕ್ಷಾ ಹಾಗೂ ಮಹೇಶ್ ದೇವಾಡಿಗ, ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರದ ವೃಂದಾ ಉಪಸ್ಥಿತರಿದ್ದರು.ದತ್ತು ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ (0820-2574964) ಅಥವಾ ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರ (9880442640)ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.ಮಮತೆಯ ತೊಟ್ಟಿಲುಗಳಿವೆ: ಯಾವುದೇ ಕಾರಣಕ್ಕೆ ಹೆತ್ತವರಿಗೆ ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಅಥವಾ ಪೊದೆ ಇತ್ಯಾದಿಗಳಲ್ಲಿ ಎಸೆಯದೇ, ಅಂತಹ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬೇಕು, ಉಡುಪಿಯ ಸಂತೆಕಟ್ಟೆಯ ಶ್ರೀ ಕೃಷ್ಣಾನುಗ್ರಹ ದತ್ತು ಕೇಂದ್ರ ಹಾಗೂ ನಗರದ ಬಿ.ಆರ್. ಶೆಟ್ಟಿ ಆಸ್ಪತ್ರೆಯಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು,