ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಯಕ್ಷಗಾನ ಕಲಾವಿದರ ಸಮಾವೇಶ 31ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಯಕ್ಷಗಾನ ಕಲಾವಿದರ ಸಮಾವೇಶ 31ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಮಾಹಿತಿ ನೀಡಿದ ಅವರು, ಅಂದು ಬೆಳಗಿನ ಕಾರ್ಯಕ್ರಮವು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಬೆಳಗ್ಗೆ 9 ರಿಂದ ಕಲಾವಿದರಿಗೆ ಕೆಎಂಸಿ ಮಣಿಪಾಲ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ. 10 ಗಂಟೆಗೆ ಕಾರ್ಯಕ್ರಮವನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಉದ್ಘಾಟಿಸುವರು. ಉದ್ಯಮಿ ಗೋಪಾಲ್ ಸಿ.ಬಂಗೇರಾ ಉಪಸ್ಥಿತರಿರುವರು ಎಂದರು. 10.30 ಕ್ಕೆ ಕೇರಳದ ತ್ರಿಶೂರ್ನ ಮಾಧವ ಮಾತೃ ಗ್ರಾಮಂ ಕೂಡಿಯಾಟ್ಟಂ ಗುರುಕುಲಂದ ಕಲಾವಿದರಿಂದ ಕೂಡಿಯಾಟ್ಟಂ ‘ಸೀತಾಪಹರಣಂ-ಜಟಾಯುವಧಂ’ ಪ್ರದರ್ಶನಗೊಳ್ಳಲಿದೆ. 11.30 ಕ್ಕೆ ಯಕ್ಷಗಾನ ಕಲಾವಿದರಿಗೆ ‘ಕಲೆ ಪೂರ್ಣಾವಧಿ ಉದ್ಯೋಗವಾಗಿರಬೇಕೆ..? ಉಪವೃತ್ತಿಯಾಗಿರಬೇಕೆ..?’ ವಿಷಯದ ಕುರಿತು ಚರ್ಚೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ನಡೆಯುವ ಸಮಾರೋಪದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಹಾಗು ಕಿರಿಯ ಶ್ರೀ ಸುಶೀಂಧ್ರತೀರ್ಥರು ಯಕ್ಷಗಾನ ಕಲಾರಂಗ ಸುವರ್ಣ ಪುರಸ್ಕಾರ ಪ್ರದಾನ ಮಾಡುವರು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಆರ್ಶೀವಚನ ನೀಡುವರು. ಉದ್ಯಮಿ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸುವರು. ಸುವರ್ಣ ಉಡುಗೊರೆ ವಿತರಣೆಯನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಹೆಚ್ಎಸ್ ಬಲ್ಲಾಳ್ ವಿತರಿಸುವರು ಎಂದರು.ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಲಿ, ಗುರುರಾಜ ಗಂಟಿಹೊಳೆ ಮತ್ತಿತರರು ಪಾಲ್ಗೊಳ್ಳುವರು ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಉಪಾಧ್ಯಕ್ಷ ಎಸ್.ವಿ.ಭಟ್, ಕೋಶಾಧಿಕಾರಿ ಸದಾಶಿವ ರಾವ್, ನಾರಾಯಣ ಎಂ.ಹೆಗಡೆ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.