ಕನ್ನಡಪ್ರಭ ವಾರ್ತೆ ಅರಸೀಕೆರೆ
ಗುರುವಾರ ರಾತ್ರಿ ಮಠಕ್ಕೆ ಆಗಮಿಸಿದ ಉಮೇಶ್ ಮೇಟಿ, ಮೊದಲು ಶಿವಲಿಂಗಜ್ಜಯ್ಯ ಹಾಗೂ ನೀಲಮ್ಮಜ್ಜಯ್ಯ ಅವರ ಗದ್ದುಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕೋಡಿಮಠದ ಪೀಠಾಧ್ಯಕ್ಷರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳಿಗೆ ರಜತ ಕಿರೀಟ ಧಾರಣೆ ಮಾಡುವ ಮೂಲಕ ಭಕ್ತಿಭಾವ ಸಮರ್ಪಿಸಿದರು.
ಮಠದಲ್ಲಿ ನಡೆದ ಭೇಟಿಯ ವೇಳೆ ಉಮೇಶ್ ಮೇಟಿ ಹಾಗೂ ಶ್ರೀಗಳ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಗೋಪ್ಯ ಸಮಾಲೋಚನೆ ನಡೆದಿರುವುದು ವಿಶೇಷ ಗಮನ ಸೆಳೆಯಿತು. ರಾಜಕೀಯವಾಗಿ ತಮ್ಮ ಮುಂದಿನ ನಡೆ, ಕ್ಷೇತ್ರದ ಅಭಿವೃದ್ಧಿ ಹಾಗೂ ಭವಿಷ್ಯದ ವಿಚಾರಗಳ ಕುರಿತು ಶ್ರೀಗಳ ಮಾರ್ಗದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಮಠದ ಮೂಲಗಳಿಂದ ತಿಳಿದುಬಂದಿದೆ.ಈ ಕುರಿತು ಮಾತನಾಡಿದ ಉಮೇಶ್ ಮೇಟಿ, “ಕೋಡಿಮಠ ಮತ್ತು ನಮ್ಮ ಕುಟುಂಬದ ನಡುವೆ ಹಲವು ದಶಕಗಳ ಅವಿನಾಭಾವ ಸಂಬಂಧವಿದೆ. ನನ್ನ ತಂದೆ-ತಾತಂದಿರ ಕಾಲದಿಂದಲೂ ಮಠದೊಂದಿಗೆ ನಮ್ಮ ಕುಟುಂಬ ಆಧ್ಯಾತ್ಮಿಕ ಬಾಂಧವ್ಯ ಹೊಂದಿದೆ. ವೈಯಕ್ತಿಕ ಜೀವನದಲ್ಲಿಯೂ, ರಾಜಕೀಯ ಜೀವನದಲ್ಲಿಯೂ ಶ್ರೀಗಳ ಸಲಹೆ-ಸೂಚನೆಗಳನ್ನು ಗೌರವದಿಂದ ಪಾಲಿಸುತ್ತಾ ಬಂದಿದ್ದೇವೆ. ಚುನಾವಣೆಯಲ್ಲಿ ಜನರು ನೀಡಿದ ಆಶೀರ್ವಾದದ ನಂತರ ಶ್ರೀಗಳ ಆಶೀರ್ವಾದ ಪಡೆಯುವುದು ನಮ್ಮ ಕುಟುಂಬದ ಸಂಪ್ರದಾಯ,” ಎಂದು ಹೇಳಿದರು.
*ಬಾಕ್ಸ್ ಐಟಂ:ಮೇಟಿ ಕುಟುಂಬದೊಂದಿಗೆ ಮಠದ ಬಾಂಧವ್ಯ ಹಳೆಯದು: ಕೋಡಿ ಶ್ರೀ