ಕನ್ನಡಪ್ರಭ ವಾರ್ತೆ ಪಾವಗಡ
ಪ್ರವಾಸಿ ಮಂದಿರದಿಂದ ಸಾಗಿದ ಹೋರಾಟಗಾರರು, ಚಳ್ಳಕರೆ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಕೇಂದ್ರದ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವವಹಿಸಿದ್ದ ಕಟ್ಟಡ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಕಾಮ್ರೇಡ್ ಉಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರನ್ನು ಸಂಪೂರ್ಣ ಗುಲಾಮರನ್ನಾಗಿಸಲು 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿದೆ. 4 ಕಾರ್ಮಿಕ ಸಂಹಿತೆಗಳನ್ನಾಗಿ ನವೆಂಬರ್ 21, 2025ರಂದು ಅಂತಿಮ ಪ್ರಕಟಣೆ ಹೊರಡಿಸಿದೆ. ಕಾರ್ಮಿಕ ಸಂಘಟನೆಗಳು ಜಾರಿ ಮಾಡಲು ಬಿಟ್ಟಿರಲಿಲ್ಲ. ಆದರೆ ಈಗ ಜಾರಿ ಮಾಡಲು ಮುಂದಾಗಿದೆ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಲಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ, ಕೃಷಿ,ಕಾರ್ಮಿಕ ಹಾಗೂ ದಲಿತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂಪಡೆಯಬೇಕು. ಕಾರ್ಮಿಕರಿಗೆ ಹೆಚ್ಚಿನ ಅದ್ಯತೆ ನೀಡುವ ಮೂಲಕ ಉದ್ಯೋಗ ಕಾಯಂ ಸೇರಿದಂತೆ ವಿಶೇಷ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ತಾಲೂಕು ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಸುಶೀಲಮ್ಮ, ಕಾರ್ಯದರ್ಶಿ ಶಿವಗಂಗಮ್ಮ, ಗುಲ್ಜಾರ್ ಭಾನು, ಬಿಸಿಯೂಟ ಸಂಘಟನೆ ಅಧ್ಯಕ್ಷೆ ಕೆಂಚಮ್ಮ, ಕಾರ್ಯದರ್ಶಿ ನಾಗರತ್ನಮ್ಮ, ಸಿಐಟಿಯು ಮುಖಂಡ ಒ.ನಾಗರಾಜ್, ಎಐಟಿಸಿ ಅಧ್ಯಕ್ಷ ರಾಮಕೃಷ್ಣಪ್ಪ, ದಲಿತ ಮುಖಂಡ ನಾರಾಯಣಪ್ಪ, ಎಪಿಎಂಸಿ ಹಮಾಲಿ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡರಾದ ರಾಮಾಂಜಿನಪ್ಪ, ಕಾರ್ಯದರ್ಶಿ ಎನ್.ರಾಮಾಂಜಿನಪ್ಪ, ಗ್ರಾಪಂ ಸದಸ್ಯ ಸುಬ್ಬರಾಯಪ್ಪ, ಬಸ್ ಸ್ಟ್ಯಾಂಡ್ ಹಮಾಲಿ ಸಂಘದ ಅಧ್ಯಕ್ಷ ಮದ್ಲೇಟಪ್ಪ, ಕಾರ್ಯದರ್ಶಿ ಗಂಗಾಧರ್ ಹಾಗೂ ಭಗತ್ ಸೇನೆ ಇತರೆ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.