ಕನ್ನಡಪ್ರಭ ವಾರ್ತೆ ಮೈಸೂರು
ಕ್ರಾಫರ್ಡ್ ಭವನದಲ್ಲಿ ಬುಧವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಮೈಸೂರು ವಿವಿಯ ಗಣಕ ವಿಜ್ಞಾನ ಅಧ್ಯಯನ ವಿಭಾಗ, ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗ, ಗಣಿತಶಾಸ್ತ್ರ ಅಧ್ಯಯನ ವಿಭಾಗ, ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ, ಭೌತಶಾಸ್ತ್ರ ಅಧ್ಯಯನ ವಿಭಾಗ ಮತ್ತು ಜೆನೆಟಿಕ್ಸ್ ಅಂಡ್ ಜೆನೋಮಿಕ್ಸ್ ಅಧ್ಯಯನ ವಿಭಾಗದಲ್ಲಿ ಪ್ರಸ್ತುತ ಫ್ಲೆಕ್ಸಿಬಲ್ ಚಾಯ್ಸ್ಬೇಸ್ಡ್ ಕ್ರೆಡಿಟ್ ಸಿಸ್ಟಮ್ (ಎಫ್.ಸಿ.ಬಿ.ಸಿ.ಎಸ್) ಜಾರಿಯಲ್ಲಿದ್ದು, ಅದನ್ನು ಸಿಬಿಸಿಎಸ್ ಗೆ ಬದಲಿಸಿ ಏಕರೂಪದ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು.
ಆದರೆ, ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಯಿತು. ನಾವು ಎಫ್.ಸಿ.ಬಿಸಿ.ಎಸ್ ಮಾದರಿಯಲ್ಲಿಯೇ ಪಾಠ ಪ್ರವಚನ ನಡೆಸುತ್ತೇವೆ. ಆದರೆ, ಪರೀಕ್ಷೆಯನ್ನು ಬೇಕಿದ್ದರೆ ಕೇಂದ್ರೀಕೃತಗೊಳಿಸಿ ಎಂದರು.ಆದರೆ, ಇತರೆ ಸದಸ್ಯರು ಏಕರೂಪ ವ್ಯವಸ್ಥೆಗೆ ವಿವಿ ತೀರ್ಮಾನಿಸಿರುವುದರಿಂದ ತಾವೂ ಕೂಡ ಸಿಬಿಸಿಎಸ್ ಮಾದರಿಯನ್ನೇ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಅಂತಿಮವಾಗಿ ಕುಲಸಚಿವ ನಾಗರಾಜ್ ಅವರ ಮಧ್ಯಪ್ರವೇಶದಿಂದ ಎಂಕಾಂ ಫೈನಾನ್ಷಿಯ್ ಸರ್ವೀಸ್ ವಿಭಾಗ ಹೊರತುಪಡಿಸಿ ಉಳೆದೆಲ್ಲಾ ವಿಭಾಗಕ್ಕೂ ಸಿಬಿಸಿಎಸ್ ಅಳವಡಿಸಲು ತೀರ್ಮಾನಿಸಲಾಯಿತು.
ವಿವಿಯ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ರಾಜ್ಯ ಸರ್ಕಾರ 50 ಕೋಟಿ ರು. ನೀಡಿದೆ. ಅದರಂತೆ ಕಳೆದ ತಿಂಗಳವರೆಗೂ ನಾವು ಪಿಂಚಣಿ ನೀಡಿದ್ದೇವೆ. 50 ಕೋಟಿಯನ್ನು ನಾಲ್ಕು ಕಂತುಗಳಲ್ಲಿ ಸರ್ಕಾರ ನೀಡುತ್ತದೆ. ಈಗಾಗಲೇ ಮೂರು ಕಂತಿನ ಹಣ ಬಂದಿದೆ. ನಮಗೆ ಅಗತ್ಯ ಇದ್ದದ್ದು 157 ಕೋಟಿ ರು. ಉಳಿಕೆ ಹಣವನ್ನು ವಿವಿಯಿಂದಲೇ ಭರಿಸಬೇಕಾಗುತ್ತದೆ. ಅಲ್ಲದೇ, ಸರ್ಕಾರಕ್ಕೆ ಮತ್ತಷ್ಟು ವಾಸ್ತವಾಂಶ ಮನವರಿಕೆ ಮಾಡಿಕೊಡುವುದಾಗಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ಇದಕ್ಕೂ ಮುನ್ನ ವಾಣಿಜ್ಯ ನಿಕಾಯದ ವಿಶೇಷ ಕಾರ್ಯಕ್ರಮಗಳ ಅಧ್ಯಯನ ಮಂಡಳಿಯ ಶಿಫಾರಸ್ಸುಗಳಿಗೆ ವಿದ್ಯಾವಿಷಯಕ ಪರಿಷತ್ ಸಭೆಯ ಅನುಮೋದನೆ, ಮೈಸೂರು ವಿವಿ 2024-25ನೇ ಸಾಲಿನ ವಾರ್ಷಿಕ ವರದಿಯ ಪರಿಶೀಲನೆ ಹಾಗೂ ಅನುಮೋದನೆ, 2024- 25ನೇ ಸಾಲಿನ ವಿವಿಯ ವಾರ್ಷಿಕ ಲೆಕ್ಕ ಪತ್ರಗಳು, 2022-23ನೇ ಸಾಲಿನ ವಿವಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯ ಆಕ್ಷೇಪಣೆಗಳಿಗೆ ಅನುಪಾಲನ ವರದಿಗೆ ಅನುಮೋದನೆ ನೀಡಲಾಯಿತು.