ಗಡಿ ಭಾಗದಲ್ಲಿ ಈ ಶಾಲೆ ಬಗ್ಗೆ ಬೆಂಗಳೂರಿನ ಶ್ರೀ ಬಾಲ ಭೈರವೇಶ್ವರ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅರವಿಂದ್ ರಾಘವನ್ ಅವರ ಬಳಿ ಚರ್ಚಿಸಲಾಗಿದೆ. ಶಿಕ್ಷಕರು ಹಾಗೂ ಗ್ರಾಮದ ಮುಖಂಡರು, ಪೋಷಕರು ಗಮನ ಹರಿಸಿ ಶಾಲೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಗಡಿ ಭಾಗ ಹೆಗ್ಗಡಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ದಾನಿಗಳ ಅನುದಾನದಿಂದ ಸಮವಸ್ತ್ರ, ಪಠ್ಯಪುಸ್ತಕ, ಆಟಿಕೆಗಳನ್ನು ನೀಡಲಾಯಿತು.
ಗ್ರಾಮದ ಸ್ವಾಮಿ ವಿವೇಕಾನಂದರ ರಂಗಮಂದಿರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಂಪೇಗೌಡ ಪತ್ತಿನ ಸಹಕಾರ ಸಂಘ, ಜನತಾ ಬಂಡಾರ ಮಾಲೀಕ ರಾಮಕೃಷ್ಣೇಗೌಡ, ಯುವ ಮುಖಂಡ ಚೇತನ್ ಅವರು ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳು ಹಾಗೂ ಆಟಿಕೆಗಳನ್ನು ನೀಡಿದರು.
ಸರ್ಕಾರಿ ಶಾಲೆಯಲ್ಲಿ ಎಲ್ ಕೆ ಜಿ ಹಾಗೂ ಯುಕೆಜಿ ಕ್ಲಾಸ್ ಗಳನ್ನು ಪ್ರಾರಂಭಿಸಲಾಗಿದೆ. ಪೋಷಕರಿಗೆ ಆರ್ಥಿಕವಾಗಿ ಹೊರೆಯಾಗಬಾರದು ಎಂದು ದಾನಿಗಳಿಂದ ಸಮವಸ್ತ್ರ, ಪಠ್ಯ ಪುಸ್ತಕ, ಅಟಿಕೆಗಳನ್ನು ಕೊಡಿಸಲಾಗುತ್ತಿದೆ ಎಂದು ಶಾಲೆ ಶಿಕ್ಷಕರು ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಗಡಿ ಭಾಗದಲ್ಲಿ ಈ ಶಾಲೆ ಬಗ್ಗೆ ಬೆಂಗಳೂರಿನ ಶ್ರೀ ಬಾಲ ಭೈರವೇಶ್ವರ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅರವಿಂದ್ ರಾಘವನ್ ಅವರ ಬಳಿ ಚರ್ಚಿಸಲಾಗಿದೆ. ಶಿಕ್ಷಕರು ಹಾಗೂ ಗ್ರಾಮದ ಮುಖಂಡರು, ಪೋಷಕರು ಗಮನ ಹರಿಸಿ ಶಾಲೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಈಗಾಗಲೇ ಅರವಿಂದ್ ರಾಘವನ್ ಅವರು ಹಲವು ಗ್ರಾಮಸ್ಥರಿಂದ ₹100 ಗಿಂತ ಹೆಚ್ಚಿನ ಹಣ ಸಂಗ್ರಹಣೆ ಮಾಡುವ ಅಭಿಯಾನ ಪ್ರಾರಂಭಿಸಿದ್ದಾರೆ. ಅದರಂತೆ ನಿಮ್ಮ ಗ್ರಾಮದಲ್ಲೂ ಹಣ ಸಂಗ್ರಹಣೆ ಅಭಿಯಾನ ಈ ಕ್ಷಣದಿಂದಲೇ ಪ್ರಾರಂಭಿಸಿ ಎಷ್ಟು ಹಣ ಸಂಗ್ರಹವಾಗುತ್ತದೆ ಎಂದು ತಿಳಿಸಿದರೆ ಅದನ್ನು ಅರವಿಂದ್ ರಾಘವನ್ ಅವರಿಗೆ ತಿಳಿಸಿ ಅಷ್ಟೇ ಮೊತ್ತದ ಹಣವನ್ನು ಸೇರಿಸಿ ನಿಮ್ಮ ಶಾಲೆ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ಗ್ರಾಮದ ಮುಖಂಡರು, ಶಾಲೆ ಶಿಕ್ಷಕರು, ಪೋಷಕರು ₹2,000 ₹1,000, ₹500ರಂತೆ ಹಣ ಸಂಗ್ರಹಣೆ ಮಾಡಿ ಸ್ಥಳದಲ್ಲೇ ₹40,000ಕ್ಕೂ ಹೆಚ್ಚಿನ ಹಣ ಸಂಗ್ರಹಣೆ ಮಾಡಿ ಅರವಿಂದ್ ರಾಘವನ್ ಅವರಿಗೆ ವಿಡಿಯೋ ಕರೆ ಮೂಲಕ ಶಾಲೆ ಅಭಿವೃದ್ಧಿ ಬಗ್ಗೆ ತಿಳಿಸಿ, ಶಾಲೆಗೆ ಭೇಟಿ ನೀಡಲು ಮನವಿ ಮಾಡಿದರು.
ಸಮಾಜ ಸೇವಕ ದೀಪು ಮಾತನಾಡಿದರು. ಮುಖ್ಯ ಶಿಕ್ಷಕ ಯೋಗ ನರಸಿಂಹೇಗೌಡ, ಶಿಕ್ಷಕರಾದ ಮುತ್ತಮ್ಮ, ಪುರುಷೋತ್ತಮ, ರಶ್ಮಿ, ಎಲ್ ಕೆಜಿ, ಯುಕೆಜಿ ಶಿಕ್ಷಕಿ ಕೀರ್ತನ, ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಮಾಲಾ, ಮುಖಂಡರಾದ ಉಮೇಶ್, ಪ್ರತಾಪ್, ಚಿನ್ಮಯ್ ಗೌಡ, ಪೋಷಕರಾದ ಸುಜಾತ, ಯಮುನಾ, ರಜಿನಿ, ಲಾವಣ್ಯ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.