)
ರಾಮನಗರ: ಮೇಕೆದಾಟು ಅಣೆಕಟ್ಟೆ, ರೈಲ್ವೆ ಯೋಜನೆ, ಟ್ರಾಮಾ ಸೆಂಟರ್, ಇಎಸ್ಐ ಆಸ್ಪತ್ರೆ, ರೇಷ್ಮೆ ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತಿ ಜರೂರಾಗಿ ಆಗಬೇಕಾಗಿದ್ದ ಯಾವೊಂದು ಯೋಜನೆಗಳ ಬಗ್ಗೆಯೂ ಪ್ರಸ್ತಾಪ ಮಾಡದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಭಾನುವಾರ ಮಂಡಿಸಿದ ಕೇಂದ್ರ ಬಜೆಟ್ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.
ಕಳೆದ ಏಳು ವರ್ಷಗಳಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ತಡೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿ ಅಡ್ಡಗಾಲು ಹಾಕಿತ್ತು. ಕೊನೆಗೂ ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿರುವುದು ಮೇಕೆದಾಟು ಯೋಜನೆ ಮುಂದುವರಿಸಲು ಹಸಿರು ನಿಶಾನೆ ಸಿಕ್ಕಿದಂತಾಗಿದೆ. ಈ ಬಾರಿಯ ಬಜೆಟ್ ನಲ್ಲೂ ಯೋಜನೆ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.
ಬೆಂಗಳೂರಿನ ಹೆಜ್ಜಾಲ-ಚಾಮರಾಜನಗರಕ್ಕೆ ರೈಲು ಮಾರ್ಗ ಸೃಜಿಸಬೇಕೆಂಬುದು ಎರಡೂವರೆ ದಶಕಗಳ ಬೇಡಿಕೆಯಾಗಿದೆ. ಈ ರೈಲು ಮಾರ್ಗ ಹಾರೋಹಳ್ಳಿ ಮತ್ತು ಕನಕಪುರದ ಮೂಲಕ ಹಾದುಹೋಗಲಿದೆ. ಕೇಂದ್ರ ಸರ್ಕಾರ ಈ ಬಾರಿಯೂ ಅದರತ್ತ ಗಮನ ಹರಿಸಿಲ್ಲ.ಇತ್ತೀಚೆಗೆ ರಾಮನಗರ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ವೇಳೆ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರವರು ಹೆಜ್ಜಾಲದಿಂದ ಚಾಮರಾಜನಗರಕ್ಕೆ ರೇಲ್ವೆ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಭೂಮಿ ಒದಗಿಸಿದರೆ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಈ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.
ರೇಷ್ಮೆ ಕೃಷಿ ಕಡಗಣನೆ:ಜವಳಿ ಉದ್ಯಮದ ಬಗ್ಗೆ ಗಮನ ಹರಿಸಿರುವ ವಿತ್ತ ಸಚಿವರು, ಜಿಲ್ಲೆಯ ಆರ್ಥಿಕ ಚಟುವಟಿಕೆಗೆ ಕೊಡುಗೆ ನೀಡುತ್ತಿರುವ ರೇಷ್ಮೆ ಕೃಷಿ ಮತ್ತು ಉದ್ಯಮದ ಉದ್ಯಮದ ಬಗ್ಗೆ ಗಮನ ಹರಿಸದಿರುವುದು ರೀಲರ್ಸ್ಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ತೆಂಗು ಕೃಷಿಗೆ ಪ್ರೋತ್ಸಾಹ ಘೋಷಿಸಿದೆ. ಆದರೆ, ಜಿಲ್ಲೆಯ ಮಟ್ಟಿಗೆ ಬಹುಮುಖ್ಯವಾದ ಆರ್ಥಿಕ ಬೆಳೆಯಾದ ಮಾವಿಗೆ ಯಾವ ಆದ್ಯತೆಯನ್ನು ನೀಡಿಲ್ಲ.ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಕಾಫಿ ಮತ್ತು ಸ್ಪೈಸಸ್ ಬೋರ್ಡ್ ಮಾದರಿಯಲ್ಲೇ ಶ್ರೀಗಂಧದ ಬೋರ್ಡ್ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದ್ದರು. ಶ್ರೀಗಂಧದ ಬೆಳೆ ಹೆಚ್ಚಿಸಲು ರಾಜ್ಯ ಸರ್ಕಾರಗಳೊಂದಿಗೆ ಕ್ರಮ ವಹಿಸಲಾಗುತ್ತದೆ ಎಂದು ವಿತ್ತ ಸಚಿವ ನಿರ್ಮಲಾ ಸೀತರಾಮನ್ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ತನ್ನ ಆಯವ್ಯಯದಲ್ಲಿ ಕೃಷಿ ಕ್ಷೇತ್ರಕ್ಕೆ 1.62 ಲಕ್ಷ ಕೋಟಿ ರುಪಾಯಿ ಮಾತ್ರ ಮೀಸಲಿಟ್ಟಿದೆ. ಬಹುಸಂಖ್ಯಾತ ರೈತರಿಗೆ ಕೊಟ್ಟಿರುವುದು ಅಲ್ಪಮೊತ್ತವಾಗಿದೆ. ರೈತರಿಗೆ ಆರ್ಥಿಕ ಭದ್ರತೆಯ ಬಗ್ಗೆ ಈ ಆಯವ್ಯಯ ವಿಶ್ವಾಸ ಮೂಡಿಸಿಲ್ಲ. ರೈತರ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ. ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಯ ಬಗ್ಗೆಯೂ ವಿಶ್ವಾಸ ವಿತ್ತು. ಅದು ಕೂಡ ಹುಸಿಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸೇರಿದಂತೆ ಹಲವೆಡೆ ಅಪಘಾತಗಳ ಸಂಖ್ಯೆ ಹೆಚ್ಚಿರುವ ಕಾರಣ ಟ್ರಾಮಾ ಸೆಂಟರ್ ಸ್ಥಾಪನೆ, ಕಾರ್ಮಿಕರ ಹಿತದೃಷ್ಟಿಯಿಂದ ಸುಸಜ್ಜಿತ ಇಎಸ್ ಐ ಆಸ್ಪತ್ರೆ ಅವಶ್ಯಕತೆ ಇತ್ತು. ಈ ಬಾರಿಯ ಬಜೆಟ್ ನಲ್ಲಿಯೂ ಅನುಮೋದನೆ ಸಿಕ್ಕಿಲ್ಲ.
ಕೋಟ್ .............ಕೇಂದ್ರ ಬಜೆಟ್ ನಿಂದ ರಾಜ್ಯಕ್ಕೆ ಯಾವ ಅನುಕೂಲವೂ ಆಗಿಲ್ಲ. ನಮ್ಮ ರಾಜ್ಯಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ. ಈಗೇನೋ ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಬದಲಾವಣೆ ವಾಪಸ್ ತೆಗೆದುಕೊಳ್ಳಲಿ. ಹಿಂದೆ ಯಾವ ಯೋಜನೆ ಇತ್ತೊ ಅದೇ ಯೋಜನೆ ಮುಂದುವರಿಯಲಿ. ಶೇಕಡ 60:40ರ ಅನುಪಾತ ಯಾವುದೇ ಕಾರಣಕ್ಕೂ ನಡೆಯಲ್ಲ. ಯಾವ ಸರ್ಕಾರವೂ ಬಂಡವಾಳ ಹಾಕಲು ಆಗುವುದಿಲ್ಲ.
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಗಳುಕೋಟ್ .........
ಕೇಂದ್ರ ಬಜೆಟ್ 2026–27 ತಂತ್ರಜ್ಞಾನ ಮತ್ತು ಉತ್ಪಾದನಾ ವಲಯಕ್ಕೆ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಹೆಚ್ಚುವರಿ ಹೂಡಿಕೆ, ಟೆಕ್ಸ್ಟ್ ಟೈಲ್ ಕ್ಷೇತ್ರಕ್ಕೆ ಸಮಗ್ರ ಕಾರ್ಯಕ್ರಮ, ಕೈಗಾರಿಕಾ ಕ್ಲಸ್ಟರ್ಗಳ ಅಭಿವೃದ್ಧಿ ಹಾಗೂ ಇಂಡಿಯನ್ ರೈಲ್ವೇಸ್ ಮೂಲಕ ಹೈ-ಸ್ಪೀಡ್ ರೈಲು ಕಾರಿಡಾರ್ಗಳಂತಹ ಮೂಲಸೌಕರ್ಯ ಯೋಜನೆಗಳು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗಲಿವೆ. ಆದರೆ, ಎಸ್ಎಸ್ಎಂಇ ಹಾಗೂ ಸಣ್ಣ ವ್ಯಾಪಾರಿಗಳಿಗೆ ನೇರ ತೆರಿಗೆ ರಿಯಾಯಿತಿ, ಸುಲಭ ಸಾಲ ಸೌಲಭ್ಯ ಮತ್ತು ತ್ವರಿತ ಹಣಕಾಸು ಬೆಂಬಲ ಇನ್ನಷ್ಟು ನೀಡಿದ್ದರೆ ನೆಲಮಟ್ಟದ ಉದ್ಯಮಿಗಳಿಗೆ ಹೆಚ್ಚು ಪ್ರಯೋಜನವಾಗುತ್ತಿತ್ತು. ಇದು ಅಭಿವೃದ್ಧಿ ಕೇಂದ್ರೀಕೃತ ಮತ್ತು ಭವಿಷ್ಯಮುಖಿ ಬಜೆಟ್ ಆಗಿದ್ದರೂ, ಸಣ್ಣ ಉದ್ಯಮಗಳಿಗೆ ಹೆಚ್ಚುವರಿ ಸಹಾಯ ಸಿಕ್ಕಿಲ್ಲ.- ಕೆ.ಎಸ್.ಪ್ರಶಾಂತ್ , ಕಾರ್ಯದರ್ಶಿ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ , ಬೆಂ.ದಕ್ಷಿಣ ಜಿಲ್ಲೆ.
ಕೋಟ್ ...............ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕಕ್ಕೆ ಮತ್ತೆ ನಿರಾಸೆ ಮೂಡಿಸಿದೆ. ರೈತ ಸಮುದಾಯಕ್ಕೆ ಕೇವಲ 1.62 ಲಕ್ಷ ಕೋಟಿ ಕೊಡುವ ಮೂಲಕ ಕನಿಷ್ಠ ಪರಿಗಣನೆ ಮಾಡಲಾಗಿದೆ. ಈ ಮೂಲಕ ದೇಶದ ರೈತರಿಗೆ ಬಜೆಟ್ ನಲ್ಲಿ ಯಾವುದೇ ಭದ್ರತೆಯ ಭರವಸೆ ನೀಡಿಲ್ಲ. ರೈತರ ಬಹುದಿನಗಳ ಹಕ್ಕೊತ್ತಾಯವಾಗಿದ್ದ ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಆಗಿಲ್ಲ. ಮೇಕೆದಾಟು ಅಣೆಕಟ್ಟು ಬಗ್ಗೆ ನಿರ್ಲಕ್ಷ ತೋರಲಾಗಿದೆ. ನೀರಾವರಿ ಯೋಜನೆಗೆ 5 ಸಾವಿರದ 300 ಕೋಟಿ ಕೊಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ ನಿರಾಸೆ ಮೂಡಿಸಿದೆ.
-ಕುಮಾರಸ್ವಾಮಿ, ರಾಜ್ಯ ಸಲಹೆಗಾರರು, ಜಯಕರ್ನಾಟಕ ಜನಪರ ವೇದಿಕೆ