ಹೊಸಪೇಟೆ: 2026-27ರ ಕೇಂದ್ರ ಬಜೆಟ್ ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಾಶಗೊಳಿಸಲು ರೂಪಿಸಿರುವ ಒಂದು ವಂಚನೆಯ ನೀಲನಕ್ಷೆ ಎಂದು ಎಐಡಿಎಸ್ಓ ತಿಳಿಸಿದೆ.
ಕೈಗಾರಿಕಾ ಸಂಯೋಜನೆಎಂಬ ಘೋಷಣೆಯು ಕಾರ್ಮಿಕರ ಮತ್ತು ರೈತರ ಮಕ್ಕಳಿಗೆ ಸಮಗ್ರ ಮತ್ತು ವೈಜ್ಞಾನಿಕ ಶಿಕ್ಷಣವನ್ನು ನಿರಾಕರಿಸಲು ರೂಪಿಸಿದ ಒಂದು ಕ್ರೂರ ಜಾಲವಾಗಿದೆ. ಇದು ಅಕಾಲಿಕ ವೃತ್ತಿಪರ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಅಗ್ಗದ ಮತ್ತು ಅರೆಕುಶಲ ಕಾರ್ಮಿಕರ ಗುಂಪಾಗಿ ಬಳಸಿಕೊಳ್ಳುವ ಹುನ್ನಾರವಾಗಿದೆ.
ನೇರ ಅನುದಾನದ ಬದಲಿಗೆ ‘ಸಾಲ ಆಧಾರಿತ ಧನಸಹಾಯಕ್ಕೆ ಬದಲಾಗುತ್ತಿರುವುದು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸುವ ಬದಲು ಐಷಾರಾಮಿ ವಸ್ತುವನ್ನಾಗಿ ಪರಿವರ್ತಿಸುವ ನೇರ ಪ್ರಯತ್ನವಾಗಿದೆ. ಇದು ಯುವಜನರನ್ನು ಕುಗ್ಗುತ್ತಿರುವ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲೇ ಅವರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತದೆ. ಎಐಡಿಎಸ್ಓ ಈ ಬಜೆಟ್ ನ್ನು ವಿದ್ಯಾರ್ಥಿ ಸಮುದಾಯದ ಭವಿಷ್ಯದ ಮೇಲಿನ ನೇರ ದಾಳಿ ಎಂದು ಪರಿಗಣಿಸುತ್ತದೆ. ಈ ಕಾರ್ಪೊರೇಟ್ ಪರ ನೀತಿಗಳನ್ನು ಸೋಲಿಸಲು ಹಾಗೂ ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣ ವ್ಯಾಪಾರೀಕರಣದಿಂದ ಉಳಿಸಲು ರಾಷ್ಟ್ರವ್ಯಾಪಿ ಸಂಘಟಿತ ಹೋರಾಟಕ್ಕೆ ಕರೆ ನೀಡುತ್ತದೆ ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಯು. ಉಮಾದೇವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.