ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಜಿಲ್ಲಾ ಮಟ್ಟದ ಸಭೆಯಲ್ಲಿ ಬಿಜೆಪಿಯ ಹಿಟ್ಲರ್ ಆಡಳಿತ ಮತ್ತು ಬೆದರಿಕೆಯಿಂದ ದೇಶದ ಕೋಟ್ಯಾಂತರ ಜನರು ತೊಂದರೆ ಅನುಭವಿಸುತ್ತಿದ್ದು, ಇಂತಹ ದುರಾಡಳಿತ ಕಿತ್ತೊಗೆಯಲು ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟದ ಬೃಹತ್ ಸಭೆ ನಡೆಸಲು ಒಮ್ಮತದಿಂದ ತೀರ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ಮಹಾರಾಷ್ಟ್ರದ ಅಜಿತ್ ಪವಾರ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರ ಇಡಿ, ಐಟಿ ಮೂಲಕ ಪ್ರಕರಣ ದಾಖಲಿಸಿ ಬೆದರಿಸಿ ತಮ್ಮ ಪಕ್ಷ ಸೇರಿಕೊಂಡು ಕ್ಲೀನ್ಚಿಟ್ ಕೊಡುವ ಕೆಲಸ ಮಾಡುತ್ತಿದೆ. ಆದರೆ ಅವರದೇ ಪಕ್ಷದ ಜಿ.ಎಂ.ಸಿದ್ದೇಶ್ವರ್ ಮಾಡಿದ ಅದಿರು ಪ್ರಕರಣ ಮತ್ತು ಹವಾಲಾ ಪ್ರಕರಣಗಳ ಮುಚ್ಚಿಹಾಕಿದೆ ಎಂದು ದೂರಿದರು.ಕಮ್ಯೂನಿಸ್ಟ್ ಪಕ್ಷದ ಮುಖಂಡರಾದ ಆನಂದರಾಜ್, ಉಮೇಶ್, ಆವರಗೆರೆ ಚಂದ್ರು, ಆವರಗೆರೆ ವಾಸು, ಹರಪನಹಳ್ಳಿ ಹಾಲೇಶ್, ನಾಗರಾಜಪ್ಪ, ರೈತ ಸಂಘದ ಪರಶುರಾಮ್, ಆಮ್ಆದ್ಮಿ ಪಕ್ಷದ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಎಸ್.ಎಲ್.ಆನಂದಪ್ಪ, ವಕೀಲರಾದ ಅನೀಶ್ ಪಾಷಾ, ಡಿಎಸ್ಎಸ್ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರದ ದುರಾಡಳಿತವನ್ನು ಉದಾಹರಣೆ ಸಹಿತ ವಿವರಿಸಿದರು.