ವಿಶೇಷ ಉಪನ್ಯಾಸ । ಪುಸ್ತಕ ಬಿಡುಗಡೆ ಕಾರ್ಯಕ್ರಮ
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಜನರ ವೈಯಕ್ತಿಕ ಬೆಳವಣಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲು, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯ ಸಮಾನವಾದ ಅವಕಾಶ ಕಲ್ಪಿಸಲು ಸಾರ್ವತ್ರಿಕ ಶಿಕ್ಷಣ ಅಗತ್ಯ ಎಂದು ಚಳ್ಳಕೆರೆಯ ಎಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪ್ರಕಾಶ್ ಸಿ.ಎಂ. ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮತ್ತು ಐಕ್ಯೂಎಸ್ಸಿ ಸಹಯೋಗದಲ್ಲಿ ಕಾಲೇಜಿನಲ್ಲಿ ಜರುಗಿದ ‘ಜಾಗತೀಕರಣ: ಮಹಿಳೆ ಮತ್ತು ಸಾಮಾಜಿಕ ನ್ಯಾಯ’ ಎಂಬ ವಿಶೇಷ ಉಪನ್ಯಾಸ ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ತಿಪ್ಪೇಸ್ವಾಮಿ ಅವರ ಹ್ಯಾಂಡ್ ಬುಕ್ ಆಫ್ ಎಜುಕೇಶನ್ ಅಂಡ್ ರಿಯ್ಯಾಬಿಟೇಷನ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಭಿವೃದ್ಧಿಯಾಗದ, ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ಆಯಾ ದೇಶದ ಜನಸಂಖ್ಯೆಗೆ ಒದಗಿಸಲಾಗುವ ಶಿಕ್ಷಣದ ಮಟ್ಟ ಮತ್ತು ಗುಣಮಟ್ಟವಾಗಿದೆ. ಶಿಕ್ಷಣವನ್ನು ಹಲವಾರು ದೇಶಗಳು ಮೂಲಭೂತ ಮಾನವ ಹಕ್ಕು ಎಂದು ಗುರುತಿಸಿವೆ. ಶಿಕ್ಷಣ ಮತ್ತು ದೇಶದ ಅಭಿವೃದ್ಧಿಯ ನಡುವೆ ನಿರಾಕರಿಸಲಾಗದ ಸಂಬಂಧವನ್ನು ಹೊಂದಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್.ಎಂ.ಎನ್., ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ.ಮಂಜುನಾಥ್, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ.ಕುಮಾರ್, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ತಿರುಮಲ ಎಸ್., ಐಕ್ಯೂಎಸ್ಸಿ ಸಹಸಂಯೋಜಕ ಅಬ್ದುಲ್ ಬಷೀರ, ದಾವಣಗೆರೆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಬೋಧನಾ ಸಹಾಯಕ ಡಾ.ರಾಮಚಂದ್ರಪ್ಪ ಎಸ್. ಉಪಸ್ಥಿತರಿದ್ದರು.