ಕನ್ನಡಪ್ರಭವಾರ್ತೆ
ಅಲ್ಲಮಪ್ರಭುವಿನ ವಚನಗಳಲ್ಲಿ ವಿಶ್ವಕುಟುಂಬದ ಪರಿಕಲ್ಪನೆಗಳಿವೆ ಎಂಧು ಪಟ್ಟಣದ ಸಂಗಮೇಶ್ವರ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕ ಶ್ರೀಕಾಂತ.ಎಚ್. ಹೊಸಮನಿ ಹೇಳಿದರು.ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮತ್ತು ಶಿವಾನುಭವ ಕಾರ್ಯಕ್ರಮದಲ್ಲಿ ಅಲ್ಲಮಪ್ರಭುವಿನ ಚಿಂತನೆಗಳು ವಿಷಯ ಕುರಿತು ಮಾತನಾಡಿ,, ಮಾನವೀಯ ಮೌಲ್ಯಗಳೊಂದಿಗೆ, ಸಮಾನತೆ, ಮಾನವೀಯತೆಯ ಅರಿವು ವಚನಗಳಲ್ಲಿ ಎದ್ದು ಕಾಣುತ್ತದೆ. ವಚನವನ್ನು ಪಚನ ಮಾಡಿಕೊಂಡಾಗ ಸಾರ್ಥಕತೆ ದೊರೆಯುತ್ತದೆ ಎಂದರು.ಸಾನ್ನಿಧ್ಯ ವಹಿಸಿ ಮಾತನಾಡಿದ ವಿಜಯಪುರದ ಪ್ರಶಾಂತ ದೇವರು, ಮಹಾಜ್ಞಾನಿ ಅಲ್ಲಮಪ್ರಭುವಿನ ವಚನಗಳಲ್ಲಿ ಬುದ್ಧನ ಅಹಿಂಸಾ ತತ್ವ ಎದ್ದು ಕಾಣುತ್ತದೆ. ಅವರ ವಿಚಾರಧಾರೆಯಲ್ಲಿ ಜಗತ್ತಿನ ಜ್ಞಾನವೇ ಅಡಗಿದ್ದು, ನಾವು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಸಂಗಮೇಶ್ವರ ಪಪೂ ಕಾಲೇಜಿನ ವಿಶ್ರಾಂತ ಉಪ ಪ್ರಾಚಾರ್ಯ ವಿ.ಎಂ. ವಸ್ತ್ರದ, ಉಪ ಪ್ರಾಚಾರ್ಯ ಆರ್.ಜಿ. ಸನ್ನಿ, ಕಾಲೇಜಿನ ಪ್ರಾಚಾರ್ಯ ಎಂ.ಎನ್. ವಂದಾಲ, ವಿಶ್ರಾಂತ ಮುಖ್ಯಶಿಕ್ಷಕ ಎಚ್.ಜಿ. ರಾಜೂರ, ಕಮತಗಿ ಸೇವಾಲಾಲ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಎ.ಹುಲ್ಲೀಕೇರಿ ಇತರರು ಇದ್ದರು.