ನಿರುದ್ಯೋಗ ನಿವಾರಣೆಗೆ ವಿವಿಗಳು ಪರಿಹಾರ ಕಂಡುಕೊಳ್ಳಲಿ: ಸಚಿವ ತಿಮ್ಮಾಪೂರ

KannadaprabhaNewsNetwork |  
Published : May 13, 2025, 01:18 AM IST
ಜಮಖಂಡಿ ನಗರದ ಬಾಗಲಕೋಟೆ ವಿವಿಯ ಸಂಸ್ಥಾಪನಾ ದಿನವನ್ನು ಸಚಿವ ತಿಮ್ಮಾಪೂರ ಉದ್ಘಾಟಿಸಿದರು.  | Kannada Prabha

ಸಾರಾಂಶ

ದೇಶದಲ್ಲಿ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ ವಿಶ್ವವಿದ್ಯಾಲಯಗಳು ಮಾರ್ಗೋಪಾಯ ಕಂಡುಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ದೇಶದಲ್ಲಿ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ ವಿಶ್ವವಿದ್ಯಾಲಯಗಳು ಮಾರ್ಗೋಪಾಯ ಕಂಡುಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಹೇಳಿದರು. ನಗರದಲ್ಲಿರುವ ಬಾಗಲಕೋಟೆ ವಿಶ್ವವಿದ್ಯಾಲಯದ 2ನೇ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿತು ಅನೇಕ ಯುವಕರು ಉದ್ಯೋಗ ವಿಲ್ಲದೆ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದಾರೆ. ಅಂಥವರಿಗಾಗಿ ವಿಶ್ವವಿದ್ಯಾಲಯಗಳು ಯೋಚಿಸಬೇಕು, ಮರ್ಯಾದಾ ಹತ್ಯೆ, ಮಕ್ಕಳಿಂದ ತಂದೆ-ತಾಯಿಗಳ ಹತ್ಯೆಯಂತಹ ಪ್ರಕರಣಗಳು ನಡೆಯಬಾರದು. ಅದಕ್ಕಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಂತಾಗಬೇಕು ಎಂದು ಹೇಳಿದರು.

ಜಾತಿ, ಧರ್ಮಕ್ಕೆ ವಿವಿಗಳು ಸೀಮಿತವಾಗಬಾರದು, ಈಗಿರುವ ಪರಿಸ್ಥಿತಿ ನೋಡಿದರೆ ದೇಶದ ಭವಿಷ್ಯದ ದಿನಗಳು ಹೇಗಿರಲಿವೆ ಎಂಬ ಚಿಂತೆ ಉಂಟಾಗುತ್ತದೆ. ಯುವಕರು ಕುಡಿತ, ಡ್ರಗ್ಸ್‌ ಸೇವನೆಯಂತಹ ಕೆಟ್ಟ ಚಟಗಳ ದಾಸರಾಗುತ್ತಿದ್ದಾರೆ. ಅದನ್ನು ನಿಯಂತ್ರಿಸುವಲ್ಲಿ ಪ್ರತಿಯೊಬ್ಬರು ತಮ್ಮ ಕೈಲಾದ ಸಹಕಾರ ನಿಡಬೇಕಿದೆ. ಮಕ್ಕಳಿಗೆ ಉತ್ತಮ ಮಾರ್ಗದರ್ಶನ, ಸಂಸ್ಕಾರ ನೀಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ವಿವಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ ಅವರು, ಸರ್ಕಾರಿ ಜಮೀನು ಇದ್ದರೆ ಹೇಳಿ ಅದನ್ನು ವಿವಿಗೆ ಹಸ್ತಾಂತರಿಸಲು ಎಲ್ಲ ರೀತಿಯಿಂದ ಪ್ರಯತ್ನ ಪಡುತ್ತೇನೆ. ಈ ಭಾಗದ ವಿವಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಶೇ.95ರಷ್ಟು ಪ.ಜಾತಿ. ಪ.ಪಂಗಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ವಿವಿಗೆ ಸರ್ಕಾರ ಸೂಕ್ತವಾದ ಅನುದಾನ ಬಿಡುಗಡೆ ಮಾಡಬೇಕು, ಜಮೀನು ನೀಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು, ವಿವಿಯ ಕುಲಪತಿಗಳಿಗೆ ವಾಹನ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು.

ಹಾಸನ ವಿವಿಯ ಕುಲಪತಿ ಡಾ.ತರಿಕೇರೆ ತಾರಾನಾಥ, ಹಾವೇರಿ ವಿವಿಯ ಕುಲಪತಿ ಸುರೇಶ ಜಂಗಮಶೆಟ್ಟಿ, ಕೊಪ್ಪಳ ವಿವಿಯ ಕುಲಪತಿ ಬಿ.ಕೆ. ರವಿ ವೇದಿಕೆಯಲ್ಲಿದ್ದರು.

ಕುಲಸಚಿವ ಡಾ. ದಯಾನಂದ ಸೌಕಾರ, ಸ್ವಾಗತಿಸಿದರು. ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಚಿದಾನಂದ ಢವಳೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಣಕಾಸು ಅಧಿಕಾರಿ ಡಾ.ಮಲ್ಲಿಕಾರ್ಜುನ ಮರಡಿ ವಂದಿಸಿದರು. ಅವರುಣ ಕುಮಾರ ಶಾ, ಸಂದೀಪ ಬೆಳಗಲಿ, ತಹಸೀಲ್ದಾರ ಸದಾಶಿವ ಮಕ್ಕೊಜಿ, ಸಿಂಡಿಕೇಟ್‌ ಸದಸ್ಯರು ,ಸಿಬ್ಬಂದಿ, ವಿದ್ಯಾರ್ಥಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿಶ್ವವಿದ್ಯಾಲಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಉಪನ್ಯಾಸಕರ ಬಳಗದಿಂದ ವಿದ್ಯಾರ್ಥಿಗಳ ಸರ್ವತೋನ್ಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಸೈಕ್ಲಿಂಗ್‌ ಮತ್ತು ಮಲ್ಲಕಂಬದ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ವಿವಿಗೆ ಗೌರವ ತಂದಿದ್ದಾರೆ. ವಿವಿಯಿಂದ ಸಂಶೋಧನೆಗೆ ಕ್ರಮ ಜರುಗಿಸಿದ್ದೇವೆ. 32 ಗೈಡ್‌ಗಳನ್ನು ಬರಮಾಡಿಕೊಂಡು ಸಂಶೋಧನೆಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ.

ಆನಂದ ದೇಶಪಾಂಡೆ ಬಾಗಲಕೋಟೆ ವಿವಿ ಕುಲಪತಿ

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್